ಸಿದ್ದು ಸಾಧನಾ ಯಾತ್ರೆಗೆ ಬಿಜೆಪಿಯ ಆಯನೂರು ಮಂಜುನಾಥ್ ಬೆಂಕಿಯಂಥ ಪ್ರಶ್ನೆಗಳು
ಶಿವಮೊಗ್ಗ, ಜನವರಿ 8: ಸರಕಾರಿ ಹಣ ಹಾಗೂ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಸಮಾವೇಶ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಮ್ಮ ನೋವು-ನಲಿವು, ದುಃಖ-ದುಮ್ಮಾನಗಳನ್ನು ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು.
ಬಂಗಾರಪ್ಪ ಪಕ್ಷಾಂತರ ಬಿಜೆಪಿಗೇ ಒಳ್ಳೆಯದು : ಆಯನೂರು
ಕಾರ್ಯಕ್ರಮಕ್ಕೆ ಪೊಲೀಸರ ಬಿಗಿ ಸರ್ಪಗಾವಲು ಹಾಕಲಾಗಿತ್ತು. ಸಾಮಾನ್ಯ ಜನರು ಸಿಎಂಗೆ ಮನವಿ ಕೊಡುವುದಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಿಸಲಾಗಿತ್ತು. ಸಿಎಂ ಭೇಟಿಯಿಂದ ಜಿಲ್ಲೆಗೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ದೂರಿದರು.
ಸ್ಮಾರ್ಟ್ ಸಿಟಿಗಳಿಗೆ ರಾಜ್ಯ ಸರಕಾರದ ಪಾಲನ್ನು ಇದುವರೆಗೂ ನೀಡಿಲ್ಲ. ಕೇಂದ್ರ ಸರಕಾರ ಜಾರಿಗೊಳಿಸಿದ ಯೋಜನೆಗಳು ಹಾಗೂ ಈ ಹಿಂದಿನ ಸರಕಾರಗಳ ಅವಧಿಯಲ್ಲಿ ಜಾರಿಗೊಂಡಿದ್ದ ಕಾಮಗಾರಿಗಳನ್ನು ಉದ್ಘಾಟಿಸಿದ್ದಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಯಾತ್ರೆ ವಿರುದ್ಧ ಹೈಕೋರ್ಟ್ಗೆ ಪಿಐಎಲ್!
ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪರ ವಿರುದ್ದ ಬಾಯಿಗೆ ಬಂದಂತೆ ಹೇಳಿಕೆ ನೀಡಿರುವುದೇ ಸಿದ್ದರಾಮಯ್ಯ ದೊಡ್ಡ ಸಾಧನೆ. ಆವೇಶದಿಂದ ಕುಣಿದಾಡಿದ್ದನ್ನು ಬಿಟ್ಟರೆ ಬೇರೇನೂ ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದರು.
ಶಿಷ್ಟಾಚಾರ ಉಲ್ಲಂಘನೆ
ಅದೊಂದು ಸರಕಾರಿ ಕಾರ್ಯಕ್ರಮ. ಜಿಲ್ಲಾಡಳಿತವು ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿದೆ. ಸರಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರಾಜಕೀಯ ಭಾಷಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಸಿಇಒ ವೇದಿಕೆಯಲ್ಲಿ ಕುಳಿತುಕೊಂಡಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು. ರಾಜಕೀಯ ಭಾಷಣ ಪ್ರಾರಂಭವಾದಾಗ ಅಧಿಕಾರಿಗಳನ್ನು ವೇದಿಕೆಯಿಂದ ಕಳಿಸಬೇಕಿತ್ತು. ಇಲ್ಲವೇ ಅಧಿಕಾರಿಗಳೆ ಹೊರನಡೆಯಬೇಕಿತ್ತು. ಮುಖ್ಯಮಂತ್ರಿಗಳು ವಿವಿಧ ಪಕ್ಷಗಳ ಮೇಲೆ ಮಾಡಿದ ಟೀಕೆಗೆ ಡಿಸಿ, ಸಿಇಒ ಕೂಡ ಪಾಲುದಾರರು ಎಂದು ಆರೋಪಿಸಿದರು.
ಅಧಿಕಾರಿಗಳ ವಿರುದ್ಧ ಬಿಜೆಪಿ ಪ್ರತಿಭಟನೆ
ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಸರಕಾರಿ ಅಧಿಕಾರಿಗಳೋ ಅಥವಾ ಕಾಂಗ್ರೆಸ್ ನಾಯಕರೋ ತಿಳಿಸಬೇಕು. ಅಧಿಕಾರಿಗಳಿಗೆ ಶಿಷ್ಟಾಚಾರ ಪಾಲನೆ ಮಾಡುವ ಸಾಮಾನ್ಯ ಜ್ಞಾನ ಇರಬೇಕಿತ್ತು. ರಾಜಕೀಯಕ್ಕೆ ಬರುವುದಾದರೆ ನೌಕರಿಗೆ ರಾಜೀನಾಮೆ ನೀಡಲಿ. ಶಿಷ್ಟಾಚಾರವನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿರುವ ಈ ಇಬ್ಬರು ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯರ ಗುಲಾಮರಂತೆ ನಡೆದುಕೊಂಡಿದ್ದಾರೆ. ಇವರು ಜನತೆಯ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಬಿಜೆಪಿ ಸದ್ಯದಲ್ಲೇ ಪ್ರತಿಭಟನೆ ನಡೆಸುತ್ತದೆ. ಮುಖ್ಯಕಾರ್ಯದರ್ಶಿಗೆ ದೂರು ಸಲ್ಲಿಸಲಿದೆ ಎಂದರು.
ಮಾಧ್ಯಮದವರ ಮೇಲೆ ಹಲ್ಲೆ
ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ದರ್ಪವನ್ನು ತೋರಿಸಿದ್ದಾರೆ. ಮಾಧ್ಯಮದವರಿಗೂ ಅದರ ರುಚಿ ಕಂಡಿದೆ. ದಾವಣಗೆರೆ ಎಸ್ಪಿರ ಉದ್ಧಟತನವನ್ನು ನೋಡಿದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಬಂದಿದ್ದರೋ ಅಥವಾ ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ಬಂದಿದ್ದರೋ ಎಂಬ ಅನುಮಾನ ಕಾಡುತ್ತದೆ. ಮಾಧ್ಯಮದವರ ಮೇಲೂ ಪೊಲೀಸ್ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ. ಈ ಅಧಿಕಾರ ಅವರಿಗಿದೆಯೇ ಎಂದು ಪ್ರಶ್ನಿಸಿದರು.
ಶಾಸಕರ ಮನೆಯಲ್ಲಿ ಇರಬೇಕು!
ನಗರಕ್ಕೆ ವಿವಿಧ ಕಾಮಗಾರಿಗಳಿಗಾಗಿ ರಾಜ್ಯ ಸರಕಾರ ಎರಡು ಸಾವಿರ ಕೋಟಿ ರುಪಾಯಿ ಅನುದಾನ ನೀಡಿದೆ ಎಂದು ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅನುದಾನ ಎಲ್ಲಿಗೆ ಹೋಗಿದೆ, ಎಲ್ಲಿ ವಿನಿಯೋಗವಾಗಿದೆ ಎಂಬುದರ ಲೆಕ್ಕವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕ ಕೆ.ಬಿ. ಪ್ರಸನ್ನಕುಮಾರ್ ನೀಡಬೇಕು. ಕಾಮಗಾರಿ ನಡೆದಿಲ್ಲದಿದ್ದರೆ ಹಣ ಶಾಸಕರ ಮನೆಯಲ್ಲಿದೆಯೇ ಇಲ್ಲವೇ ಎಂಎಲ್ ಸಿ ಗೋವಿಂದರಾಜು ಡೈರಿಯಲ್ಲಿ ಸಿಗುತ್ತದೆಯೋ? ಅಥವಾ ಸಿದ್ದರಾಮಯ್ಯ ಅವರು ನಿದ್ದೆ ಕಣ್ಣಲ್ಲಿ ಬಡಬಡಿಸಿದರೋ ಎಂಬುದನ್ನು ತಿಳಿಸಬೇಕು ಎಂದು ವ್ಯಂಗ್ಯವಾಡಿದರು.