'ನನ್ನ ವಿರುದ್ಧ ಪಿತೂರಿ ನಡೆಸಿದವರಿಗೆ ನಿರಾಸೆಯಾಗಿದೆ'
ಶಿವಮೊಗ್ಗ, ಅ.17 : 'ನನ್ನ ವಿರುದ್ಧ ಪಿತೂರಿ ನಡೆಸಿದವರಿಗೆ ನಿರಾಸೆಯಾಗಿದೆ. ಪಿತೂರಿ ಬಗ್ಗೆ ಶೀಘ್ರದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ. ಇದು ಸತ್ಯಕ್ಕೆ ಸಿಕ್ಕ ಜಯ' ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಹರತಾಳು ಹಾಲಪ್ಪ ಹೇಳಿದರು.
ಅತ್ಯಾಚಾರ ಕೇಸ್ : ಮಾಜಿ ಸಚಿವ ಹರತಾಳು ಹಾಲಪ್ಪಗೆ ಕ್ಲೀನ್ ಚಿಟ್
ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಹಾಲಪ್ಪ ಅವರಿಗೆ ಶಿವಮೊಗ್ಗ ಕೋರ್ಟ್ ಕ್ಲೀನ್ ಚಿಟ್ ನೀಡಿದೆ. ನ್ಯಾಯಾಲಯದ ತೀರ್ಪಿನ ಬಳಿಕ ಮಾತನಾಡಿದ ಹಾಲಪ್ಪ ಅವರು, 'ನ್ಯಾಯಾಲಯದ ಬಗ್ಗೆ ನನಗೆ ಅಪಾರವಾದ ಗೌರವವಿತ್ತು. ಏಳು ವರ್ಷಗಳ ಬಳಿಕ ನನಗೆ ನ್ಯಾಯ ಸಿಕ್ಕಿದೆ' ಎಂದರು.
'ನನ್ನ ಸಮಯ ಆಗ ಸರಿ ಇರಲಿಲ್ಲ, ಆಗ ನನ್ನ ವಿರುದ್ಧ ಪಿತೂರಿ ನಡೆಸಿ ಈ ಕೇಸ್ ಹಾಕಿಸಲಾಯಿತು. ಪಿತೂರಿ ಮಾಡಿದವರಿಗೆ ಈಗ ನಿರಾಸೆಯಾಗಿದೆ. ನನ್ನ ವಿರುದ್ಧ ನಡೆದ ಪಿತೂರಿ ಬಗ್ಗೆ ಶೀಘ್ರದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ' ಎಂದು ಹೇಳಿದರು.
'ನನ್ನ ರಾಜಕೀಯ ಸ್ಥಾನಮಾನದ ಕುರಿತು ಪಕ್ಷದ ಹಿರಿಯರು ತೀರ್ಮಾನ ಕೈಗೊಳ್ಳುತ್ತಾರೆ. ಕಷ್ಟ ಕಾಲದಲ್ಲಿ ನನಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ' ಎಂದರು.