ಶಿವಮೊಗ್ಗದಲ್ಲಿ ಯಡಿಯೂರಪ್ಪ ಗಪ್ ಚುಪ್ ಆಗಿಬಿಟ್ಟರೆ ಈಶು ವಿಲವಿಲ!
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಗಮನ ಸೆಳೆದಿರುವ ಜಿಲ್ಲೆಗಳ ಪೈಕಿ ಶಿವಮೊಗ್ಗ ಮುಖ್ಯವಾದದ್ದು. ಅಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಅತಿರಥ- ಮಹಾರಥ ನಾಯಕರು ಸ್ಪರ್ಧೆಗೆ ಇಳಿದಿದ್ದಾರೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದ ಮೇಲೆ ಇಡೀ ರಾಜ್ಯದ ಕಣ್ಣಿದೆ. ಏಕೆಂದರೆ ಅಲ್ಲಿಂದ ಸ್ಪರ್ಧಿಸುತ್ತಿರುವುದು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ.
ಇನ್ನು ಶಿವಮೊಗ್ಗ ನಗರ ಕ್ಷೇತ್ರದ ಅಖಾಡದಲ್ಲಿರುವುದು ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ನಾಯಕ ಎಂದು ಬಿಂಬಿಸಲಾಗಿರುವ ಕೆ.ಎಸ್.ಈಶ್ವರಪ್ಪ. ಭಾರೀ ತಿಕ್ಕಾಟದ ನಂತರ ಈಶ್ವರಪ್ಪರಂಥ ಹಿರಿಯ ನಾಯಕರಿಗೆ ಬಿಜೆಪಿಯ ಟಿಕೆಟ್ ಸಿಕ್ಕಿದೆ. ಆ ಕ್ಷೇತ್ರದಿಂದ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಯಡಿಯೂರಪ್ಪರಿಗೆ ನಿಷ್ಠರಾದ ರುದ್ರೇಗೌಡರಿಗೆ ಟಿಕೆಟ್ ಎಂದು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೊನೆ ಕ್ಷಣದವರೆಗೆ ಗಾಳಿಪಟ ಹಾರಾಡಿತು.
ಮುಖ್ಯಮಂತ್ರಿ ಹುದ್ದೆಗೇರಲು ಈಶ್ವರಪ್ಪ ಸೂಪರ್ ಮಾಸ್ಟರ್ ಪ್ಲಾನ್
ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಈಶ್ವರಪ್ಪ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಆಗ ಕೆಜೆಪಿಯಿಂದ ಕಣದಲ್ಲಿದ್ದ ರುದ್ರೇಗೌಡರು ಎರಡನೇ ಸ್ಥಾನದಲ್ಲಿ ನಿಂತಿದ್ದರು. ಇನ್ನು ಈ ಕ್ಷೇತ್ರದಿಂದ ಗೆಲುವು ಕಂಡಿದ್ದವರು ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪ್ರಸನ್ನಕುಮಾರ್.
ಕಳೆದ ವಿಧಾನಸಭೆ ಚುನಾವಣೆಯ ಮತ ಗಳಿಕೆ ಲೆಕ್ಕಾಚಾರ ಹೀಗಿತ್ತು
ಮತಗಳಿಕೆ ಲೆಕ್ಕಾಚಾರದಲ್ಲಿ ಪ್ರಸನ್ನ ಕುಮಾರ್ 39,355, ರುದ್ರೇಗೌಡ 39,355, ಈಶ್ವರಪ್ಪ 33,462 ಅನುಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದರು. ಮೊದಲ ಎರಡು ಸ್ಥಾನಗಳ ಮಧ್ಯದ ಅಂತರ ಬಹಳ ಕಡಿಮೆ ಇತ್ತು. ಈಶ್ವರಪ್ಪ ಅವರು ಮೂರನೇ ಸ್ಥಾನ ತಲುಪುವುದಕ್ಕೆ ಯಡಿಯೂರಪ್ಪ ಅವರು ಮಾಡಿದ ನಕಾರಾತ್ಮಕ ಪ್ರಚಾರ ಹಾಗೂ ಬಿಜೆಪಿ- ಕೆಜೆಪಿ ವಿಭಜನೆ ಕಾರಣ ಎಂಬ ಆರೋಪ ಕೇಳಿಬಂದಿತ್ತು.
ಬ್ರಾಹ್ಮಣ ಸಮುದಾಯದ ಮತಗಳು ಯಾರಿಗೆ?
ಇನ್ನು ಈ ಬಾರಿಯ ಸ್ಪರ್ಧೆ ಬಹಳ ಆಸಕ್ತಿಕರವಾಗಿದೆ. ಅದರಲ್ಲೂ ಮತದ ವಿಚಾರವಾಗಿ ಬಹಳ ಮುಖ್ಯವಾದ ಬ್ರಾಹ್ಮಣ ಹಾಗೂ ಲಿಂಗಾಯತ ಸಮುದಾಯದ ಮತಗಳು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬ್ರಾಹ್ಮಣರು ಕಾಂಗ್ರೆಸ್ ನ ಪ್ರಸನ್ನಕುಮಾರ್ ಬೆನ್ನಿಗೆ ನಿಂತಿದ್ದರು. ಈ ಬಾರಿಯೂ ಇದೇ ಟ್ರೆಂಡ್ ಮುಂದುವರಿಯುವಂತಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಬ್ರಾಹ್ಮಣರು ತಮ್ಮದೇ ಸಮುದಾಯದ ಅಭ್ಯರ್ಥಿಯನ್ನು ಬೆಂಬಲಿಸಲು ತೀರ್ಮಾನಿಸಿದ್ದಾರೆ.
ಲಿಂಗಾಯತ ಮತಗಳ ವಿಭಜನೆ
ಇನ್ನು ಲಿಂಗಾಯತರ ಮತಗಳು ಜೆಡಿಎಸ್ ಅಭ್ಯರ್ಥಿಯ ಕಾರಣಕ್ಕೆ ವಿಭಜನೆ ಆಗುವಂತಿದೆ. ಏಕೆಂದರೆ ಜೆಡಿಎಸ್ ಅಭ್ಯರ್ಥಿ ನಿರಂಜನಕುಮಾರ್ ಲಿಂಗಾಯತರು. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಜಾತಿ ಬಲವನ್ನು ಗಮನಿಸಿದರೆ ಈಶ್ವರಪ್ಪ ದುರ್ಬಲರಂತೆ ಕಾಣುತ್ತಾರೆ. ಆದ್ದರಿಂದ 2008ರಲ್ಲಿ ಮ್ಯಾಜಿಕ್ ನಡೆದಂತೆ ಬ್ರಾಹ್ಮಣರು ಹಾಗೂ ಲಿಂಗಾಯತರು ಬಿಜೆಪಿಗೆ ಮತ ಹಾಕಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಮತ್ತು ಆಗ ಮತ ಬಿಜೆಪಿಗೆ ಬಂದದ್ದು ಕೂಡ ಯಡಿಯೂರಪ್ಪ ಅವರ ಕಾರಣಕ್ಕೆ ಎಂಬ ಸಂಗತಿ ಈಶ್ವರಪ್ಪ ಅವರಿಗೂ ಗೊತ್ತಿದೆ.
ರುದ್ರೇಗೌಡರ ಬೆಂಬಲಿಗರು ಜತೆಗೆ ನಿಲ್ಲುತ್ತಾರಾ?
ಇನ್ನು ರುದ್ರೇಗೌಡರ ವಿಚಾರದಲ್ಲೂ ಈಶ್ವರಪ್ಪನವರಿಗೆ ಒಂದಿಷ್ಟು ಹಿನ್ನಡೆ ಆಗುವಂತೆ ಕಾಣುತ್ತಿದೆ. ಯಡಿಯೂರಪ್ಪ ನಿಷ್ಠರಾದ ರುದ್ರೇಗೌಡರು ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ತೊರೆದು ಕೆಜೆಪಿ ಸೇರಿದ್ದರು. ಈ ಸಲ ಬಿಜೆಪಿ ಟಿಕೆಟ್ ರುದ್ರೇಗೌಡರಿಗೇ ನೀಡಬೇಕು ಎಂಬುದು ಯಡಿಯೂರಪ್ಪ ಲೆಕ್ಕಾಚಾರವಾಗಿತ್ತು. ಆದರೆ ಪಕ್ಷದ ದೆಹಲಿ ನಾಯಕರು ಈಶ್ವರಪ್ಪ ಪರ ನಿಂತರು. ಕಳೆದ ಚುನಾವಣೆಯಲ್ಲಿ ಕೇವಲ ಮುನ್ನೂರು ಮತಗಳ ಅಂತರದಿಂದ ರುದ್ರೇಗೌಡರು ಸೋಲನ್ನು ಕಂಡಿದ್ದರು. ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ.
ಯಡಿಯೂರಪ್ಪ ಅವರು ಬೆಂಬಲಕ್ಕೆ ನಿಲ್ಲಲೇಬೇಕು
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಯಡಿಯೂರಪ್ಪ ಮುಖ್ಯ ಪಾತ್ರ ವಹಿಸುತ್ತಾರೆ. ಬಿಜೆಪಿಯ ಎಲ್ಲ ದೌರ್ಬಲ್ಯ, ಓರೆ-ಕೋರೆಗಳನ್ನೂ ಮೀರಿ ಮತ ಸೆಳೆಯುವ ತಾಕತ್ತಿದ್ದರೆ ಅದು ಯಡಿಯೂರಪ್ಪ ಅವರಿಗೆ ಮಾತ್ರ. ಅವರು ಮನವಿ ಮಾಡಿಕೊಂಡರೆ ಬ್ರಾಹ್ಮಣ ಹಾಗೂ ಲಿಂಗಾಯತ ಮತಗಳು ಬಿಜೆಪಿ ಕಡೆಗೆ ಬರಬಹುದು. ಜತೆಗೆ ರುದ್ರೇಗೌಡರ ಹಾಗೂ ಅವರ ಬೆಂಬಲಿಗರ ಸಿಟ್ಟನ್ನು ಕೂಡ ತಮಣಿ ಮಾಡಬಹುದು. ಒಂದು ವೇಳೆ ರುದ್ರೇಗೌಡ ಬೆಂಬಲಿಗರು ಪ್ರಚಾರ ಮಾಡದಿದ್ದರೆ ಈಶ್ವರಪ್ಪ ಸಮಸ್ಯೆಗೆ ಸಿಲುಕಿಕೊಳ್ಳಬಹುದು.
ಹೊಂದಾಣಿಕೆ ಲಾಭ ಈಶ್ವರಪ್ಪಗೆ ಆಗಬಹುದಾ?
ಈ ಬಾರಿ ಕೂಡ ಸ್ಪರ್ಧೆ ಭಾರೀ ಹೋರಾಟದಿಂದ ಕೂಡಿರುತ್ತದೆ ಎಂಬುದಂತೂ ನಿಜ. ಈಶ್ವರಪ್ಪ ಗೆಲ್ಲಲೇ ಬೇಕು ಅಂದರೆ ಯಡಿಯೂರಪ್ಪ ತುಂಬ ಪ್ರಬಲವಾಗಿ ಈಶು ಬೆನ್ನಿಗೆ ನಿಲ್ಲಬೇಕು. ಈ ಸಲ ಪಕ್ಷದಲ್ಲಿ ಹೊಂದಾಣಿಕೆ ಕಂಡುಬರುತ್ತಿರುವುದರಿಂದ ಅದರ ಲಾಭ ಈ ಬಾರಿ ಸ್ವಲ್ಪ ಮಟ್ಟಿಗೆ ಈಶ್ವರಪ್ಪ ಅವರಿಗೆ ಆಗುವಂತಿದೆ. ಈ ಪ್ರತಿಷ್ಠಿತ ಕಣದಲ್ಲಿ ಯಾರು ಗೆಲ್ಲಬಹುದು ಎಂದು ಗೊತ್ತಾಗುವುದಕ್ಕೆ ಮೇ ಹದಿನೈದರವರೆಗೆ ಕಾಯಲೇಬೇಕು.