ರಾಣೆಬೆನ್ನೂರಿನಿಂದ ಸ್ಪರ್ಧಿಸಲಿದ್ದಾರೆ ಬಿಎಸ್ವೈ ಪುತ್ರ ಬಿ.ವೈ.ರಾಘವೇಂದ್ರ?
Recommended Video
ಶಿವಮೊಗ್ಗ, ಅಕ್ಟೋಬರ್ 27 : ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ, ಶಿಕಾರಿಪುರ ಶಾಸಕ ಬಿ.ವೈ.ರಾಘವೇಂದ್ರ ಕ್ಷೇತ್ರ ಬದಲಾವಣೆ ಮಾಡುವ ಸಾಧ್ಯತೆ ಇದೆ. 2018ರ ವಿಧಾನಸಭೆ ಚುನಾವಣೆಗೆ ರಾಘವೇಂದ್ರ ರಾಣೆಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಉತ್ತರ ಕರ್ನಾಟಕದಿಂದ ಬಿಎಸ್ವೈ ಸ್ಪರ್ಧೆ, ಓದುಗರ ಅಭಿಮತ
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರು ಶಿಕಾರಿಪುರದಿಂದ ಸ್ಪರ್ಧಿಸಿದರೆ, ಬಿ.ವೈ.ರಾಘವೇಂದ್ರ ಶಿಕಾರಿಪುರ ಪಕ್ಕದ ರಾಣೆಬೆನ್ನೂರಿನಿಂದ ಸ್ಪರ್ಧಿಸಲಿದ್ದಾರೆ. ಇದು ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ಕ್ಷೇತ್ರ. ಆದರೆ, ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಿಂದ ಅವರ ಪುತ್ರ ಪ್ರಕಾಶ್ ಕೋಳಿವಾಡ ಸ್ಪರ್ಧಿಸುವ ಸಾಧ್ಯತೆ ಇದೆ.
ಬಿಜೆಪಿ ಸೇರುವ ವದಂತಿ ಬಗ್ಗೆ ಪ್ರಕಾಶ್ ಕೋಳಿವಾಡ ಹೇಳಿದ್ದೇನು?
ಯಡಿಯೂರಪ್ಪ ಅವರು ಉತ್ತರ ಕರ್ನಾಟಕ ಭಾಗದ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಅವರು ಉತ್ತರ ಕರ್ನಾಟಕದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೆ ಶಿಕಾರಿಪುರದಿಂದ ಹಾಲಿ ಶಾಸಕ ಬಿ.ವೈ.ರಾಘವೇಂದ್ರ ಅವರೇ ಸ್ಪರ್ಧಿಸಲಿದ್ದಾರೆ. ಯಡಿಯೂರಪ್ಪ ಶಿಕಾರಿಪುರದಿಂದ ಸ್ಪರ್ಧಿಸಿದರೆ ರಾಘವೇಂದ್ರ ಕ್ಷೇತ್ರ ಬದಲಾವಣೆಯಾಗಲಿದೆ.
ಯಡಿಯೂರಪ್ಪ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರ ಅಂತಿಮ?
2013ರ ಚುನಾವಣೆಯಲ್ಲಿ ಕೆ.ಬಿ.ಕೋಳಿವಾಡ ಅವರು 53,780 ಮತಗಳನ್ನು ಪಡೆದು ರಾಣೆಬೆನ್ನೂರು ಕ್ಷೇತ್ರದಲ್ಲಿ ಜಯಗಳಿಸಿದ್ದರು. ಬಿಜೆಪಿಯ ಅಭ್ಯರ್ಥಿ 5ನೇ ಸ್ಥಾನಕ್ಕೆ ಕುಸಿದಿದ್ದರು. ಈ ಬಾರಿ ಕ್ಷೇತ್ರವನ್ನು ವಶಕ್ಕೆ ಪಡೆಯಲು ಬಿಜೆಪಿ ತಂತ್ರ ರೂಪಿಸಿದೆ...
ಯಡಿಯೂರಪ್ಪ ಅವರ ತವರು ಕ್ಷೇತ್ರ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಯಡಿಯೂರಪ್ಪ ಅವರ ತವರು ಕ್ಷೇತ್ರ. 2013ರ ಚುನಾವಣೆಯಲ್ಲಿ ಅವರು ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ ಬಳಿಕ ಯಡಿಯೂರಪ್ಪ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಿದ್ದರು.
ಹೆಚ್ಚು ಸ್ಥಾನಗಳನ್ನು ಗಳಿಸುವ ತಂತ್ರ
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರ ಶಿಕಾರಿಪುರದ ಪಕ್ಕದಲ್ಲಿದೆ. ಯಡಿಯೂರಪ್ಪ ಅವರ ಪ್ರಭಾವ ಇಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಲಿಂಗಾಯತ ಸಮುದಾಯದ ಮತಗಳು ಕ್ಷೇತ್ರದಲ್ಲಿ ನಿರ್ಣಾಯಕವಾಗಿವೆ. ಆದ್ದರಿಂದ, ಬಿ.ವೈ.ರಾಘವೇಂದ್ರ ಅವರನ್ನು ರಾಣೆಬೆನ್ನೂರಿನಲ್ಲಿ ಕಣಕ್ಕಿಳಿಸಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ತಂತ್ರವೂ ಇದೆ.
ರಾಣೆಬೆನ್ನೂರಿನಲ್ಲಿ ಅಭ್ಯರ್ಥಿಗಳ ಕೊರತೆ
ರಾಣೆಬೆನ್ನೂರಿನಿಂದ ಎರಡು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಮಾಜಿ ಶಾಸಕ ಜಿ.ಶಿವಪ್ಪ ಮೃತಪಟ್ಟಿದ್ದಾರೆ. ಆದ್ದರಿಂದ, ಬಿಜೆಪಿ ಅಭ್ಯರ್ಥಿಗಳಿಗಾಗಿ ಹುಡುಕಾಟವನ್ನು ನಡೆಸುತ್ತಿದೆ. ಯಡಿಯೂರಪ್ಪ ಪ್ರಭಾವವೂ ಕ್ಷೇತ್ರದಲ್ಲಿ ಇರುವುದರಿಂದ ಬಿ.ವೈ.ರಾಘವೇಂದ್ರ ಸ್ಪರ್ಧಿಸಿದರೆ ಗೆಲುವು ಸುಲಭ ಎನ್ನುವುದು ಲೆಕ್ಕಾಚಾರ. ರಾಘವೇಂದ್ರ ಅವರು ಪಕ್ಷದ ವಿಸ್ತಾರಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಣೆಬೆನ್ನೂರಿನಲ್ಲಿ ಪ್ರವಾಸ ಮಾಡಿದ್ದಾರೆ.
2013ರ ಚುನಾವಣೆ ಫಲಿತಾಂಶ
2013ರ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ 9,476 ಮತಗಳನ್ನು ಪಡೆದು 5ನೇ ಸ್ಥಾನಕ್ಕೆ ಕುಸಿದಿದ್ದರು. ಕೆಜೆಪಿ ಮತ್ತು ಬಿಜೆಪಿ ನಡುವಿನ ಸ್ಪರ್ಧೆಯಿಂದಾಗಿ ಮತಗಳು ಹಂಚಿ ಹೋಗಿದ್ದವು. ಈ ಬಾರಿ ಕ್ಷೇತ್ರದಲ್ಲಿ ಗೆಲ್ಲಲೇಬೇಕು ಎಂದು ಬಿಜೆಪಿ ನಿರ್ಧರಿಸಿದೆ. ಆದ್ದರಿಂದ ರಾಘವೇಂದ್ರ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಕೆ.ಬಿ.ಕೋಳಿವಾಡ ಸ್ಪರ್ಧೆ ಇಲ್ಲ
ರಾಣೆಬೆನ್ನೂರು ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ಕ್ಷೇತ್ರ. ಆದರೆ, ಈ ಬಾರಿಯ ಚುನಾವಣೆಗೆ ಅವರು ಸ್ಪರ್ಧಿಸುವ ಸಾಧ್ಯತೆ ಕಡಿಮೆ. ಪುತ್ರ ಪ್ರಕಾಶ್ ಕೋಳಿವಾಡ ಅವರನ್ನು ಕಣಕ್ಕಿಳಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಬಿಜೆಪಿಯಿಂದ ರಾಘವೇಂದ್ರ ಸ್ಪರ್ಧಿಸಿ, ಪ್ರಕಾಶ್ ಕೋಳಿವಾಡ ಅವರು ಕಣಕ್ಕಿಳಿದರೆ ಕ್ಷೇತ್ರ ಕುತೂಹಲದ ಕಣವಾಗಲಿದೆ.