ತೀರ್ಥಹಳ್ಳಿ-ಕುಂದಾಪುರ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧ
ಶಿವಮೊಗ್ಗ, ಆಗಸ್ಟ್ 23 : ತೀರ್ಥಹಳ್ಳಿ-ಕುಂದಾಪುರ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 52 ರಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈ ಮಾರ್ಗದಲ್ಲಿ ಭೂಕುಸಿತ ಉಂಟಾಗುತ್ತಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ತೀರ್ಥಹಳ್ಳಿ-ಕುಂದಾಪುರ ಸಂಪರ್ಕಿಸುವ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಿದ್ದಾರೆ. ಈ ರಸ್ತೆಯ ಭಾಗವು ಎಲ್ಲಾ ವಾಹನಗಳ ದಟ್ಟಣೆಯನ್ನು ಸುರಕ್ಷಿತ ಭಾರ ತಾಳುವ ಸಾಮರ್ಥ್ಯವನ್ನು ಹೊಂದಿಲ್ಲ. ಆದ್ದರಿಂದ, ಸಂಚಾರ ನಿಷೇಧಿಸಲಾಗಿದೆ.
ಮಳೆ, ಭೂ ಕುಸಿತ : ಎಲ್ಲಾ ವಾಹನಗಳಿಗೆ ಶಿರಾಡಿ ಘಾಟ್ ರಸ್ತೆ ಬಂದ್
ನಿಗದಿಪಡಿಸಿದ ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರ ಹೊರುವ ವಾಹನಗಳು ಹಾಗೂ ನಿಗದಿತ ವಾಹನಗಳ ಸಂಖ್ಯೆಗಿಂತ ಹೆಚ್ಚಿನ ಹೋಗಿ-ಬರುವ ವಾಹನಗಳ ಸಂಚಾರದ ವ್ಯತ್ಯಾಸವಾಗಿ ವಾಹನಗಳ ಸಂಚಾರಕ್ಕೆ ತಡೆಯಾಗುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
ಅಲ್ಲದೇ ಕಳೆದ ವರ್ಷಕ್ಕಿಂತ ಈ ವರ್ಷದ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಭೂಗತ ಜಲಮಟ್ಟ ರಸ್ತೆ ಮೇಲ್ಮೈವರೆಗೆ ಏರಿದ್ದು, ಸುರಕ್ಷಿತ ವಾಹನ ಸಾಂಧ್ರತೆ ಕಡಿಮೆಯಾಗಬೇಕಾಗಿರುವ ಹಿನ್ನೆಲೆಯಲ್ಲಿ ರಸ್ತೆ ಪದರ ಶಿಥಿಲಗೊಂಡು ಸರಕು ಸಾಗಣೆ ಹಾಗೂ ಸಾರ್ವಜನಿಕ ಪ್ರಯಾಣಕ್ಕೆ ತೀವ್ರತರಹದ ಅಡಚಣೆ ಉಂಟಾಗುತ್ತಿದೆ.
ಶಿರಾಡಿ ಘಾಟ್ ರಸ್ತೆ : 45ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ
ಬುಲೆಟ್ ಟ್ಯಾಂಕರ್ಸ್, ಪಿಪ್ ಕಾರ್ಗೋ ಕಂಟೈನರ್ಸ್ ಹಾಗೂ ಲಾಂಗ್ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿಎಕ್ಸೆಲ್ ಟ್ರಕ್ಸ್, ಟ್ರಕ್ ಟ್ರೈಲರ್ ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಣೆ ವಾಹನಗಳನ್ನು ಈ ಹೆದ್ದಾರಿಯಲ್ಲಿ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ.
ಕಾರು, ಜೀಪು, ವ್ಯಾನ್, ಎಲ್.ಸಿ.ವಿ., ಮಿನಿ ವ್ಯಾನ್ ಹಾಗೂ ದ್ವಿಚಕ್ರ ವಾಹನಗಳು, ರಾಜಹಂಸ ಬಸ್, ಸಾರ್ವಜನಿಕರು ಪ್ರಯಾಣಿಸುವ ಬಸ್ಸುಗಳ ಸಂಚಾರಕ್ಕೆ ಮಾರ್ಗ ಮುಕ್ತವಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.