ಚಂಪಾ ಸಿದ್ದರಾಮಯ್ಯನವರ ಚಮಚಾ ಎಂದ ಈಶ್ವರಪ್ಪ
Recommended Video
ಶಿವಮೊಗ್ಗ, ನವೆಂಬರ್ 27 : ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿರುದ್ಧ ರಾಜ್ಯ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಆರೋಪಿಸಿದರು.
ಚಂಪಾ ಅವರು ಬಾಯಿ ಬಿಟ್ಟರೆ ಉಚ್ಚೆಯ ವಾಸನೆ ಬರುತ್ತದೆ
ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಾಹಿತ್ಯ ಸಮ್ಮೇಳನ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿರುವ ಚಂಪಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಮಚಾ" ಎಂದು ಟೀಕಿಸಿದರು.
ಸಾಹಿತಿಗಳ ಕುಲಕ್ಕೆ ಚಂಪಾ ಅಪಮಾನ ಮಾಡಿದ್ದಾರೆ. ಸಮ್ಮೇಳನದ ವೇದಿಕೆಯಲ್ಲಿ ಸಲ್ಲದ ಮಾತುಗಳನ್ನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಪೇಜಾವರ ಸ್ವಾಮೀಜಿ, ಹಿಂದೂ ಧರ್ಮ, ಭಾರತ ಮಾತೆಯ ಬಗ್ಗೆ ಚಂಪಾ ಟೀಕೆ ಮಾಡಿದ್ದಾರೆ. ಜಾತ್ಯಾತೀತ ಪಕ್ಷಗಳಿಗೆ ಬೆಂಬಲ ನೀಡಿ ಎಂದು ಕರೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಇಂತಹ ಹೇಳಿಕೆ ನೀಡುವ ಮೂಲಕ ಚಂಪಾ ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿರುವಂತಿದೆ. ಅದಕ್ಕಾಗಿಯೇ ಅವರು ಹಿಂದೂ ಧರ್ಮವನ್ನು ಟೀಕಿಸಿದ್ದಾರೆ. ಸಮ್ಮೇಳನದ ಅಧ್ಯಕ್ಷರಾಗಲು ಅಯೋಗ್ಯರು ಎಂದು ಕಿಡಿ ಕಾರಿದರು.
ಸಮ್ಮೇಳನವನ್ನು ದುರುಪಯೋಗ ಮಾಡಿಕೊಂಡ ಚಂಪಾ ರಾಜ್ಯದ ಜನರ ಕ್ಷಮೆಯಾಚಿಸಬೇಕು. ರಾಜ್ಯದಲ್ಲಿ ಪ್ರಾಮಾಣಿಕ ಸಾಹಿತಿಗಳು ಬೇಕಾದಷ್ಟು ಮಂದಿ ಇದ್ದಾರೆ ಅವರು ಬುದ್ದಿ ಕಲಿಸುತ್ತಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಹಿಂದೂಗಳ ಕಗ್ಗೊಲೆ ನಡೆಯುತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಹಿಂದೂ ಮುಖಂಡರನ್ನು ಹತ್ಯೆಗೈದವರ ಮತ್ತು ಅವರಿಗೆ ಸಹಕಾರ ನೀಡಿದವರ ಬೆಂಬಲಕ್ಕೆ ಸರ್ಕಾರ ನಿಂತಿದೆ. ಹತ್ಯೆ ಪ್ರಕರಣಗಳಲ್ಲಿ ಆರೋಪ ಹೊತ್ತಿರುವ ಸಚಿವರಾದ ಕೆ.ಜೆ. ಜಾರ್ಜ್ ಹಾಗೂ ವಿನಯ್ ಕುಲಕರ್ಣಿ ಅವರ ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಂತಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದರು.