ಬಿಜೆಪಿಯೊಳಗೇ ಲೋಕ 'ಸಮರ'; ಈಶು- ಆಯನೂರು ಮಾತಿನಲ್ಲೇ ಡಿಶುಂಡಿಶುಂ
ಶಿವಮೊಗ್ಗ, ಸೆಪ್ಟೆಂಬರ್ 10 : ಲೋಕಸಭಾ ಚುನಾವಣೆ ಆರೇಳು ತಿಂಗಳ ಸಮಯವಿದೆ. ಅದಾಗಲೇ ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಬಗ್ಗೆಯೇ ಕಾವೇರಿದ ಚರ್ಚೆ ಶುರುವಾಗಿದೆ. ಎಲ್ಲ ಕಡೆಯೂ ಹೀಗಾಗಿದೆ ಅಂತಲ್ಲ. ಆದರೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಬಿಜೆಪಿಯಲ್ಲಂತೂ ಒಂದು ರೀತಿಯ ಗುಸುಗುಸು ಮತ್ತು ಗೊಂದಲಗಳು ಮುಂದುವರಿದಿವೆ.
ಈಗಾಗಲೇ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪರ ಮಧ್ಯೆ ಇರುವ ಭಿನ್ನಾಭಿಪ್ರಾಯಕ್ಕೆ ಮತ್ತಷ್ಟು ತುಪ್ಪ ಸುರಿಯುವಂತೆ ಆಯನೂರು ಮಂಜುನಾಥ್ ತಮ್ಮ ಅಸಮಾಧಾನವನ್ನು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೊರಹಾಕಿದ್ದಾರೆ. ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪನವರು ಬಿಜೆಪಿಯ ಲೋಕಸಭಾ ಅಭ್ಯರ್ಥಿಗೆ ಸಂಬಂಧಿಸಿದಂತೆ ನಾಲ್ವರ ಹೆಸರನ್ನು ತೇಲಿಬಿಟ್ಟಿದ್ದರು.
ಲೋಕಸಭೆ ಚುನಾವಣೆ : 9 ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿಗಳಿಲ್ಲ!
ಇದು ಬಿಜೆಪಿ ಪಾಳಯದಲ್ಲಿಯ್ಯೇ ಒಂದು ರೀತಿಯ ಸಂಚಲನ ಹಾಗೂ ಅಸಮಾಧಾನ ಮತ್ತು ಭಿನ್ನಾಭಿಪ್ರಾಯಗಳನ್ನು ಹೊರಹಾಕಿದಂತಿತ್ತು. ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರ ಮಗ ಬಿ.ವೈ.ರಾಘವೇಂದ್ರ ಅಧಿಕೃತ ಅಭ್ಯರ್ಥಿ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ತಡೆಗೋಡೆಯಂತೆ ಕೆ.ಎಸ್.ಈಶ್ವರಪ್ಪನವರು ನಾಲ್ವರು ಸ್ಪರ್ಧಾಕಾಂಕ್ಷಿಗಳ ಹೆಸರು ಹೇಳಿದ್ದರು.
ನಾಲ್ವರ ಹೆಸರು ತೇಲಿಬಿಟ್ಟಿದ್ದರು ಈಶ್ವರಪ್ಪ
ಈಶ್ವರಪ್ಪನವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಸ್ಪರ್ಧಾಕಾಂಕ್ಷಿಗಳು ಇನ್ನೂ ಇದ್ದಾರೆ. ಎಂ.ಬಿ.ಭಾನುಪ್ರಕಾಶ್, ಎಸ್.ಎನ್.ಚನ್ನಬಸಪ್ಪ, ಎಸ್.ದತ್ತಾತ್ರಿ ಹಾಗೂ ಬಿ.ವೈ.ರಾಘವೇಂದ್ರ ಕೂಡ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಿದ್ದರು. ಈ ಮಾತಿಗೆ ಟಾಂಗ್ ನೀಡುವಂತೆ ವ್ಯಂಗ್ಯ ಮಿಶ್ರಿತ ಭಾಷೆ ಬಳಸಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ ಆಯನೂರು ಮಂಜುನಾಥ್.
ಸ್ವತಃ ಈಶ್ವರಪನವರೇ ಪಟ್ಟಿಯಲ್ಲಿದ್ದಾರೆ
ಹೌದು, ಈ ನಾಲ್ವರು ಅಷ್ಟೇ ಅಲ್ಲ, ಕೆ.ಎಸ್.ಈಶ್ವರಪ್ಪನವರು ಕೂಡ ಪಟ್ಟಿಯಲ್ಲಿದ್ದಾರೆ. ಅವರು ಸ್ಪರ್ಧೆ ಮಾಡಿದರೂ ಆಶ್ಚರ್ಯವೇನಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇನ್ನೂ ಮುಂದುವರಿದು ಬರೀ ಈಶ್ವರಪ್ಪ ಮಾತ್ರ ಅಲ್ಲ. ಅವರ ಪುತ್ರ ಕೆ.ಇ.ಕಾಂತೇಶ್ ಕೂಡ ಆಕಾಂಕ್ಷಿಯಾಗಬಹುದು. ಹಾಗೆಯೇ ಡಿ.ಎಸ್.ಅರುಣ್ ಇದ್ದಾರೆ. ಎಸ್.ಎನ್.ಚನ್ನಬಸಪ್ಪ ಇದ್ದಾರೆ. ಜ್ಞಾನೇಶ್ವರ್ ಇದ್ದಾರೆ ಎಂದು ಮತ್ತೊಂದು ಪಟ್ಟಿಯನ್ನು ಪತ್ರಿಕಾಗೋಷ್ಟಿಯಲ್ಲಿ ಬಿಚ್ಚಿಟ್ಟರು.
ಬಿ.ವೈ.ರಾಘವೇಂದ್ರ ಹೆಸರು ಈ ಹಿಂದೆಯೇ ನಿರ್ಧಾರವಾಗಿದೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಆದರೆ ಲೋಕಸಭೆ ಚುನಾವಣೆಗೆ ರಾಘವೇಂದ್ರರಿಗೆ ಟಿಕೆಟ್ ಕೊಡಬಹುದು ಎಂಬ ಹಿನ್ನೆಲೆಯಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡಿರಲಿಲ್ಲ. ಹಾಗಾಗಿ ಬಿ.ವೈ.ರಾಘವೇಂದ್ರ ಸ್ಪರ್ಧೆಗೆ ಇಳಿಯುತ್ತಾರೆ ಎಂಬುದನ್ನು ಅಂದೇ ತೀರ್ಮಾನಿಸಲಾಗಿತ್ತು ಎಂದರು ಆಯನೂರು ಮಂಜುನಾಥ್.
ಕಾಂಗ್ರೆಸ್-ಜೆಡಿಎಸ್ ಎದುರಿಸಲು ಸಮರ್ಥ ಅಭ್ಯರ್ಥಿ ಕಣಕ್ಕೆ
ಆದರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಸ್ಪರ್ಧಿಸುವ ಸಾದ್ಯತೆಗಳು ಹೆಚ್ಚಿವೆ. ಹಾಗಾಗಿ ಈ ಪಕ್ಷಗಳನ್ನು ಎದುರಿಸಲು ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲೇ ಬೇಕಿರುವುದರಿಂದ ಪಕ್ಷದ ವಲಯದಲ್ಲಿ ಬಿ.ವೈ.ರಾಘವೇಂದ್ರ ಮತ್ತು ಶಾಸಕ ಕೆ.ಎಸ್.ಈಶ್ವರಪ್ಪ ಅವರ ಹೆಸರು ಚರ್ಚೆಯಲ್ಲಿದೆ. ಹಾಗಾಗಿ ಬಿಜೆಪಿ ಈ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು. ಆದ್ದರಿಂದ ಶಿವಮೊಗ್ಗ ಕ್ಷೇತ್ರದ ಶಾಸಕರೇ ಅಭ್ಯರ್ಥಿ ಆಗಬಹುದು ಎಂದು ತಿಳಿಸಿದರು.