ಕಿಮ್ಮನೆ ರತ್ನಾಕರ್ ಅವರಿಗೆ ಪಕ್ಷದಲ್ಲಿ ಉಜ್ವಲ ಭವಿಷ್ಯವಿದೆ: ಸಿಎಂ
ಶಿವಮೊಗ್ಗ, ಜನವರಿ 06: ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ್ ಅವರನ್ನು ಹಾಡಿ ಹೊಗಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಮ್ಮನೆ ರತ್ನಾಕರ್ ಅವರಂತಹಾ ಸಜ್ಜನ ರಾಜಕಾರಣಿ ರಾಜ್ಯದಲ್ಲಿ ಬಹಳ ಕಡಿಮೆ ಎಂದರು.
ಶಿವಮೊಗ್ಗದ ತೀರ್ಥಹಳ್ಳಿ ಕ್ಷೇತ್ರದಲ್ಲಿ 200 ಕೋಟಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ಘಾಟನೆ ಮಾಡಿದ ಅವರು ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳು
ಕಿಮ್ಮನೆ ರತ್ನಾಕರ್ ಅವರನ್ನು ಅನಿವಾರ್ಯವಾಗಿ ಮಂತ್ರಿ ಮಂಡಲದಿಂದ ಕೈಬಿಡಬೇಕಾಯಿತು, ಆದರೆ ಅವರಿಗೆ ಮುಂದೆ ಇನ್ನೂ ಉತ್ತಮ ಭವಿಷ್ಯ ಇದೆ ಎಂದ ಸಿದ್ದರಾಮಯ್ಯ ಅವರು ಮುಂದಿನ ಕಾಂಗ್ರೆಸ್ ಮತ್ತೆ ಬಾರಿ ಅಧಿಕಾರಕ್ಕೆ ಬಂದರೆ ರತ್ನಾಕರ್ ಅವರಿಗೆ ಮಂತ್ರಿಗಿರಿ ಕೊಡಲಾಗುವುದು ಎಂಬುದನ್ನು ಸೂಚ್ಯವಾಗಿ ತಿಳಿಸಿದರು.
ರತ್ನಾಕರ್ ಅವರಂತಹಾ ಸಜ್ಜನ ರಾಜಕಾರಣಿಯನ್ನು ನಾನು ನೋಡಿಲ್ಲ ಎಂದ ಅವರು, ಮಂತ್ರಿ ಮಂಡಲದಿಂದ ಕೈಬಿಟ್ಟಾಗಲೂ ಅವರು ಅದನ್ನೂ ಸಂತೋಷದಿಂದಲೇ ಸ್ವೀಕರಿಸಿದರು, ನನ್ನೊಂದಿಗೆ ವಾಗ್ವಾದ ಸಹ ಮಾಡಲಿಲ್ಲ ಎಂದು ನೆನೆಸಿಕೊಂಡರು.
ಕೇಂದ್ರಕ್ಕೆ ಶಿಫಾರಸು
ರಾಜ್ಯದಲ್ಲಿ ಶಾಂತಿ ಕದಡಲು ಮುಂದಾಗುವ ಸಂಘಟನೆಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಅಂತಹ ಸಂಘಟನೆಗಳನ್ನು ನಿಷೇಧ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕರಾವಳಿ ಪ್ರದೇಶದಲ್ಲಿ ಬಿಜೆಪಿ ಶಾಂತಿ ಕದಡುವ ಕೆಲಸ ಮಾಡುತ್ತಿದೆ. ಆದುದರಿಂದ ಶಾಂತಿ ಕದಡುವ ಸಂಘಟನೆಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಆದರೆ ಸಂಘಟನೆಗಳ ಹೆಸರು ಹೇಳುವ ಗೋಜಿಗೆ ಅವರು ಹೋಗಲಿಲ್ಲ.
ಆರ್ಎಸ್ಎಸ್ ಐಡಿಯಾಲಜಿಗೆ ಸ್ಥಾನ ಇಲ್ಲ
ಗೌರಿಹಂತಕರ ಸುಳಿವು ಸಿಕ್ಕಿದೆ ಎಂದ ಮುಖ್ಯಮಂತ್ರಿಗಳು ಪೂರ್ಣ ಸಾಕ್ಷಿಗಳು ದೊರೆತ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಪಕ್ಷಕ್ಕೆ ಬರಲು ಹಲವು ಶಾಸಕರು ತಯಾರಿದ್ದಾರೆ ಎಂದ ಅವರು ಕಾಂಗ್ರೆಸ್ ಪಕ್ಷಕ್ಕೆ ಬರಲು ಅನ್ಯ ಪಕ್ಷಗಳ ಹಲವು ಶಾಸಕರು ಸಿದ್ಧರಿದ್ದಾರೆ. ಆದರೆ ಆರ್.ಎಸ್.ಎಸ್. ಐಡಿಯಾಲಜಿ ಹಿನ್ನೆಲೆ ಇರುವವರನ್ನು ಸೇರಿಸಿಕೊಳ್ಳುವುದಿಲ್ಲ ಎಂದರು.
ನಮ್ಮ ಸರ್ಕಾರವೇ ಹೆಚ್ಚು ಹಣ ಕೊಟ್ಟಿದ್ದೇವೆ
ಈ ಬಾರಿ ತೀರ್ಥಹಳ್ಳಿಗೆ ಅನುದಾನ ವಿತರಣೆ ಕಡಿಮೆ ಆಗಿದೆ ಎಂದು ಒಪ್ಪಿಕೊಂಡ ಸಿದ್ದರಾಮಯ್ಯ ಅವರು ತೀರ್ಥಹಳ್ಳಿಯ ರಸ್ತೆ ಅಭಿವೃದ್ಧಿಗೆ ಸರ್ಕಾರ ಹಣ ನೀಡಲಿದೆ ಎಂದು ಹೇಳಿದರು. ಎಲ್ಲಾ ಕ್ಷೇತ್ರಗಳಿಗೂ ನಮ್ಮ ಸರ್ಕಾರ ಕೊಟ್ಟಷ್ಟು ಹಣವನ್ನು ಈವರೆಗೆ ಯಾವ ಸರ್ಕಾರವೂ ನೀಡರಲಿಲ್ಲ ಎಂದು ಅವರು ಹೇಳಿದರು.
ಸರ್ವ ಭಾಗಕ್ಕೂ ಅನ್ವಯವಾಗುವ ಪ್ರಣಾಳಿಕೆ
ರಾಜ್ಯದ ಎಲ್ಲಾ ಭಾಗಕ್ಕೂ ಲಾಭವಾಗುವಂತಹಾ ಪ್ರಣಾಳಿಕೆಯನ್ನು ಈ ಬಾರಿ ಸಿದ್ಧಮಾಡಲಾಗುವುದು ಮತ್ತು ಸರ್ಕಾರದಿಂದ ‘ವಿಷನ್-2025' ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಇವೆರಡನ್ನು ಆಧರಿಸಿ ಹೊಸ ಕಾರ್ಯಕ್ರಮ, ಯೋಜನೆ ರೂಪಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಹೇಳಿದರು.