ಕರ್ನಾಟಕ ಚುನಾವಣೆ : ಸೊರಬ ಕ್ಷೇತ್ರದ ಸಮಸ್ಯೆಗಳು
ಶಿವಮೊಗ್ಗ, ಏಪ್ರಿಲ್ 30 : ಅಭಿವೃದ್ಧಿಗಾಗಿ ಕಾದು ಕುಳಿತ ರಸ್ತೆಗಳು, ಖಾಲಿ ಕೆರೆಗಳು, ಉದ್ಯಮ ಸ್ಥಾಪನೆಗೊಂಡರೆ ಉದ್ಯೋಗ ಸಿಗಲಿದೆ ಎಂಬ ನಿರೀಕ್ಷೆ...ಇದು ಸೊರಬ ಕ್ಷೇತ್ರದ ಚಿತ್ರಣ. ಸೊರಬ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ತವರು ಕ್ಷೇತ್ರ. ಆದರೆ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕು.
ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಬಿಸಿಲಿನ ಜೊತೆ ವಿಧಾನಸಭೆ ಚುನಾವಣೆ ಕಾವು ಏರ ತೊಡಗಿದೆ. ಒನ್ ಇಂಡಿಯಾ ಕನ್ನಡ ಕ್ಷೇತ್ರದ ಚುನಾವಣೆ ಬಗ್ಗೆ ಅಲ್ಲಿನ ಜನರ ಮಾಹಿತಿ ಸಂಗ್ರಹಿಸಿದೆ. ಭಾನುವಾರ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಮೂವರು ಅಭ್ಯರ್ಥಿಗಳ ಸಂದರ್ಶನ ನಡೆಸಿದೆ.
'ಇದು ಹೆಸರಿಗೆ ಮಾಜಿ ಮುಖ್ಯಮಂತ್ರಿಗಳ ತವರು ಕ್ಷೇತ್ರ. ಅಭಿವೃದ್ಧಿ ಹೇಗಿದೆ ನೀವು ನೋಡಿ. ಇಲ್ಲಿನ ಜನಪ್ರತಿನಿಧಿಗಳಿಗೆ ದೂರದೃಷ್ಟಿಯ ಅಗತ್ಯವಿದೆ. ಶಿವಮೊಗ್ಗ ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ಸೊರಬ ಇನ್ನೂ ಹಿಂದುಳಿದಿದೆ' ಎಂದರು ಸೊರಬದ ನಿವಾಸಿ ನೀಲಕಂಠ ಶೇಷಗಿರಿ.
ಸೊರಬ ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್ನ ಮಧು ಬಂಗಾರಪ್ಪ. 2018ರ ಚುನಾವಣೆಗೂ ಅವರೇ ಅಭ್ಯರ್ಥಿ. ಬಿಜೆಪಿಯಿಂದ ಕುಮಾರ್ ಬಂಗಾರಪ್ಪ, ಕಾಂಗ್ರೆಸ್ ಪಕ್ಷದಿಂದ ರಾಜು ತಲ್ಲೂರು ಅಭ್ಯರ್ಥಿಗಳು.
ಪ್ರವಾಸೋದ್ಯಮ ಅಭಿವೃದ್ಧಿ
ಸೊರಬದಲ್ಲಿ ಚಂದ್ರಗುತ್ತಿ ದೇವಸ್ಥಾನ, ಗುಡವಿ ಪಕ್ಷಿಧಾಮವಿದೆ. ಆದರೆ, ಎರಡೂ ಕಡೆ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿಲ್ಲ. ಚಂದ್ರಗುತ್ತಿಯಲ್ಲಿ ವಾಸ್ತವ್ಯ, ಕುಡಿಯುವ ನೀರಿಗೆ ಸಮಸ್ಯೆ ಇದೆ. ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಕ್ಷೇತ್ರದಲ್ಲಿ ಸಾರಿಗೆ ಸಮಸ್ಯೆ ಕೊರತೆ ಇದೆ. ಶಿಕ್ಷಣದ ಗುಣಮಟ್ಟವೂ ಅಭಿವೃದ್ಧಿಯಾಗಬೇಕು. ಸರ್ಕಾರಿ ಶಾಲೆಗಳ ಕಾಯಕಲ್ಪಕ್ಕಾಗಿ ಕಾದು ಕುಳಿತಿವೆ. ಖಾಸಗಿ ಶಾಲೆಗಳ ಸಂಖ್ಯೆ ಕಡಿಮೆ ಇದೆ.
ಅಭ್ಯರ್ಥಿಗಳು
ಸೊರಬ ಕ್ಷೇತ್ರದ ಹಾಲಿ ಶಾಸಕರು ಮಧು ಬಂಗಾರಪ್ಪ 2018ರ ಚುನಾವಣೆಗೂ ಅವರೇ ಅಭ್ಯರ್ಥಿ. ‘ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸುವುದು ಕಾರ್ಯಕರ್ತರ ಗುರಿಯಾಗಿದೆ' ಎಂದು ಅವರು ಒನ್ ಇಂಡಿಯಾ ಜೊತೆ ಮಾತನಾಡುವಾಗ ಹೇಳಿದರು. ಭರ್ಜರಿಯಾಗಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಕುಮಾರ್ ಬಂಗಾರಪ್ಪ ಅವರು ಬಿಜೆಪಿಯ ಅಭ್ಯರ್ಥಿ. ‘5 ವರ್ಷಗಳಿಂದ ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ' ಎನ್ನುತ್ತಾರೆ ಅವರು.
ರಾಜ ತಲ್ಲೂರು ಕಾಂಗ್ರೆಸ್ ಅಭ್ಯರ್ಥಿ. ‘ಕುಟುಂಬ ರಾಜಕಾರಣದಿಂದ ಕ್ಷೇತ್ರ ಅಭಿವೃದ್ಧಿಯಿಂದ ವಿಮುಖವಾಗಿದೆ. ಒಬ್ಬರು ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರ ಹೀಗಿದೆ ನೋಡಿ. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ' ಎನ್ನುತ್ತಾರೆ ಅವರು.
ಉದ್ಯೋಗ ಬೇಕಾಗಿದೆ
ಸೊರಬ ಕ್ಷೇತ್ರದಲ್ಲಿ ಉದ್ಯೋಗಗಳು ಸೃಷ್ಟಿಯಾಗಬೇಕಿದೆ. ಯಾವುದೇ ಕೈಗಾರಿಕೆಗಳು ಕ್ಷೇತ್ರದಲ್ಲಿ ಇಲ್ಲ. ಅತ್ಯುತ್ತಮವಾದ ಪಿಠೋಪಕರಣನ್ನು ಸೊರಬದಲ್ಲಿ ಸಿದ್ದಪಡಿಸಲಾಗುತ್ತದೆ. ಆದರೆ, ಅವುಗಳಿಗೆ ಸರಿಯಾದ ಮಾರುಕಟ್ಟೆ ಸಿಗುವುದಿಲ್ಲ. ಇಂತಹ ಉದ್ಯಮವನ್ನು ಅಭಿವೃದ್ಧಿ ಪಡಿಸಲು ತರಬೇತಿಯೂ ಸಿಗುತ್ತಿಲ್ಲ.
ಸೊರಬ ಕ್ಷೇತ್ರದ ಜನರು ಹೆಚ್ಚಾಗಿ ಕೂಲಿ ಕೆಲಸವನ್ನು ಅವಲಂಬಿಸಿದ್ದಾರೆ. ಕೆಲವು ಬೆಂಗಳೂರು, ಸಾಗರ, ಶಿವಮೊಗ್ಗದಲ್ಲಿ ಉದ್ಯೋಗ ಮಾಡಿಕೊಂಡಿದ್ದಾರೆ. ಕೈಗಾರಿಕೆಗಳು ಬಂದರೆ ಕ್ಷೇತ್ರದ ಯುವಕರಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ.
ನೀರಿಲ್ಲದೆ ಸೊರಗಿವೆ ಸೊರಬದ ಕೆರೆಗಳು
ಸೊರಬ ಕ್ಷೇತ್ರದ ಪ್ರಮುಖ ಸಮಸ್ಯೆ ನೀರು. ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಇದೆ. ಸೊರಬ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲೂಕು. ಆದರೆ, ಕೆರಗಳನ್ನು ತುಂಬಿಸುವ ಕಾರ್ಯವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕು.
ಸೊರಬ ಪಟ್ಟಣದಲ್ಲಿ ಕೆಲವು ಭಾಗದಲ್ಲಿ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಕೆಲವು ಜನರು ಬೋರ್ ವೆಲ್ ಮೊರೆ ಹೋಗಿದ್ದಾರೆ. ಆದರೆ, ಅವುಗಳಲ್ಲಿ ನೀರು ಯಾವಾಗ ಬತ್ತಿ ಹೋಗುತ್ತದೆ ಎಂಬುದು ತಿಳಿದಿಲ್ಲ ಎನ್ನುತ್ತಾರೆ ಸ್ಥಳೀಯರು.