ಪುಟ್ಟರಂಗ ಶೆಟ್ಟಿ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಯಡಿಯೂರಪ್ಪ
Recommended Video
ಶಿವಮೊಗ್ಗ, ಜನವರಿ 5: ಸಚಿವ ಪುಟ್ಟರಂಗಶೆಟ್ಟಿ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಹೇಳಿದಂತೆ ಇದು 20 ಪರ್ಸೆಂಟ್ ಸರ್ಕಾರವಾಗಿದೆ. ಸಚಿವರು ಹಗಲು ದೊರೋಡೆಗಿಳಿದಿದ್ದಾರೆ. ಇದಕ್ಕೆ ಈ ಪ್ರಕರಣವೇ ಸಾಕ್ಷಿ, ಆ ಹಣ ಪುಟ್ಟರಂಗಶೆಟ್ಟಿಗೆ ಸೇರಿದ್ದು ಎನ್ನುವುದಕ್ಕೆ ಆ ಕವರ್ ಮೇಲೆ ಬರೆದಿದ್ದ ಹೆಸರೇ ಸಾಕ್ಷಿ ಎಂದು ಹೇಳಿದರು.
ವಿಧಾನಸೌಧದಲ್ಲಿ 25.76ಲಕ್ಷ ಹಣ ಪತ್ತೆ, ವ್ಯಕ್ತಿ ವಶಕ್ಕೆ
ಈ ಕುರಿತು ಮಾಜಿ ಡಿಸಿಎಂ ಆರ್ ಅಶೋಕ್ ಕೂಡ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರನ್ನು ಟ್ಯಾಗ್ ಮಾಡಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಸಂಪುಟ ಸಚಿವ ಪುಟ್ಟರಂಗಶೆಟ್ಟಿ ರವರ ಸಹಾಕರು ಯಾವುದೇ ದಾಖಲೆಗಳಿಲ್ಲದ ಲಕ್ಷ ಲಕ್ಷ ನಗದನ್ನು ಸಾಗಿಸುತ್ತಿದ್ದಾಗ ಸಿಕ್ಕಿಹಾಕಿಕೊಂಡಿದ್ದಾರೆ. ಈ ಬೆಳವಣಿಗೆ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯ ಮತ್ತೊಂದು ನಿದರ್ಶನದಂತಿದೆ ಎಂದು ಹೇಳಿದ್ದಾರೆ.
ಘಟನೆ ಏನು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ ಪುಟ್ಟರಂಗಶೆಟ್ಟಿ ಅವರ ಕಚೇರಿ ಸಿಬ್ಬಂದಿ 25.76 ಲಕ್ಷ ರೂ ನಗದು ಸಮೇತ ವಿಧಾನಸೌಧದ ಭದ್ರತಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಸಚಿವರ ಕೊಠಡಿಯಲ್ಲಿ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ವಿಧಾನಸೌಧದಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುತ್ತೇನೆ, ಇದು ನ್ನೊಬ್ಬನಿಂದಲೇ ಸಾಧ್ಯವಿಲ್ಲ, ನಾನು ಇರುವಷ್ಟು ದಿನ ಎಷ್ಟು ಸಾಧ್ಯವೋ ಅಷ್ಟು ಕಡಿವಾಣ ಹಾಕುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಜೂನ್ 11 ರಂದು ಹೇಳಿದ್ದರು.
ಇದಾದ ಆರು ತಿಂಗಳಲ್ಲೇ ಭ್ರಷ್ಟಾಚಾರ ಪ್ರಕರಣ ನಡೆದಿದೆ. ಸಚಿವರ ಕಚೇರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿರುವ ಮೋಹನ್ ಸಿಕ್ಕಿಬದ್ದಿರುವ ವ್ಯಕ್ತಿ, ಶುಕ್ರವಾರ ರಾತ್ರಿವರೆಗೂ ಹಿರಿಯ ಅಧಿಕಾರಿಗಳು ಹಣದ ಮೂಲದ ಬಗ್ಗೆ ಪ್ರಶ್ನಿಸಿದ್ದು, ಈ ಕುರಿತು ವಿಧಾನಸೌಧದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರತಾ ವಿಭಾಗದ ಡಿಸಿಪಿ ಸಿದ್ದರಾಜು ಮತ್ತು ಎಸಿಪಿ ಮಂಜುನಾಥ್ ನೇತೃತ್ವದಲ್ಲಿ ತನಿಖೆ ಮತ್ತು ಹಣ ಎಣಿಕೆ ಕಾರ್ಯ ನಡೆದಿದೆ. ಒಟ್ಟು 25.76 ಲಕ್ಷ ರೂ ನಗದು ಮೋಹನ್ ಬ್ಯಾಗ್ನಲ್ಲಿ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮೋಹನ್ ಅವರ ವಿಚಾರಣೆ ಆರಂಭಿಸಿದ್ದಾರೆ.