ಧಗಧಗನೆ ಹೊತ್ತಿ ಉರಿದ ಟ್ರಾಕ್ಟರ್: ತಪ್ಪಿದ ಭಾರಿ ಅನಾಹುತ
ಶಿವಮೊಗ್ಗ, ಜನವರಿ 06: ಕರೆಂಟ್ ವೈರುಗಳು ಟ್ರಾಕ್ಟರ್ ಗೆ ತಗುಲಿ ಟ್ರ್ಯಾಕ್ಟರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಟ್ರ್ಯಾಕ್ಟರ್ ಜತೆಗೆ ಸಾವಿರಗಟ್ಟಲೆ ಬೆಲೆ ಬಾಳುವ ಹುಲ್ಲು ಕೂಡ ಸುಟ್ಟು ಭಸ್ಮವಾದ ಘಟನೆ ಶನಿವಾರ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಹತ್ತಿರದ ಎನ್ಸಿಸಿ ಕಚೇರಿ ಪಕ್ಕದ ರಸ್ತೆಯಲ್ಲಿ, ಘಟನೆ ನಡೆದಿದೆ. ಮಹಾವೀರ ಗೋಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದ ಹುಲ್ಲು ಬೆಂಕಿಗಾಹುತಿಯಾಗಿದೆ. ಬಿ.ಹೆಚ್.ರಸ್ತೆಯಿಂದ ಗೋಶಾಲೆಗೆ ತೆರಳುವ ರೋಡ್ನಲ್ಲಿ ಕರೆಂಟ್ ವೈರ್ಗಳು ಕೆಳಗೆ ಜೋತು ಬಿದ್ದಿವೆ.
ಟ್ರಾಕ್ಟರ್ ರಸ್ತೆಗೆ ಎಂಟ್ರಿ ಕೊಡುತ್ತಿದ್ದಂತೆ, ಹುಲ್ಲಿಗೆ ವೈರ್ ತಗುಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕ್ಷಣಾರ್ಧದಲ್ಲೇ ತಪ್ಪಿತು ಭಾರೀ ಅನಾಹುತ: ಹುಲ್ಲಿಗೆ ಬೆಂಕಿ ಹೊತ್ತುಕೊಂಡಿದ್ದನ್ನು ಸ್ಥಳೀಯರು ತಿಳಿಸುತ್ತಿದ್ದಂತೆ, ಟ್ರಾಕ್ಟರ್ ಚಾಲಕ ಎಚ್ಚೆತ್ತುಕೊಂಡಿದ್ದಾನೆ. ಕೂಡಲೇ ಟ್ರಾಕ್ಟರ್ ಟ್ರಾಲಿ ಮತ್ತು ಎಂಜಿನ್ ಬೇರ್ಪಡಿಸಿದ್ದಾನೆ. ಇನ್ನು, ಟ್ರಾಕ್ಟರ್ ನಿಲ್ಲಿಸಿದ ಜಾಗದ ಪಕ್ಕದಲ್ಲೇ ಅಂಗನವಾಡಿ ಕೇಂದ್ರವಿದೆ. ವಿಷಯ ಗೊತ್ತಾಗುತ್ತಿದ್ದಂತೆ ಪೋಷಕರು ಸ್ಥಳದಲ್ಲಿ ಜಮಾಯಿಸಿದರು.
ಬೆಂಕಿ ಹೊತ್ತುಕೊಂಡ ವಿಚಾರ ಗೊತ್ತಾಗುತ್ತಿದ್ದಂತೆ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿದರು. ಪುರಲೆಯ ಉಮೇಶ್ ಅವರಿಗೆ ಸೇರಿದ ಟ್ರಾಕ್ಟರ್ನಲ್ಲಿ, ಗೋಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದ, ಸುಮಾರು 20 ಸಾವಿರ ಮೌಲ್ಯದ ಹುಲ್ಲು ಸುಟ್ಟು ಭಸ್ಮವಾಗಿದೆ.