ಶಿಕಾರಿಪುರದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ, ಎಚ್ಡಿಕೆ ಹೇಳಿದ್ದೇನು?
ಶಿವಮೊಗ್ಗ, ಏಪ್ರಿಲ್ 05 : ಮಾಜಿ ಮುಖ್ಯಮಂತ್ರಿ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತವರು ಕ್ಷೇತ್ರದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಸಿದೆ. ಶಿಕಾರಿಪುರ ಕ್ಷೇತ್ರದಲ್ಲಿ ಎಚ್.ಟಿ.ಬಳಿಗಾರ್ ಅವರು ಪಕ್ಷದ ಅಭ್ಯರ್ಥಿಯಾಗಿದ್ದಾರೆ.
ಗುರುವಾರ ಶಿಕಾರಿಪುರ ಕ್ಷೇತ್ರದಲ್ಲಿ ಕುಮಾರಪರ್ವ ಸಮಾವೇಶ ನಡೆಯಿತು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಹೆಲಿಕಾಪ್ಟರ್ ಮೂಲಕ ಶಿಕಾರಿಪುರಕ್ಕೆ ಆಗಮಿಸಿದ ಅವರು, ನೇರವಾಗಿ ಶಿಕಾರಿಪುರದ ಉಚ್ಚರಾಯಪ್ಪ ಆಂಜನೇಯ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದುಕೊಂಡರು.
ಯಡಿಯೂರಪ್ಪ ವಿರುದ್ಧ ಆಪ್ ಅಭ್ಯರ್ಥಿ ಚಂದ್ರಕಾಂತ್ ಸಂದರ್ಶನ
ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶಿಕಾರಿಪುರದಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಡೊಳ್ಳು ಕುಣಿತ ಮೂಲಕ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ಬೃಹತ್ ಸಮಾವೇಶ ನಡೆಸುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಟಿ.ಬಳಿಗಾರ್ ಚುನಾವಣಾ ರಣ ಕಹಳೆ ಊದಿದರು. ಕುಮಾರಸ್ವಾಮಿ ಅವರ ಭೇಟಿ ಬಳಿಕ ತಾಲೂಕಿನ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ.
ಶಿವಮೊಗ್ಗ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
ಸಮಾವೇಶದಲ್ಲಿ ಶಿಕಾರಿಪುರದ ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಬಳಿಗಾರ್, ಸೊರಬ ಶಾಸಕ ಮಧು ಬಂಗಾರಪ್ಪ, ಭದ್ರಾವತಿ ಶಾಸಕ ಅಪ್ಪಾಜಿ ಗೌಡ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯ ನಾಯ್ಕ್ ಮುಂತಾದವರು ಪಾಲ್ಗೊಂಡಿದ್ದರು. ಸಮಾವೇಶಲ್ಲಿ ಕುಮಾರಸ್ವಾಮಿ ಹೇಳಿದ್ದೇನು?..
ನೂರಾರು ಹೊಸ ಯೋಜನೆಗಳು
ಸಮಾವೇಶದಲ್ಲಿ ಮಾತನಾಡಿದ ಕುಮಾರ ಸ್ವಾಮಿ ಅವರು, 'ಚುನಾವಣೆಯಲ್ಲಿ ಜನರ ಮತ ಕೇಳಲು ಪಕ್ಷಗಳು ಕುಕ್ಕರ್, ಸೀರೆ ಪಂಚೆ ಹಂಚುತ್ತವೆ. ಆದರೆ, ಇವು ಎಷ್ಟು ದಿನ ಬರುತ್ತದೆ?. ನಿಮಗಾಗಿ ನಾನು ನೂರಾರು ಹೊಸ ಯೋಜನೆಗಳನ್ನು ನೀಡಲು ಸಿದ್ದನಿದ್ದೇನೆ. ನಮಗೆ ಹಾಗೂ ನಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ' ಎಂದು ಮನವಿ ಮಾಡಿದರು.
'ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿಲ್ಲ ಎಂಬ ಕಾರಕ್ಕೆ ನನಗೆ 11 ವರ್ಷ ಶಿಕ್ಷೆ ನೀಡಿದ್ದೀರಿ. ಆದರೆ, ನಾನು ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿದ್ದೆ. ಅದನ್ನು ಅವರ ಪಕ್ಷದಲ್ಲಿರುವ ಕೆಲವರು ವಿರೋಧಿಸಿ ನಾನೇ ಮುಖ್ಯ ಮಂತ್ರಿಯಾಗಿ ಮುಂದುವರೆಯಲು ಒತ್ತಾಯಿಸಿದ್ದರು' ಎಂದು ಹೇಳಿದರು.
ಅವರಿಗೆ ಅರ್ಹತೆ ಇರಲಿಲ್ಲ
'ಕುಮಾರಸ್ವಾಮಿ ಅವರು ಮೋಸ ಮಾಡಿದ್ದಾರೆ ಎಂಬುದು ಸುಳ್ಳು. ಅಧಿಕಾರವನ್ನು ಉಳಿಸಿಕೊಂಡು ಹೋಗಲು ಅವರಿಗೆ ಅರ್ಹತೆ ಇರಲಿಲ್ಲ' ಎಂದು ಹೇಳಿದ ಕುಮಾರಸ್ವಾಮಿ ಅವರು, ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ ಸರ್ಕಾರದ ಬಗ್ಗೆ ಮತನಾಡಿದರು.
‘ಅಮಿತ್ ಶಾ ಮತ್ತು ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಅವರ ಜೊತೆ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ರಾಷ್ಟ್ರೀಯ ಪಕ್ಷಗಳ ನಾಯಕರು ಮಾತನಾಡುತ್ತಿರುವ ವಿಚಾರಗಳೇನು?. ರಾಜ್ಯದಲ್ಲಿರುವ ಸಮಸ್ಯೆ ಏನು? ಎಂಬುದನ್ನು ಜನರು ಗಮನವಿಟ್ಟು ನೋಡಬೇಕು' ಎಂದು ಕರೆ ನೀಡಿದರು.
ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳಿಸುವೆ
‘ಕರ್ನಾಟಕ ಪ್ರವಾಸದಲ್ಲಿರುವ ಬಿ.ಎಸ್.ಯಡಿಯೂರಪ್ಪ ಅವರು ನಾನು ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳಿಸುವೆ ಎಂದು ಹೇಳುತ್ತಿದ್ದಾರೆ'. ಅದಕ್ಕೆ ಸಿದ್ದರಾಮಯ್ಯ ಅವರು 'ಯಡಿಯೂರಪ್ಪ ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಕೆಲವು ಸಚಿವರು ಹೋಗಿ ಬಂದಿದ್ದಾರೆ' ಎಂದು ಭಾಷಣ ಮಾಡುತ್ತಿದ್ದಾರೆ.
‘ಕೆಲವು ದಿನ ರಾಜ್ಯದಲ್ಲಿ ಯಾವುದೇ ಹತ್ಯೆ ನಡೆದರೂ ಬಿಜೆಪಿ ಕಾರ್ಯಕರ್ತರು ಎಂದು ಪಟ್ಟ ಕಟ್ಟಲು ಆರಂಭಿಸಿದರು. ಬಿಜೆಪಿ, ಕಾಂಗ್ರೆಸ್ ಈ ಥರದ ಚರ್ಚೆಗಳನ್ನು ಮಾಡಿದರೆ ನಿಮ್ಮ ಸಮಸ್ಯೆ ಬಗೆಹರಿಯುತ್ತಿದೆಯೇ?. ನಿಮ್ಮ ಸಮಸ್ಯೆ ಪರಿಹಾರ ಮಾಡುವ ಪಕ್ಷದ ಬಗ್ಗೆ ಚಿಂತನೆ ಮಾಡಿ ಮತದಾನ ಮಾಡಿ' ಎಂದು ಕುಮಾರಸ್ವಾಮಿ ಕರೆ ನೀಡಿದರು.
ಈ ಬಗ್ಗೆ ಏಕೆ ಚರ್ಚೆ ಮಾಡುವುದಿಲ್ಲ
‘ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 58 ಸಾವಿರ ಕೋಟಿ ಬೆಳೆ ನಷ್ಟವಾಗಿದೆ ಎಂದು ಸರ್ಕಾರವೇ ವರದಿ ಕೊಟ್ಟಿದೆ. 51 ಸಾವಿರ ಕೋಟಿಗೂ ಅಧಿಕ ಸಾಲವನ್ನು ರೈತರು ಮಾಡಿದ್ದಾರೆ. ಸರ್ಕಾರ ತಲಾ 50 ಸಾವಿರದಂತೆ 8,160 ಕೋಟಿ ಸಹಕಾರಿ ಬ್ಯಾಂಕ್ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತು. ಆದರೆ, ಇದುವರೆಗೂ ಸುಮಾರು 2000 ಕೋಟಿ ಮಾತ್ರ ನೀಡಿದ್ದಾರೆ' ಎಂದು ಕುಮಾರಸ್ವಾಮಿ ಆರೋಪಿಸಿದರು.
'ಗದಗದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಬರುವ ಜೂನ್ನಲ್ಲಿ ಹಣವನ್ನು ನೀಡುವುದಾಗಿ ಹೇಳಿದ್ದಾರೆ. ಮೇ ತಿಂಗಳಿನಲ್ಲಿ ಚುನಾವಣೆ ಇದೆ, ಜೂನ್ನಲ್ಲಿ ಅವರು ಅಧಿಕಾರದಲ್ಲಿರುತ್ತಾರೆಯೇ?'. ‘ನೀವು 40 ವರ್ಷ ಬೆಳೆಸಿದ ಈ ಕ್ಷೇತ್ರದ ನಾಯಕರು ನಿಮ್ಮ ಸಾಲವನ್ನು ಮನ್ನಾ ಮಾಡಿದರೆ?. ಈಗ ರೈತರ ಸಾಲ ಮನ್ನಾ ಮಾಡಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ' ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.