ಡಿ.ಎಸ್.ನಾಗಭೂಷಣ ರಾಜ್ಯೋತ್ಸವ ಪ್ರಶಸ್ತಿ ತಿರಸ್ಕರಿಸಿದ್ದೇಕೆ?
ಶಿವಮೊಗ್ಗ, ಅಕ್ಟೋಬರ್ 31 : ಸಾಹಿತಿ ಡಿ.ಎಸ್.ನಾಗಭೂಷಣ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಅವರು ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಕರ್ನಾಟಕ ಸರ್ಕಾರ ಸಾಹಿತ್ಯ ಕ್ಷೇತ್ರ ವಿಭಾಗದಲ್ಲಿ ಡಿ.ಎಸ್.ನಾಗಭೂಷಣ ಅವರಿಗೆ ಪ್ರಶಸ್ತಿ ಘೋಷಣೆ ಮಾಡಿತ್ತು. ಪ್ರಶಸ್ತಿ ತಿರಸ್ಕರಿಸಿರುವ ಅವರು ಏಕೆ ಪ್ರಶಸ್ತಿ ನೀಡುತ್ತಿಲ್ಲ ಎಂದು ವಿವರಣೆ ನೀಡಿದ್ದಾರೆ. ಅದರ ವಿವರಗಳು ಕೆಳಗಿನಂತಿವೆ....
ರಾಜ್ಯೋತ್ಸವ ಪ್ರಶಸ್ತಿ ತಿರಸ್ಕರಿಸಿದ ಡಾ.ರವೀಂದ್ರನಾಥ್ ಶಾನುಭಾಗ್
* ನಾನು ನನ್ನ ಕರ್ತವ್ಯವೆಂದು ಭಾವಿಸಿ ಮಾಡಿದ ನಾಡು-ನುಡಿಗಳ ಅಲ್ಪ ಸೇವೆಯನ್ನು ಮಾನ್ಯ ಮಾಡಿ ಘನ ಕರ್ನಾಟಕ ಸರ್ಕಾರವು ನನಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿರ್ಧರಿಸುವುದಕ್ಕಾಗಿ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸ ಬಯಸುತ್ತೇನೆ.
* ನಾಡು-ನುಡಿಗಳಿಗೆ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿಯ ಮಾನ್ಯತೆಯನ್ನು ನೀಡುವುದು ಕೂಡ ನಾಡು-ನುಡಿಗಳಿಗೆ ಸಲ್ಲಿಸುವ ಸೇವೆಯೇ ಆಗಿದೆ. ಆದರೆ ನನಗೆ ನೀಡಲಾಗಿರುವ ಈ ಪ್ರಶಸ್ತಿಯನ್ನು ನಾನು ಸ್ವೀಕರಿಸಲು ಇಂದಿನ ಸಂದರ್ಭದಲ್ಲಿ ನನಗೆ ಮನಸ್ಸಾಗುತ್ತಿಲ್ಲವೆಂಬುದನ್ನೂ ಈ ಮೂಲಕ ತಿಳಿಸಬಯಸುವೆ.
* ರಾಜ್ಯೋತ್ಸವವೆಂಬುದು ನಮ್ಮ ಕನ್ನಡ ರಾಜ್ಯೋದಯದ ಸಂಭ್ರಮದ ಆಚರಣೆಯೇ ಆಗಿದೆ. ಈ ರಾಜ್ಯೋದಯಕ್ಕೆ ಕಾರಣವಾದ ಕರ್ನಾಟಕ ಏಕೀಕರಣ ಆಂದೋಲನದ ಕೇಂದ್ರ ಕಾಳಜಿಯಾಗಿದ್ದುದು, ಕರ್ನಾಟಕದ ಮಕ್ಕಳು ಕನ್ನಡವನ್ನು ತಮ್ಮ ಬದುಕಿನ ಭಾಷೆಯಾಗಿ ಬಳಸಿ ಬೆಳಸಬೇಕೆಂಬುದು. ಇದನ್ನು ಸಾಧ್ಯಮಾಡುವ ಏಕೈಕ ಮಾರ್ಗವೆಂದರೆ, ಕನ್ನಡವು ಶಿಕ್ಷಣದ ಮಾಧ್ಯಮವಾಗುವುದು.
2017ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
* ಪ್ರಾಥಮಿಕ ಶಾಲಾ ಶಿಕ್ಷಣದ ಹಂತದವರೆಗಾದರೂ ಮಕ್ಕಳಿಗೆ ಶಿಕ್ಷಣ ಮಾಧ್ಯಮವು ಕನ್ನಡವಾಗಿರಬೇಕೆಂಬ ಕರ್ನಾಟಕದ ಜನತೆಯ ಪ್ರತಿನಿಧಿಯಾದ ಕರ್ನಾಟಕ ಸರ್ಕಾರದ ಸಂಕಲ್ಪ ಇನ್ನೂ ಈಡೇರಿಲ್ಲ. ಅದರ ಎರಡು ದಶಕಗಳ ನ್ಯಾಯಾಂಗ ಹೋರಾಟವೂ ವಿಫಲವಾಗಿದೆ. ಇದಕ್ಕೆ ಕಾರಣ ನಮ್ಮ ರಾಷ್ಟ್ರ ಕಲ್ಪನೆಯ ಪ್ರಣಾಳಿಕೆಯಂತಿರುವ ನಮ್ಮ ಸಂವಿಧಾನವೇ ಅದಕ್ಕೆ ವಿರೋಧವಾಗಿರುವುದು.
* ರಾಷ್ಟ್ರ ಕಲ್ಪನೆಯಲ್ಲಿನ ಈ ಸಾಂವಿಧಾನಿಕ ವಿರೋಧಾಭಾಸವನ್ನು ಸರಿಪಡಿಸಿ ನಮ್ಮ ರಾಷ್ಟ್ರದ ಸಾಂಸ್ಕೃತಿಕ ಅಸ್ತಿತ್ವದ ಮೂಲಾಧಾರವಾದ ಜನಸಮುದಾಯಗಳ ಭಾಷೆಗಳ ಪ್ರಾಧಾನ್ಯತೆಯನ್ನು ರಾಷ್ಟ್ರದ ಬದುಕಿನಲ್ಲಿ ಮರುಸ್ಥಾಪಿಸಬೇಕಾದ್ದು ಜನತೆಯ ಪ್ರತಿನಿಧಿಯಾದ ಸರ್ಕಾರದ ಕರ್ತವ್ಯ.
ಕೌದಿ ಕಲೆಯ ಶಾಣಮ್ಮಗೆ ಒಲಿದು ಬಂತು ರಾಜ್ಯೋತ್ಸವ ಪ್ರಶಸ್ತಿ
* ಆದರೆ ಕರ್ನಾಟಕ ಸರ್ಕಾರವೂ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕನ್ನಡದಲ್ಲೇ ಒದಗಿಸುವ ತನ್ನ ಸಂಕಲ್ಪಕ್ಕೆ ಸಂವಿಧಾನವೇ ಅಡ್ಡಿಯಾಗಿದೆ ಎಂಬುದನ್ನು ಈ ಸಂಬಂಧದ ನಮ್ಮ ಸುಪ್ರೀಂಕೋರ್ಟ್ ತೀರ್ಪಿನಿಂದ ಮೂರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರೂ, ಅದನ್ನು ಸರಿಪಡಿಸುವ ಯಾವ ಕ್ರಮವನ್ನೂ ಈವರೆಗೆ ಕೈಗೊಳ್ಳದಿರುವುದು ದುರದೃಷ್ಟಕರ.
* ಕಳೆದ ವರ್ಷದ ರಾಜ್ಯೋತ್ಸವ ಸಂದರ್ಭದ ಒಂದು ಭಾಷಣದಲ್ಲಿ ನಮ್ಮ ಮುಖ್ಯಮಂತ್ರಿಗಳು ಈ ಸಂಬಂಧವಾದ ಸಂವಿಧಾನ ತಿದ್ದುಪಡಿ ಮಾಡಬೇಕೆಂದು ಪ್ರಧಾನ ಮಂತ್ರಿಯವರನ್ನು ಆಗ್ರಹಿಸಿದ್ದನ್ನು ಬಿಟ್ಟರೆ ತಮ್ಮ ಸರ್ಕಾರದ ಕಡೆಯಿಂದ ಯಾವ ಕ್ರಮವನ್ನೂ ಕೈಗೊಂಡ ಸೂಚನೆಗಳಿಲ್ಲ. ಬದಲಿಗೆ ಸರ್ಕಾರವು ಈ ಇಡೀ ವಿಷಯವನ್ನು ಮುಗಿದ ಅಧ್ಯಾಯವೆಂದು ಕೈಚೆಲ್ಲಿ, ಈ ಸಂಬಂಧದ ಈವರೆಗಿನ ಹೋರಾಟವನ್ನು ಇತಿಹಾಸಕ್ಕೆ ಸರಿಸುವ ಪ್ರಯತ್ನ ಮಾಡುತ್ತಿರುವಂತಿದೆ. ಇದರ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಸಂಖ್ಯೆ ಒಂದೇ ಸಮನೆ ಇಳಿಮುಖವಾಗುತ್ತಿದೆ.
* ರಾಜ್ಯೋತ್ಸವದ ಸಂದರ್ಭದಲ್ಲಿಯಾದರೂ ಈ ದುರಂತಮಯ ಬೆಳವಣಿಗೆಯ ಅಂತಿಮ ಪರಿಣಾಮವಾದರೂ ಏನಾಗಬಹುದು? ಎಂಬುದನ್ನು ಯೋಚಿಸಿ ಇದಕ್ಕೆ ಪರಿಹಾರ ಹುಡುಕುವ ಪ್ರಯತ್ನದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ.
* ಶಿಕ್ಷಣ ಮಾಧ್ಯಮದ ಸಂಬಂಧವಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು ಕರ್ನಾಟಕ ಸರ್ಕಾರವೇ ಆದುದರಿಂದ, ಈಗ ಅದಕ್ಕೆ ತಡೆಯಾಗಿರುವ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಬೇಕಾದುದೂ ಸರ್ಕಾರದ ಹೊಣೆಯೇ ಆಗಿದೆ. ಆದರೆ, ಮೂರು ವರ್ಷಗಳಾದರೂ ಇದಕ್ಕಾಗಿ ಮೀನ-ಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ಮನೋಭಾವದ ಬಗೆಗಿನ ನನ್ನ ತೀವ್ರ ಅಸಮಧಾನ ಸೂಚಿಸಲು ನಾನು ಅದು ನೀಡುತ್ತಿರುವ ಈ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸದಿರಲು ನಿರ್ಧರಿಸಿದ್ದೇನೆ.
* ಈಗಲಾದರೂ ನಮ್ಮ ರಾಜ್ಯ ಸರ್ಕಾರವು ಅಗತ್ಯ ಕಂಡುಬಂದರೆ ಸಮಾನ ಮನಸ್ಕ ಇತರ ರಾಜ್ಯ ಸರ್ಕಾರ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ, ರಾಜ್ಯಗಳ ಭಾಷೆಗಳನ್ನು ಆಯಾ ರಾಜ್ಯಗಳಲ್ಲಿನ ಪ್ರಾಥಮಿಕ ಶಿಕ್ಷಣದ ಮಾಧ್ಯಮವನ್ನಾಗಿ ಮಾಡುವುದಕ್ಕೆ ಅಡ್ಡಿಯಾಗಿರುವ ಸಂವಿಧಾನದ ವಿಧಿಗಳಿಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನಗಳನ್ನು ಆರಂಭಿಸುವಂತೆ ಕೋರುತ್ತೇನೆ.
* ಇದರಿಂದಾಗಿ ರಾಜ್ಯದ ಎಲ್ಲ ಪಠ್ಯಕ್ರಮಗಳ ಮತ್ತು ಎಲ್ಲ ಮಾದರಿಗಳ ಶಾಲೆಗಳಲ್ಲೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕೆಂದು ಆದೇಶಿಸುವ ರಾಜ್ಯ ಸರ್ಕಾರದ ಇತ್ತೀಚಿನ ಆಜ್ಞೆಗಳಿಗೂ ಸಾಂವಿಧಾನಿಕ ಬಲ ಬಂದಂತಾಗುತ್ತದೆ. ಇಲ್ಲದೆ ಹೋದರೆ ಈ ಆಜ್ಞೆಗಳೂ ಶಿಕ್ಷಣ ಮಾಧ್ಯಮದ ಆಜ್ಞೆಯಂತೆಯೇ ನ್ಯಾಯಾಂಗದಿಂದ ಅಸಿಂಧು ಎನಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ.