ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ : ಈಶ್ವರಪ್ಪ
ಶಿವಮೊಗ್ಗ, ಆಗಸ್ಟ್ 09 : 'ಬಿಜೆಪಿಯಲ್ಲಿ ಸಣ್ಣ-ಪುಟ್ಟ ಅಸಮಾಧಾನಗಳು ಇರುವುದು ನಿಜ. ಅವುಗಳನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ಯಡಿಯೂರಪ್ಪ ಅವರು ನಮ್ಮ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ' ಎಂದು ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.
ಶಿವಮೊಗ್ಗದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು,'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಮಾತನಾಡಿದರು. ಪಕ್ಷದ ಬಲವದರ್ಧನೆಗಾಗಿ ಬ್ರಿಗೇಡ್ ರಚನೆ ಮಾಡಲಾಗುತ್ತಿದೆ' ಎಂದರು.[ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಕೆ.ಎಸ್.ಈಶ್ವರಪ್ಪ]
'ನಮ್ಮ ನಡುವೆ ಒಡಕು ಉಂಟಾದರೆ ಅದರ ಲಾಭವನ್ನು ಕಾಂಗ್ರೆಸ್ ಪಕ್ಷ ಪಡೆಯಲಿದೆ. ಪಕ್ಷದಲ್ಲಿ ಚಿಕ್ಕ-ಪುಟ್ಟ ಗೊಂದಲಗಳಿರುವುದು ನಿಜ. ಅವುಗಳ ಬಗ್ಗೆ ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಿ, ಬಗೆಹರಿಸಿಕೊಳ್ಳುತ್ತೇವೆ' ಎಂದು ಈಶ್ವರಪ್ಪ ತಿಳಿಸಿದರು.[ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಅಸಮಾಧಾನ]
'ಆಗಸ್ಟ್ 16ರಂದು ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ಕೋರ್ ಕಮಿಟಿ ಸಭೆ ಕರೆದಿದ್ದಾರೆ. ಪಕ್ಷದಲ್ಲಿನ ಗೊಂದಲಗಳ ಬಗ್ಗೆ ಅಲ್ಲಿ ಚರ್ಚೆ ನಡೆಸಲಾಗುತ್ತದೆ. ಮಾತುಕತೆ ಮೂಲಕ ಎಲ್ಲವನ್ನು ಬಗೆಹರಿಸಿಕೊಳ್ಳುತ್ತೇವೆ' ಎಂದರು.[ಕಾಂಗ್ರೆಸ್, ಬಿಜೆಪಿಗೆ ಬಿಸಿ ತುಪ್ಪವಾದ ಭಿನ್ನಮತ!]
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ : ಕೆ.ಎಸ್.ಈಶ್ವರಪ್ಪ ಅವರು ಸೋಮವಾರ ಬೆಂಗಳೂರಿನಲ್ಲಿ ಕುರುಬ ಮತ್ತು ಅಹಿಂದ ನಾಯಕರನ್ನು ಒಟ್ಟಾಗಿ ಸೇರಿಸಿ ಸಭೆ ನಡೆಸಿದ್ದರು. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ರಚನೆ ಮಾಡಲು ಪೂರ್ವಭಾವಿ ಸಭೆ ಕರೆದಿದ್ದರು.
ಈಶ್ವರಪ್ಪ ಅವರು ಬ್ರಿಗೇಡ್ ಸ್ಥಾಪನೆ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಇಂದು ಈಶ್ವರಪ್ಪ ಅವರು, '2018ರ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಪಕ್ಷದ ಒಳಿತಿಗಾಗಿಯೇ ಬ್ರಿಗೇಡ್ ಸ್ಥಾಪನೆ ಮಾಡಲಾಗುತ್ತಿದೆ' ಎಂದು ಸ್ಪಷ್ಟಪಡಿಸಿದರು.