ಶಿವಮೊಗ್ಗ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ರೈತರಿಗೆ ಹತ್ತು ಕೋಟಿ ವಂಚನೆ
ಶಿವಮೊಗ್ಗ, ಮೇ 26 : ಬ್ಯಾಂಕ್ ಗಳನ್ನು ಕೂಡ ನಂಬುವುದು ಹೇಗೆ ಎಂದು ಪ್ರಶ್ನೆ ಉದ್ಭವಿಸುವಂಥ ವಂಚನೆಯೊಂದು ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಈ ಹಗರಣ ನಡೆದ ವಾರದ ಮೇಲೆ ಬ್ಯಾಂಕ್ ಅಧಿಕಾರಿಗಳು ಎಚ್ಚರಗೊಂಡಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಂಚನೆ ನಡೆದಿರುವುದು ಬಿ.ಎಚ್.ರಸ್ತೆಯ ಕಾರ್ಪೋರೇಷನ್ ಬ್ಯಾಂಕ್ ಅಧಿಕಾರಿಗಳಿಂದ. ಈ ಬಗ್ಗೆ ಬ್ಯಾಂಕ್ ನ ಹಿರಿಯ ವ್ಯವಸ್ಥಾಪಕ ವೆಂಕಟ ರಾಘವ ಅವರು ಕ್ಷೇತ್ರಾಧಿಕಾರಿ ಮಧುಸೂದನ್ ರಾವ್ ಮೇಲೆ ವಂಚನೆ ದೂರನ್ನು ದಾಖಲಿಸಿದ್ದಾರೆ. ಅಂದಹಾಗೆ ಏನಿದು ವಂಚನೆ ಎಂಬ ಪ್ರಶ್ನೆ ಮೂಡುತ್ತದೆ ಅಲ್ಲವೆ?[ತೀರ್ಥರಾಮೇಶ್ವರ ದೇಗುಲದಲ್ಲಿ ಪುರಾತನ ಕಾಲದ ವಸ್ತುಗಳು ಪತ್ತೆ]
ತಾಲೂಕಿನ ವಿವಿಧ ಗ್ರಾಮಗಳ ರೈತರು ಕೃಷಿ ಸಾಲಕ್ಕಾಗಿ ಕೆಲ ತಿಂಗಳ ಹಿಂದೆ ದಾಖಲೆ ಸಹಿತ ಅರ್ಜಿ ಹಾಕಿಕೊಂಡಿದ್ದರು. ಅದೆಷ್ಟು ಸಲ ಬ್ಯಾಂಕ್ ಗೆ ಎಡತಾಕಿದರೂ ಸಾಲ ಸಿಕ್ಕಿರಲಿಲ್ಲ. ಆದರೆ ಬ್ಯಾಂಕ್ ಅಧಿಕಾರಿಗಳ ವರ್ತನೆ ಅನುಮಾನ ಮೂಡಿಸಿದೆ. ಆಗ ವಹಿವಾಟಿನ ದಾಖಲೆ ಪುಸ್ತಕವನ್ನು ಪರಿಶೀಲಿಸಿದಾಗ ಜಮೀನು ಅರ್ಜಿ ಸಾಲ ಮಂಜೂರಾಗಿದೆ ಎಂದು ದಾಖಲಾಗಿದೆ.
ಜತೆಗೆ ದಾಖಲೆಗಳ ಪ್ರಕಾರವೇ ಕನಿಷ್ಠ ಐದು ಲಕ್ಷದಿಂದ ಇಪ್ಪತ್ತೆಂಟು ಲಕ್ಷದವರೆಗೆ ಸಾಲ ಮಂಜೂರಾಗಿದೆ. ಹಾಗೆ ಮಂಜೂರಾದ ಒಟ್ಟು ಮೊತ್ತ ಹತ್ತು ಕೋಟಿ ರುಪಾಯಿ. ವಂಚನೆಗೊಳಗಾದ ರೈತರು ಕಳೆದ ಶನಿವಾರ ಬ್ಯಾಂಕ್ ಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡಿದ್ದರು.[ಶಿವಮೊಗ್ಗ ಜೈಲಿನಿಂದ ವಿಚಾರಣಾಧೀನ ಬಾಂಗ್ಲಾ ಕೈದಿ ಪರಾರಿ]
ಅಂದಹಾಗೆ ರೈತರ ಖಾತೆಗೆ ಜಮಾವಣೆ ಆದ ಹಣವನ್ನು ಆಂಧ್ರದ ಕೆಲ ವ್ಯಕ್ತಿಗಳ ಖಾತೆಗೆ ವರ್ಗಾಯಿಸಿರುವುದು ಗೊತ್ತಾಗಿದೆ. ಪೊಲೀಸರು ಹಲವು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.