ಕೆಜೆಪಿ ಅಧ್ಯಕ್ಷ ಹುದ್ದೆ ಮುಗಿದ ಅಧ್ಯಾಯ : ಯಡಿಯೂರಪ್ಪ
ಶಿವಮೊಗ್ಗ, ಜ.6 : ಕೆಜೆಪಿ ಅಧ್ಯಕ್ಷ ಹುದ್ದೆಯದ್ದು ಮುಗಿದ ಅಧ್ಯಾಯ, ಕೆಜೆಪಿ-ಬಿಜೆಪಿ ವಿಲೀನಕ್ಕೆ ಅವಕಾಶ ನೀಡಬಾರದು ಎಂದು ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್ ಮನವಿ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಚುನಾವಣಾ ಆಯೋಗವೇ ತಾವು ಅಧ್ಯಕ್ಷ ಎಂದು ಸ್ಪಷ್ಟನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಜೆಪಿ ಅಧ್ಯಕ್ಷರು ಯಾರು ಎಂದು ಕೇಂದ್ರ ಚುನಾವಣಾ ಆಯೊಗವೇ ತೀರ್ಪು ನೀಡಿದೆ. ತಾವು ಕೆಜೆಪಿ ಅಧ್ಯಕ್ಷ ಎಂದು ಆಯೋಗ ನೀಡಿದ ದಾಖಲೆಗಳು ನಮ್ಮ ಬಳಿ ಇವೆ. ಆದ್ದರಿಂದ ಈ ಬಗ್ಗೆ ಈಗ ಯಾವುದೇ ಗೊಂದಲಗಳು ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಬಿಜೆಪಿ-ಕೆಜೆಪಿ ವಿಲೀನ ವಿರೋಧಿಸಿ ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ದೂರು ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇದೊಂದು ಮುಗಿದ ಅಧ್ಯಾಯವಾಗಿದ್ದು, ವಿಲೀನಗೊಳಿಸುವುದಕ್ಕೆ ಪ್ರಸನ್ನ ಪದ್ಮನಾಭ ಆಕ್ಷೇಪ ವ್ಯಕ್ತಪಡಿಸಿರುವುದರಲ್ಲಿ ಅರ್ಥವಿಲ್ಲ ಎಂದರು. [ಕೆಜೆಪಿ-ಬಿಜೆಪಿ ವಿಲೀನಕ್ಕೆ ಪ್ರಸನ್ನ ಕುಮಾರ್ ಅಡ್ಡಗಾಲು]
ರಾಜ್ಯದ ಎಲ್ಲ ವರ್ಗದ ಜನರ ಅಭಿಪ್ರಾಯ, ಅಪೇಕ್ಷೆಯಂತೆ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದೇನೆ. ಕೆಜೆಪಿಯನ್ನು ವಿಸರ್ಜನೆ ಮಾಡಿ, ಬಿಜೆಪಿಯಲ್ಲಿ ವಿಲೀನಗೊಳಿಸಲಾಗಿದೆ. ಕೆಜೆಪಿಯಿಂದ ಬಿಜೆಪಿಗೆ ವಾಪಸ್ ಆದ ಎಲ್ಲಾ ಬೆಂಬಲಿಗರಿಗೆ ಉತ್ತಮ ಸ್ಥಾನಮಾನ ದೊರೆಯಲಿದೆ ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಬಿಜೆಪಿಗೆ ಮರಳುವುದಿಲ್ಲ : ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳಿರಬಹುದು ಆದರೆ, ತಾವು ಪಕ್ಷಕ್ಕೆ ಮರಳುವುದಿಲ್ಲ ಎಂದು ಕೆಜೆಪಿ ಉಪಾಧ್ಯಕ್ಷ ಮತ್ತು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಯಡಿಯೂರಪ್ಪ ಅವರ ಮೇಲೆ ಗೌರವವಿದೆ. ಆದರೆ, ತಾವು ಪಕ್ಷಕ್ಕೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ನಿಲುವು ಏನೇ ಆಗಿರಬಹುದು. ಆದೆರೆ, ತಾವು ಮತ್ತು ತಮ್ಮ ಬೆಂಬಲಿಗರು ಬಿಜೆಪಿಗೆ ಮರಳುವುದಿಲ್ಲ. ಬೆಂಬಲಿಗರು ಮತ್ತು ಹಿತೈಷಿಗಳೊಂದಿಗೆ ಚರ್ಚೆ ಮಾಡಿ ಮುಂದಿನ ರಾಜಕೀಯ ನಿರ್ಧಾರವನ್ನು ಕೈಗೊಳ್ಳುತ್ತೇವೆ. ಆದರೆ, ಬಿಜೆಪಿಗೆ ಮರಳುವುದಿಲ್ಲ ಎಂದು ತಿಳಿಸಿದರು.