ಟ್ರಿಗರ್ ಎಳೆಯುವ ಮುನ್ನ ನಡೆದಿದ್ದೇನು? ಸುಪಾರಿ ಕಿಲ್ಲರ್ ಮನ ಕರಗಿದ್ದೇಕೆ?
ಶಿವಮೊಗ್ಗ, ಸೆಪ್ಟೆಂಬರ್ 27: 'ಇನ್ನೇನು ಟ್ರಿಗರ್ ಎಳೆದು, ಕೆಲಸ ಮುಗಿಸಿಬಿಡಬೇಕು, ಸುಪಾರಿ ಕಿಲ್ಲರ್ ನ ಕೈಯಲ್ಲಿದ್ದ ರಿವಾಲ್ವರ್ ಹಠಾತ್ತನೆ ಸುಮ್ಮನಾಗಿತ್ತು. ಮನಸ್ಸಲ್ಲಿ ಅರಿಯದ ಕಳವಳ... ಮೂರು ಬಾರಿ ಹೀಗೆ ಕೊಲ್ಲುವುದಕ್ಕೆ ಹೋದಾಗಲೂ ಆ ಸುಪಾರಿ ಕಿಲ್ಲರ್ ನನ್ನು ತಡೆದಿದ್ದು ಇದೇ ಮಕ್ಕಳ ಮುದ್ದು ಮುಖ!'
ಘಟನೆ ನಡೆದಿದ್ದು ಶಿವಮೊಗ್ಗದಲ್ಲಿ. ರವೀಂದ್ರ ಗಿರಿ ಎಂಬ ಕಾನ್ ಸ್ಟೇಬಲ್ ತನ್ನ ಪತ್ನಿಯನ್ನು ಕೊಲ್ಲುವುದಕ್ಕೆ ಸುಪಾರಿ ಕಿಲ್ಲರ್ ಜೊತೆ 4 ಲಕ್ಷ ರೂ. ಒಪ್ಪಂದ ಮಾಡಿಕೊಂಡಿದ್ದ.
ಸ್ಫೋಟಕ ಮಾಹಿತಿ: ಪ್ರಣಯ್ ಹತ್ಯೆಗೆ 4 ಬಾರಿ ನಡೆದಿತ್ತು ಸಂಚು!
ದಾವಣಗೆರೆಯ ಅನಿತಾ ಎಂಬ ಮಹಿಳೆಯನ್ನು ಮದುವೆಯಾಗಿದ್ದ ಗಿರಿಗೆ 8 ವರ್ಷ ವಯಸ್ಸಿನ ಮಗ ಮತ್ತು 6 ವರ್ಷ ವಯಸ್ಸಿನ ಮಗಳು ಸಹ ಇದ್ದರು. ಹೊರ ಪ್ರಪಂಚಕ್ಕೆ ಪತಿ ಪತ್ನಿ ಇಬ್ಬರೂ ಅನ್ಯೋನ್ಯವಾಗಿಯೇ ಇದ್ದಂತೆ ಕಂಡುಬರುತ್ತಿದ್ದರು. ಆದರೆ ರವೀಂದ್ರ ಗಿರಿಗೆ ಇನ್ನೊಬ್ಬ ಯುವತಿಯ ಜೊತೆ ಸಂಬಂಧವಿದೆ ಎಂಬುದು ಅನಿತಾಗೆ ತಿಳಿದ ಮೇಲೆ ಇವರ ಸಂಸಾರದಲ್ಲಿ ಕೋಲಾಹಲ ಆರಂಭವಾಗಿತ್ತು.
ಈ ವಿಷಯದಿಂದಾಗಿ ಪ್ರತಿದಿನ ದಂಪತಿ ನಡುವೆ ಜಗಳವಾಗುತ್ತಿತ್ತು. ಜಗಳ ವಿಕೋಪಕ್ಕೆ ತೆರಳಿ, ಗಿರಿಯ ಮನಸ್ಸಿನಲ್ಲಿ ಪತ್ನಿಯನ್ನು ಕೊಲ್ಲುವ ಯೋಚನೆ ಮೊಳಕೆಯೊಡೆದಿತ್ತು. ಇದಕ್ಕೆ ಸೂಕ್ತ ವ್ಯಕ್ತಿಯಾಗಿ ಕಂಡಿದ್ದು ಸುಪಾರಿ ಕಿಲ್ಲರ್ ಫಿರೋಜ್.
ಫಿರೋಜ್ ಜೊತೆ ಈ ಹತ್ಯೆ ಸಂಚಿಗೆ ಜೊತೆಯಾಗಿದ್ದು ಸಯ್ಯದ್ ಇರ್ಫಾನ್ ಮತ್ತು ಸುಹೇಲ್.
ಅಪ್ಪನ ಬಲಿದಾನಕ್ಕೆ ಹೆಮ್ಮೆಯಿದೆ, ಆದರೆ?: ಸೈನಿಕನ ಮಗನ ಭಾವುಕ ಮಾತುಗಳು...
ರವೀಂದ್ರ ಗಿರಿಯಿಂದ ಅನಿತಾ ಅವರ ಫೋಟೋ ಪಡೆದು, ನಂತರ ಅವರನ್ನು ಕೊಲ್ಲುವುದಕ್ಕೆಂದು ಮೂರು ಬಾರಿ ತೆರಳಿದ್ದ ಫೀರೋಜ್ ಗೆ, ಇನ್ನೇನು ಟ್ರಿಗರ್ ಎಳೆದು, ಕೆಲಸ ಮುಗಿಸಿಬಿಡಬೇಕು ಎಂಬಷ್ಟರಲ್ಲಿ ಆ ದಂಪತಿಯ ಇಬ್ಬರು ಮುದ್ದು ಮಕ್ಕಳು ನೆನಪಾಗುತ್ತಿದ್ದರು. ಅನಿತಾರನ್ನು ಕೊಂದರೆ ಆ ಇಬ್ಬರು ಮಕ್ಕಳು ಅನಾಥರಾಗುತ್ತಾರೆ ಎಂಬುದನ್ನು ನೆನೆಸಿಕೊಂಡು ಮೂರು ಬಾರಿಯೂ ಅನಿತಾ ಅವರಿಗೆ ಜೀವದಾನ ನೀಡಿ ಹೋಗಿದ್ದ ಫಿರೋಜ್!
ತೆಲಂಗಾಣ ಹತ್ಯೆ: ಅಮ್ಮನಿಗೆ ಮಾಡಿದ ಫೋನ್ ಕರೆಗಳೇ ಪತಿಯ ಜೀವಕ್ಕೆ ಮುಳುವಾದವೇ?
ಸುಪಾರಿ ಕಿಲ್ಲರ್ ಫಿರೋಜ್ ನನ್ನು ಬೇರೆ ಯಾವುದೋ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಪೊಲೀಸರು ಬಂಧಿಸಿದ್ದರು. ಈ ಸಂದರ್ಭದಲ್ಲಿ ಆತನ ಬಳಿ ಅನಿತಾ ಅವರ ಚಿತ್ರವನ್ನು ಕಂಡ ಪೊಲೀಸರು ಈ ಕುರಿತು ಕೂಲಂಕಷ ತನಿಖೆ ನಡೆಸಿದಾಗ ಅನಿತಾ ಅವರ ಕೊಲೆಗೆ, ಪತಿಯೇ ಸುಪಾರಿ ನೀಡಿದ್ದು ಮತ್ತು ಫಿರೋಜ್ ಈ ಕೊಲೆಯನ್ನು ಮಾಡಲು ವಿಫಲವಾಗಿದ್ದ ವಿಷಯ ತಿಳಿದುಬಂದಿದೆ.
ವಿಷಯ ತಿಳಿಯುತ್ತದ್ದಂತೆಯೇ ಫಿರೋಜ್ ಮತ್ತು ಇಬ್ಬರು ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಪತಿಯ ವಿರುದ್ಧ ದೂರು ನೀಡಲು ಅನಿತಾ ಒಪ್ಪದ ಕಾರಣ, ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.