ನಂದಿತಾ ಪ್ರಕರಣ: ಸರ್ಕಾರಕ್ಕೆ ಆಯನೂರು ಕೇಳಿರುವ ಪ್ರಶ್ನೆಗಳು
ಬೆಂಗಳೂರು, ನ.4: ತೀರ್ಥಹಳ್ಳಿಯ ವಿದ್ಯಾರ್ಥಿನಿ ಕೆ.ಜಿ ನಂದಿತಾ ಸಾವಿನ ಪ್ರಕರಣದ ಬಗ್ಗೆ ಕರ್ನಾಟಕ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು, ದಿನಕ್ಕೊಂದು ಹೊಸ ಕಥೆ ಸೃಷ್ಟಿಸಿ ಸತ್ಯವನ್ನು ಮರೆ ಮಾಚುತ್ತಿದೆ ಎಂದು ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಅವರು ಹರಿಹಾಯ್ದಿದ್ದಾರೆ.
ಪೋಲಿಸ್ ಇಲಾಖೆಯಿ೦ದ ನಕಲಿ ಡೆತ್ ನೋಟ್ ಸೃಷ್ಟಿಸಿದೆ, ಬ್ಯಾಗಿನಲ್ಲಿ ಡೆತ್ ನೋಟ್ ಇರಲೇ ಇಲ್ಲ, ಪೋಲಿಸರಿ೦ದ ನನಗೆ ನ್ಯಾಯ ದೊರಕುತ್ತದೆ ಎ೦ಬ ನ೦ಬಿಕೇನೆ ಇಲ್ಲ ನ೦ದಿತಾ ಅವರ ತಂದೆ ಕೃಷ್ಟಪ್ಪ ಅವರು ನೊಂದು ನುಡಿದಿದ್ದಾರೆ. ಸಿದ್ದರಾಮಯ್ಯ ಅವರು ಸಿಐಡಿ ತನಿಖೆಗೆ ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ. ಅದರೆ, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲದೆ, ಈ ಪ್ರಕರಣದಲ್ಲಿ ವಿಶೇಷ ತನಿಖೆ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಡೆತ್ ನೋಟ್ ಅನ್ನ ಪ್ರಿಂಟ್ ಮಾಡಿಸಿಟ್ಟು ಸತ್ತಳಾ ನಂದಿತಾ...??? ಇಷ್ಟು ದಿನ ಇರದ ಡೆತ್ ನೋಟ್ ದಿಢೀರ್ ಹೇಗೆ ಪ್ರತ್ಯಕ್ಷವಾಯ್ತು ಸ್ವಾಮಿ.. ಎಂದು ಫೇಸ್ ಬುಕ್ ನಲ್ಲಿ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ. ಈ ನಡುವೆ ಕಿಮ್ಮನೆ ರತ್ನಾಕರ್ ಹಾಗೂ ಸರ್ಕಾರಕ್ಕೆ ಆಯನೂರು ಮಂಜುನಾಥ್ ಕೇಳಿರುವ ಈ ಪ್ರಶ್ನೆಗಳ ಪಟ್ಟಿ ಇಲ್ಲಿದೆ...[ನಂದಿತಾ ಕೊಲೆ ಪ್ರಕರಣ ಸಿಐಡಿ ತನಿಖೆಗೆ]
1. ಲೈಂಗಿಕ ಕಿರುಕುಳದ ಬಗ್ಗೆ ಕಾನ್ಸ್ ಟೇಬಲ್ ಮಾಹಿತಿ ನೀಡಿದ್ದರೂ, ಇನ್ಸ್ ಪೆಕ್ಟರ್ ಏಕೆ ದೂರು ದಾಖಲಿಸಲಿಲ್ಲ?
2. ಹೊಟ್ಟೆನೋವು, ವಾಂತಿಯಿಂದ ನರಳುತ್ತಿದ್ದ ಬಾಲಕಿಯನ್ನು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಏಕೆ ದಾಖಲಿಸಿಕೊಳ್ಳಲಿಲ್ಲ?
3. ಮೆಗ್ಗಾನ್ ಆಸ್ಪತ್ರೆ ತಲುಪಲು 70-80 ಕಿ.ಮೀ. ಇದ್ದರೂ ಆಂಬುಲೆನ್ಸ್ ನಲ್ಲಿ ವೈದ್ಯರನ್ನೇಕೆ ಕಳಿಸಿಕೊಡಲಿಲ್ಲ?
4.ಅತ್ಯಾಧುನಿಕ ಉಪಕರಣ, ಸೌಲಭ್ಯವಿರುವ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲವೆಂದು ಮಣಿಪಾಲ್ ಹಾಸ್ಪಿಟಲ್ ಗೆ ಏಕೆ ಕಳುಹಿಸಿದರು?
5. ಮೆಗ್ಗಾನ್ ಹಾಸ್ಪಿಟಲ್ ನಲ್ಲಿ ಲೋ ಬಿ.ಪಿ.ಗೆ ಔಷಧಿ ಇಲ್ಲವೆಂದರೆ, ಅಲ್ಲಿಂದ ಇನ್ನೆಂತ ವೈದ್ಯರು ಹೊರಬರಬಹುದು?
6. ಮಣಿಪಾಲ್ ಆಸ್ಪತ್ರೆಯಲ್ಲಿಯೇ ಬಾಲಕಿ ಮರಣ ಹೊಂದಿದ ಮೇಲೆ, ತೀರ್ಥಹಳ್ಳಿ ಪೋಲೀಸರೇ ಅಲ್ಲಿಗೇ ಹೋಗಿ ಶವ ಪರೀಕ್ಷೆ ನಡೆಸಲು ಕಾರಣ ಏನು?
7. ಲೈಂಗಿಕ ಕಿರುಕುಳ ನೀಡಿದ ಒಬ್ಬನ ಬಗ್ಗೆ ಮಾಹಿತಿ ಇದ್ದರೂ ಪೋಲೀಸರು ಏಕೆ ಆತನನ್ನ ಬಂಧಿಸಲಿಲ್ಲ?
8. ಬಾಲಕಿ ಆತ್ಮಹತ್ಯೆಯೇ ಮಾಡಿಕೊಂಡಿದ್ದಾಳೆ ಎಂದಾದರೆ ಶವಪರೀಕ್ಷೆಯಲ್ಲೂ ಯಾವ ವಿಷ ಸೇವಿಸಿದ್ದಾಳೆ ಎಂಬ ಮಾಹಿತಿ ಇನ್ನೂ ಬಂದಿಲ್ಲವಾದರೆ, ಅವಳಿಗೆ ಸಿಕ್ಕಿರುವ 'ಅಜ್ಞಾತ ವಿಷ' ಯಾವುದು? ಆ ವಿಷ ಆ ಪುಟ್ಟ ಬಾಲಕಿಗೆ ಎಲ್ಲಿಂದ ಬಂತು?
9. ಬಾಲಕಿ ಡೆತ್ ನೋಟ್ ಬರೆದಿಟ್ಟಿದ್ದಾಳೆ ಎಂದರೆ, ಅದು ಸತ್ತ ನಾಲ್ಕು ದಿನದ ನಂತರ ಹೊರಬಂದಿದ್ದೇಕೆ?
ಉತ್ತರಿಸಿ ಸಚಿವರೆ...