ಶಿವಮೊಗ್ಗ ಲೋಕಸಭಾ ಕಣದಲ್ಲಿ ಮಾಜಿ ಸಿಎಂಗಳ ಮಕ್ಕಳ ಕಾದಾಟ
ಬೆಂಗಳೂರು, ಅಕ್ಟೋಬರ್ 14: ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್ ಪುತ್ರ, ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ, ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್ ಪುತ್ರ, ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ, ರಾಜ್ಯ ಸಂಯುಕ್ತ ಜನತಾ ದಳದ ಅಧ್ಯಕ್ಷ ಮಹಿಮಾ ಪಟೇಲ್ ಅವರು ಮತ್ತೆ ಚುನಾವಣಾ ಕಣಕ್ಕಿಳಿದಿದ್ದಾರೆ.
ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ಅವರು ಮಹಿಮಾ ಅವರನ್ನು ಜೆಡಿಯುನ ಕರ್ನಾಟಕ ಘಟಕದ ಅಧ್ಯಕ್ಷರಾಗಿ ನೇಮಿಸಿ, ಆರೇಳು ತಿಂಗಳು ಕಳೆದಿವೆ. ಈಗ ನವೆಂಬರ್ 3 ರಂದು ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆಯುತ್ತಿದ್ದು, ಈ ಪೈಕಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಯು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ.
ಶಿವಮೊಗ್ಗ: ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಘೋಷಣೆ
ಶಿವಮೊಗ್ಗ ಲೋಕಸಭಾ ಸದಸ್ಯರಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕಾರಿಪುರದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ, ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈಗ ಉಪ ಚುನಾವಣೆ ನಡೆಯುತ್ತಿದೆ.
ಉಪಚುನಾವಣೆ: ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಿ.ವೈ ರಾಘವೇಂದ್ರ ಸ್ಪರ್ಧೆ ಖಚಿತ
ಬಿಜೆಪಿ ಅಭ್ಯರ್ಥಿಯಾಗಿ ಯಡಿಯೂರಪ್ಪನವರ ಪುತ್ರ ಬಿ.ವೈ. ರಾಘವೇಂದ್ರ ಕಣಕ್ಕಿಳಿಯುತ್ತಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕಿಳಿಯುವುದು ನಿಶ್ಚಯವಾಗಿದೆ. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರು ಕಣಕ್ಕಿಳಿದರೆ, ಮೂವರು ಮಾಜಿ ಸಿಎಂಗಳ ಪುತ್ರರ ಸ್ಪರ್ಧೆಗೆ ಶಿವಮೊಗ್ಗ ಅಖಾಡವಾಗಲಿದೆ.
ಎನ್ಡಿಎ ಮಿತ್ರಪಕ್ಷವಾದ ನಿತೀಶ್ ಬಣದ ಜೆಡಿಯು
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ಪರ್ಧೆ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿಯು ಅಧ್ಯಕ್ಷ ಮಹಿಮಾ ಪಟೇಲ್, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಇದು ಕರ್ನಾಟಕಕ್ಕೂ ಅನ್ವಯವಾಗಲಿದೆ ಎಂದಿದ್ದಾರೆ.
ಆದರೆ, ಈ ಬಗ್ಗೆ ಬಿಜೆಪಿ ಮುಖಂಡರು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಬಿವೈ ರಾಘವೇಂದ್ರ ಅವರ ಗೆಲುವಿಗೆ ಇದು ಸಹಕಾರಿ ಎಂದೇ ಭಾವಿಸಲಾಗಿದೆ. ಮಹಿಮಾ ಅವರ ಸ್ಪರ್ಧೆಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹಳೆ ತಲೆಗಳು ಜೆಡಿಯುಗೆ ವೋಟ್ ಮಾಡಿದರೆ, ಮಧು ಅವರಿಗೆ ಸಿಗುವ ಮತಗಳನ್ನು ವಿಭಜನೆ ಮಾಡಬಹುದು ಎಂಬ ಲೆಕ್ಕಾಚಾರವಿದೆ.
ರಾಜಕಾರಣಿಯಾಗಿ ಮಹಿಮಾ ಪಟೇಲ್
2009ರಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಪುತ್ರರಾದ ಮಹಿಮಾ ಪಟೇಲ್ ಹಾಗೂ ತ್ರಿಶೂಲಪಾಣಿ ಪಟೇಲ್ ಅವರು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ನಲ್ಲಿದ್ದ ಮಹಿಮಾ ಅವರು 2014ರ ಲೋಕಸಭೆ ಚುನಾವಣೆ ಟಿಕೆಟ್ ಸಿಗದ ಕಾರಣ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ನಂತರ ಸ್ವರ್ಣಯುಗ ಎಂಬ ಪಕ್ಷ ಸ್ಥಾಪಿಸಿದ್ದರು. ಯಾವುದರಲ್ಲೂ ಯಶಸ್ಸು ಕಾಣದೆ ಕಳೆದ ವರ್ಷಾಂತ್ಯಕ್ಕೆ ಜೆಡಿಯು ಸೇರಿದರು. ಈಗ ಜೆಡಿಯು(ನಿತೀಶ್ ಕುಮಾರ್) ರಾಜ್ಯಾಧ್ಯಕ್ಷರಾಗಿದ್ದಾರೆ.
ಈಗ ಜೆಡಿಯುನ ರಾಜ್ಯಾಧ್ಯಕ್ಷರಾಗಿದ್ದಾರೆ
'ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ತೊರೆದು ಸ್ವರ್ಣಯುಗ ಪಕ್ಷ ಸ್ಥಾಪಿಸಿದೆ. ಚುನಾವಣೆಗೂ ಸ್ಪರ್ಧಿಸಿದೆ. ಆದರೆ, ಯಶ ಸಿಗಲಿಲ್ಲ. ಈಗ ಕಾಂಗ್ರೆಸ್ ನಲ್ಲಿ ಸ್ವರ್ಣಯುಗ ವಿಲೀನಗೊಳಿಸಿದ್ದೇನೆ. ಕಾಂಗ್ರೆಸ್ ನಿಂದ ದೇಶಕ್ಕೆ ಉತ್ತಮ ಭವಿಷ್ಯವಿದೆ' ಎಂದು ಮಹಿಮಾ ಅಂದು ಹೇಳಿದ್ದರು. ಆದರೆ, ದಾವಣಗೆರೆಯಿಂದ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ತೊರೆದು ಮತ್ತೆ ಜೆಡಿಎಸ್ ಗೆ 2014ರಲ್ಲಿ ಮರಳಿದ್ದರು. ಈಗ ಜೆಡಿಯುನ ರಾಜ್ಯಾಧ್ಯಕ್ಷರಾಗಿದ್ದಾರೆ.
ತೃತೀಯ ರಂಗದ ಬಯಕೆ ಈಗ ಎನ್ಡಿಎ ಬಲಪಡಿಸುವತ್ತ
ತೃತೀಯ ರಂಗ ಸೇರುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದ ಮಹಿಮಾ ಪಟೇಲ್ ಅವರು ಕಾಂಗ್ರೆಸ್ ತೊರೆದ ಬಳಿಕ ಮತ್ತೆ ಜೆಡಿಎಸ್ ಗೆ ಮರಳಿದ್ದರು. ಶಾಮನೂರು ಶಿವಶಂಕರಪ್ಪ ಪುತ್ರ ಎಸ್ಎಸ್ ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರಿಂದ ಕಾಂಗ್ರೆಸ್ ತೊರೆದ ನಂತರ ಜೆಡಿಎಸ್ ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಹಿಮಾ ಅವರು ಎಲ್ಲೆಡೆ ನಿರಾಶೆ ಅನುಭವಿಸಿದ್ದರು. ಆದರೆ, ಈಗ ಜೆಡಿಯು ಪಕ್ಷಕ್ಕೆ ಕರ್ನಾಟಕದಲ್ಲಿ ಬಲ ತುಂಬುವುದಲ್ಲದೆ, ಕೇಂದ್ರದಲ್ಲಿ ಎನ್ಡಿಎಗೆ ಶಕ್ತಿ ತರಲು ಶ್ರಮಿಸಲು ಮಹಿಮಾ ಮುಂದಾಗಿದ್ದಾರೆ.