'ಸಿದ್ದರಾಮಯ್ಯ, ವೇಣುಗೋಪಾಲ್ ನ ಕೂರಿಸಿಕೊಂಡು ನನ್ನ ಭ್ರಷ್ಟ ಅಂತೀರಾ?'
ಶಿವಮೊಗ್ಗ, ಫೆಬ್ರವರಿ 13: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲಿಗೆ ಬೇಕಾದರೂ ಹೋಗಲಿ, ಏನ್ ಬೇಕಾದರೂ ತಿನ್ನಲಿ. ನಾನು ಕೇಳಲು ಹೋಗುವುದಿಲ್ಲ. ಆದರೆ ಮಕ್ಕಳಾಟಿಕೆ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜವಾರಿ ಕೋಳಿ ತಿಂದು ದೇಗುಲಕ್ಕೆ ಹೋದ ರಾಹುಲ್ ಗೆ ಬಿಎಸ್ ವೈ ತರಾಟೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಕ್ಕದಲ್ಲಿ ಕೂತುಕೊಂಡು ಯಡಿಯೂರಪ್ಪನ ಟೀಕೆ ಮಾಡಿದರೆ ಜನ ಒಪ್ಪುವುದಿಲ್ಲ. ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಗರಣಗಳ ಆರೋಪ ಹೊತ್ತ ವೇಣುಗೋಪಾಲ್ ನ ಪಕ್ಕದಲ್ಲಿ ಇಟ್ಟುಕೊಂಡು ನನ್ನ ಬಗ್ಗೆ ಟೀಕೆ ಮಾಡುತ್ತಾರೆ ಎಂದು ಅವರು ಅಸಮಾಧಾನದಿಂದ ಹೇಳಿದರು.
ರಾಹುಲ್ ಗಾಂಧಿ ಪ್ರಚಾರಕ್ಕೆ ಹೋದಲ್ಲೆಲ್ಲಾ ಕಾಂಗ್ರೆಸ್ ನೆಲ ಕಚ್ಚಿದೆ. ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಕೂಡ ಕಾಂಗ್ರೆಸ್ ತೊಲಗಲಿದೆ ಎಂದು ಅವರು ಭವಿಷ್ಯ ನುಡಿದರು. ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮಾಂಸ ಸೇವನೆ ಮಾಡಿ, ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಯಡಿಯೂರಪ್ಪ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆರೋಪ ಮಾಡಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದ್ದಾರೆ ಎಂದಿದ್ದರು.