ತೇರದಾಳ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿದ್ದು ನಿಜ: ಬಿಎಸ್ವೈ
ಶಿವಮೊಗ್ಗ, ಸೆಪ್ಟೆಂಬರ್ 27 : 2018ರ ವಿಧಾನಸಭೆ ಚುನವಾಣೆಗೆ ಕ್ಷೇತ್ರ ಬದಲಾವಣೆ ಮಾಡುತ್ತಾರೆ ಎನ್ನುವ ಬಗ್ಗೆ ಸ್ವತಃ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರ ಅಂತಿಮ?
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಉತ್ತರ ಕರ್ನಾಟಕದ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸಲು ನನ್ನ ಪಕ್ಷದ ಹಿರಿಯರು ಮತ್ತು ಹೈಕಮಾಂಡ್ ಸೂಚಿಸಿದ್ದು ನಿಜ. ಆದರೆ, ರಾಜಕೀಯ ಬದುಕು ಕೊಟ್ಟ ಕ್ಷೇತ್ರ ಬಿಟ್ಟು ತಾವು ಬೇರೆಡೆ ಸ್ಪರ್ದಿಸಬಾರದು ಎಂದು ಅಭಿಮಾನಿಗಳು ಮತದಾರರು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಪುನಃ ಪಕ್ಷದ ಹೈಕಮಂಡ್ ಗೆ ಮನವೊಲಿಸಿ ಶಿಕಾರಿಪುರದಿಂದಲೇ ಸ್ಪರ್ದಿಸಲು ಪ್ರಯತ್ನ ಮಾಡುತ್ತೇನೆ ಎಂದರು.
ಬೇರೆ ಯಾವ ರಾಜ್ಯದ ಪ್ರಮುಖ ನಾಯಕರಿಗೆ ಕ್ಷೇತ್ರ ಬದಲಾಯಿಸಲು ಹೈಕಮಾಂಡ್ ಸೂಚಿಸಿದೆಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಡ್ಡಿಯೂರಪ್ಪ ಬೇರೆ ಯಾವ ರಾಜ್ಯದ ನಾಯಕರಿಗೆ ಹೈಕಮಾಂಡ್ ಕ್ಷೇತ್ರ ಬದಲಾವಣೆಗೆ ಸೂಚಿಸಿಲ್ಲಾ ಎಂದರು.
ರಾಜ್ಯ ಸರ್ಕಾರದ ಭ್ರಷ್ಟಾಚಾರದ ಕುರಿತು ಸಚಿವರ ಪಟ್ಟಿಯನ್ನ ಅತಿಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗವುದು ಎಂದು ಹೇಳಿದ್ದೀರಿ ಆದರೆ ಇದುವರೆಗೂ ಪಟ್ಟಿ ಬಿಡುಗಡೆಯಾಗಿಲ್ಲ ವಿಳಂಬವೇಕೆ ಪ್ರಶ್ನೆಗೆ ಉತ್ತರಿಸಿದ ಬಿಎಸ್ ವೈ, ರಾಜ್ಯ ನಾಯಕರು ಮತ್ತು ಹೈಕಮಾಂಡ್ ಜತೆ ಚರ್ಚೆ ನಡೆಸಿ ಯಾವಾಗ ಬಿಡುಗಡೆ ಮಾಡಬೇಕು ಎಂದು ನಿರ್ಣಯಿಸಿದ ನಂತರ ಸಚಿವರ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ವೀರಶೈವ ಮತ್ತು ಲಿಂಗಾಯಿತ ಧರ್ಮದ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಅಖಿಲ ಭಾರತೀಯ ವೀರಶೈವ ಮಹಾಸಭಾದಲ್ಲಿ ನಿರ್ಣಯಕೈಗೊಂಡಂತೆ ಎರಡೂ ಒಂದೆ ಧರ್ಮ ಇದನ್ನು ಪ್ರತ್ಯೇಕಿಸಲು ಯಾರಿಂದಲೂ ಸಾದ್ಯವಿಲ್ಲ ಎಂದರು.
ಗೋಮಾಂಸದ ಬಗ್ಗೆ ಮತ್ತು ಬ್ರಾಹ್ಮಣರು ಮಾಂಸ ತಿನ್ನುತ್ತಾರೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮೊನ್ನೆ ಮಾದ್ಯಮದೊಂದಿಗೆ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿಎಸ್ ಯಡ್ಡಿಯೂರಪ್ಪ ಕಿಡಿಕಾರಿದರು.
ಗೋಮಾಂಸವನ್ನ ಮತ್ತು ಎಲ್ಲಾ ಮಾಂಸವು ಒಂದೆ ಎನ್ನವ ಮತ್ತು ಇಂದು ಎಲ್ಲಾ ಬ್ರಾಹ್ಮಣರು ಮಾಂಸ ತಿನ್ನುತ್ತಾರೆ ಎಂದು ಹಗುರವಾಗಿ ಮಾತನಾಡುವ ಕಾಗೋಡು ತಿಮ್ಮಪ್ಪ ಒಂದು ಸಮುದಾಯವನ್ನ ಗುರಿಯಾಗಿಸಿಕೊಂಡು ಹೇಳಿಕೆ ನೀಡಿರುವುದು ಆ ಸಮುದಾಯಕ್ಕೆ ಮಾಡಿದ ಅಪಮಾನ. ಸಚಿವರಾಗಿ ಈ ರೀತಿ ಹೇಳಿಕೆ ನೀಡಬಾರದು ಸಲಹೆ ನೀಡಿದರು.