ಹಾಡೋನಹಳ್ಳಿಯಲ್ಲಿ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ: ತಪ್ಪಿದ ಭಾರೀ ಅನಾಹುತ
ಶಿವಮೊಗ್ಗ, ಆಗಸ್ಟ್.09: ಹಾಡೋನಹಳ್ಳಿಯಲ್ಲಿ ಹದಗೆಟ್ಟ ರಸ್ತೆಗಳ ಅವಾಂತರಕ್ಕೆ ಮತ್ತೊಂದು ದುರಂತ ಸಂಭವಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅದೃಷ್ಟವಶಾತ್ ಬಹುದೊಡ್ಡ ದುರಂತವೊಂದು ಇದೀಗ ತಪ್ಪಿದೆ.
ಹೌದು, ಇಂದು ಗುರುವಾರ ಬೆಳಗ್ಗೆ 10 ಗಂಟೆಗೆ ಶಿವಮೊಗ್ಗಕ್ಕೆ ಹಾಡೋನಹಳ್ಳಿ ಗ್ರಾಮದಿಂದ ಬರುತ್ತಿದ್ದ ಹೊನ್ನಾಳಿ ಮಾರ್ಗದ ಕೆಎಸ್ಆರ್ ಟಿಸಿ ಬಸ್ ವಿದ್ಯುತ್ ಕಂಬವೊಂದಕ್ಕೆ ಡಿಕ್ಕಿ ಹೊಡೆದು ಸುಮಾರು 75 ಅಡಿದೂರ ಮುಂದೆ ಸಾಗಿದೆ.
ಕಾರು ಅಪಘಾತದಲ್ಲಿ ಕಾಂಗ್ರೆಸ್ ಶಾಸಕನ ಮೊಮ್ಮಗ ಸಾವು
ಇದರಲ್ಲಿ ಶಾಲಾ ಮಕ್ಕಳು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನರಿದ್ದು, ಬಸ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮೂರು ತುಂಡಾಗಿ ಬಿದ್ದಿದೆ. ಇದನ್ನು ಅದೃಷ್ಟವೆನ್ನಬೇಕೋ ಅಥವಾ ಯಾವುದೋ ಜನ್ಮದ ಪುಣ್ಯವೆನ್ನಬೇಕೋ.
ಯಾಕೆಂದರೆ ವಿದ್ಯುತ್ ತಂತಿ ಬಸ್ ಗೆ ತಗುಲಲು ಕೇವಲ ಅರ್ಧ ಅಡಿ ಅಂತರ ಕಾಯ್ದುಕೊಂಡಿದೆ. ಆಕಸ್ಮಾತ್ ತಂತಿ ಬಸ್ ಗೆ ತಗುಲಿದ್ದರೆ ಅತಿ ದೊಡ್ಡ ದುರಂತ ಸಂಭವಿಸುವುದರಲ್ಲಿ ಎರಡು ಮಾತಿರಲಿಲ್ಲವೆಂದು ಪ್ರತ್ಯಕ್ಷದರ್ಶಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಮಾರು 15ಕ್ಕೂ ಹೆಚ್ಚು ಶಾಲಾ ಮಕ್ಕಳು ಸೇರಿದಂತೆ 35ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹಾಡೋನಹಳ್ಳಿಯಿಂದ ಹೊನ್ನಾಳಿ ರಸ್ತೆಗೆ ಸೇರಿಕೊಳ್ಳುವ ಮಾರ್ಗ ಮಧ್ಯದಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
"ಅವಘಡಕ್ಕೆ ಹದಗೆಟ್ಟ ರಸ್ತೆಗಳೇ ಕಾರಣ. ಗ್ರಾಮದ ಜನತೆ ಶಾಸಕರು ಸೇರಿದಂತೆ ಜಿಲ್ಲಾಡಳಿತಕ್ಕೆ ನೂರಾರು ಬಾರಿ ರಸ್ತೆ ಸರಿಪಡಿಸಲು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಮೊದಲೇ ಕಿರಿದಾದ ರಸ್ತೆಯಾಗಿರುವುದರಿಂದ ಗುಂಡಿಗೊಟರುಗಳು ತುಂಬಿರುವುದರಿಂದ ಹಾಗೂ ಬಸ್ ನಲ್ಲಿಯೂ ಅತಿಹೆಚ್ಚು ಪ್ರಯಾಣಿಕರು ಇದ್ದುದರಿಂದ ಈ ಅವಘಡ ಸಂಭವಿಸಿದೆ.
ಚಾಲಕನ ಕಾರ್ಯ ತತ್ಪರ್ಯತೆಯಿಂದ ಬಸ್ ನಲ್ಲಿದ್ದವರ ಪ್ರಾಣ ಉಳಿದಿದೆ ಹಾಗೂ ಅವರ ಅದೃಷ್ಟವೂ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಒಟ್ಟಾರೆ ಹಾಡೋನಹಳ್ಳಿಯಲ್ಲಿ ಸಂಭವಿಸಬೇಕಿದ್ದ ಮತ್ತೊಂದು ದುರಂತ ತಪ್ಪಿದೆ. ಸ್ಥಳೀಯ ಶಾಸಕ ಅಶೋಕ್ ನಾಯ್ಕ ಅವರು ಈ ರಸ್ತೆ ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.