ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ, ಸೊರಬದಲ್ಲಿ ಸಹೋದರರ ಸವಾಲ್
ಸೊರಬ, ಏಪ್ರಿಲ್ 16: ಬಿಜೆಪಿಯು ಇಂದು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರೇಣುಕಾಚಾರ್ಯ, ಕುಮಾರ ಬಂಗಾರಪ್ಪ ಸೇರಿದಂತೆ ಹಲವು ಪ್ರಮುಖರಿಗೆ ಟಿಕೆಟ್ ದಯಪಾಲಿಸಿದೆ.
ತೂಗು ಕತ್ತಿಯ ಮೇಲೆ ನಿಂತಿದ್ದ ಸೊರಬ ಕ್ಷೇತ್ರದ ಬಿಜೆಪಿ ಟಿಕೆಟ್ ಕೊನೆಗೆ ವಲಸಿಗ ಕುಮಾರ ಬಂಗಾರಪ್ಪ ಅವಪಾಲಾಗಿದ್ದು, ಇದೀಗ ಸೊರಬ ಕ್ಷೇತ್ರ ಸಹೋದರರ ಸವಾಲ್ಗೆ ಸಿದ್ಧವಾಗಿದೆ. ಮುತ್ಸದ್ಧಿ ರಾಜಕಾರಣಿ ಬಂಗಾರಪ್ಪ ಅವರ ಮಕ್ಕಳು ಚುನಾವಣಾ ರಣರಂಗದಲ್ಲಿ ಪರಸ್ಪರ ಎದುರಾಗಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಸೊರಬ ಕ್ಷೇತ್ರದಲ್ಲಿ ಕುಮಾರ ಬಂಗಾರಪ್ಪ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದರೆ ಅವರ ಸಹೋದರ ಮಧು ಬಂಗಾರಪ್ಪ ಜೆಡಿಎಸ್ನಿಂದ ಅಖಾಡಕ್ಕಿಳಿದಿದ್ದಾರೆ. ಅಣ್ಣ ತಮ್ಮಂದಿರ ನಡುವೆ ಕೆಲವು ದಿನಗಳ ಹಿಂದೆಯೇ ಮಾತಿನ ಸಮರ ಪ್ರಾರಂಭವಾಗಿತ್ತು. ಇದೀಗ ಅನುಮಾನದಲ್ಲಿದ್ದ ಬಿಜೆಪಿ ಟಿಕೆಟ್ ಕುಮಾರ ಬಂಗಾರಪ್ಪ ಅವರಿಗೆ ದೊರಕುವ ಮೂಲಕ ಸೋದರರ ನಡುವಿನ ಜಟಾಪಟಿ ಇನ್ನಷ್ಟು ರಂಗೇರಲಿದೆ.
ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಈಗಾಗಲೇ ಪ್ರಚಾರ ಪ್ರಾರಂಭಿಸಿದ್ದು, ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಮಧು ಬಂಗಾರಪ್ಪ ಪರ ಪ್ರಚಾರ ಮಾಡುತ್ತಿದ್ದಾರೆ. ಗೀತಾ ಶಿವರಾಜ್ಕುಮಾರ್ ಅವರು ಮಧು ಹಾಗೂ ಕುಮಾರ ಬಂಗಾರಪ್ಪ ಅವರ ಸಹೋದರಿ.
ಬಿಜೆಪಿ ಮೊದಲ ಪಟ್ಟಿ ಬಿಡುಗಡೆ : ಶಿವಮೊಗ್ಗದಲ್ಲಿ ಹೆಚ್ಚಾಯ್ತು ಕುತೂಹಲ!
ಸೊರಬದಲ್ಲಿ ರಾಜು ಎಂ.ತಲ್ಲೂರು ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸಹೋದರರ ಸಮರ ಕುತೂಹಲ ಕೆರಳಿಸಿರುವುದಂತೂ ಖಾತ್ರಿ.