ಯುವ ಕಾಂಗ್ರೆಸ್ ಚುನಾವಣೆ, ಶಿವಮೊಗ್ಗದಲ್ಲಿ ಡಿಶುಂ ಡಿಶುಂ...
ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗವೇ ಯುವ ಕಾರ್ಯಕರ್ತರ ಮಧ್ಯೆ ಮಾರಾಮಾರಿ ಆಗಿದೆ. ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ ಫಲಿತಾಂಶವು ಗಲಾಟೆಗೆ ಕಾರಣವಾಗಿದೆ
ಶಿವಮೊಗ್ಗ, ಮೇ 19: ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಪದಾಧಿಕಾರಿಗಳ ಆಯ್ಕೆಗೆ ಎಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿದೆ. ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಗುರುವಾರ ಮತ ಎಣಿಕೆ ನಿಗದಿಯಾಗಿತ್ತು. ಆದರೆ ಒಂದು ಗುಂಪು ಚುನಾವಣೆ ಅಕ್ರಮ ನಡೆದಿದೆ ಎಂದು ಆರೋಪಿಸಿತು.
ಕಚೇರಿ ಮುಂಭಾಗ ಧರಣಿ ಕೂಡ ನಡೆಸಿತು. ಈ ವಿಚಾರವಾಗಿಯೇ ಯುವ ಕಾಂಗ್ರೆಸ್ ನ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಅಸಲಿಗೆ ಆಗಿದ್ದೇನೆಂದರೆ ಎಸ್.ರಂಗನಾಥ್ ಬಣದ ಮೂವರು ವಿಜೇತರಾದರು. ಬಾಕಿ ಹುದ್ದೆಗಳಿಗೆ ಮತ ಎಣಿಕೆ ನಡೆಯುವಾಗ ಒಂದು ಬಣ ಆಕ್ಷೇಪ ವ್ಯಕ್ತಪಡಿಸಿತು.[ರಾಜ್ಯದ ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ - ಸಿದ್ದರಾಮಯ್ಯ]
ಇನ್ನು ವಿಜೇತರು ಪಟಾಕಿ ಸಿಡಿಸಿ ಸಂಭ್ರಮಿಸುವ ವೇಳೆ ಎರಡು ಬಣದ ಕಾರ್ಯಕರ್ತರು ಸ್ಥಳದಲ್ಲಿ ಸೇರಿ, ಜೋರಾದ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ಕೆಲವರು ಹೊಡೆದಾಟ ಕೂಡ ಮಾಡಿದರು. ಪಕ್ಷದ ಪ್ರಭಾವಿ ಮುಖಂಡರ ಮಕ್ಕಳು ಕಣದಲ್ಲಿದ್ದರಿಂದ ಪೈಪೋಟಿ ಬಿರುಸಾಗಿತ್ತು. ಸ್ಥಳದಲ್ಲಿದ್ದ ಪೊಲೀಸರೇನೋ ಗುಂಪನ್ನು ಚದುರಿಸಿದರು. ಆದರೆ ಕಾಂಗ್ರೆಸ್ ಕಚೇರಿ ಮುಂಭಾಗದ ರಸ್ತೆ ಸಂಚಾರ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು.
Comments
English summary
After announcement of youth Congress election result in Shivamogga on Thursday, it leads to clashes between two groups.