ನೀರಿನಲ್ಲಿ ಕೊಚ್ಚಿಹೋಗಿದ್ದ ವಿದ್ಯಾರ್ಥಿನಿ ಆಶಿಕಾ ಮೃತದೇಹ ಪತ್ತೆ
ತೀರ್ಥಹಳ್ಳಿ, ಜುಲೈ.10: ಸೋಮವಾರ ಸಂಜೆ ಮಳೆಯ ಹೊಡೆತಕ್ಕೆ ನೀರುಪಾಲಾದ ವಿದ್ಯಾರ್ಥಿನಿಯ ಮೃತದೇಹ ಇಂದು ಮಂಗಳವಾರ ತೀರ್ಥಹಳ್ಳಿ ತಾಲೂಕು ಹೊನ್ನೆತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂದಾಳಬೈಲು ಸಮೀಪದ ದೊಡ್ಲಿ ಮನೆ ಗ್ರಾಮದ ಬಳಿ ಪತ್ತೆಯಾಗಿದೆ.
ಆಶಿಕಾ (15) ನೀರುಪಾಲಾಗಿದ್ದ ವಿದ್ಯಾರ್ಥಿನಿಯಾಗಿದ್ದು, ಘಟನಾ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ಆಶಿಕಾ ಮೃತ ದೇಹ ಪತ್ತೆಯಾಗಿದೆ. ಆಶಿಕಾ ಗುಡ್ಡೇಕೇರಿ ಸರ್ಕಾರಿ ಫ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು.
ತೀರ್ಥಹಳ್ಳಿ : ತಾಯಿಯ ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ
ಸೋಮವಾರ ಸಂಜೆಯಿಂದಲೇ ಅಗ್ನಿಶಾಮಕ, ಪೊಲೀಸರು, ಸ್ಥಳೀಯರು ಕಾರ್ಯಾಚರಣೆ ಮಾಡಿದ್ದರು. ಆದರೆ ವಿದ್ಯಾರ್ಥಿನಿ ಆಶಿಕಾ ಪತ್ತೆಯಾಗಿರಲಿಲ್ಲ.
ಇಂದು ಮಂಗಳವಾರ ಬೆಳಗ್ಗೆ ಘಟನಾ ಸ್ಥಳದಿಂದ ಒಂದು ಕಿ.ಮೀ. ದೂರದಲ್ಲಿ ಆಶಿಕಾ ಮೃತದೇಹ ಪತ್ತೆಯಾಗಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶವ ಪತ್ತೆಕಾರ್ಯದಲ್ಲಿ ತಹಶೀಲ್ದಾರ್ ಆನಂದಪ್ಪ ನಾಯಕ್, ಆರ್ ಐ ಸುಧೀರ್, ಪೊಲೀಸ್ ಇಲಾಖೆ ಹಾಗೂ ಗ್ರಾಮಸ್ಥರು ಶ್ರಮಿಸಿದ್ದರು.
ಈ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಮವಾರ ಆಶಿಕಾ ಶಾಲೆಯಿಂದ ಮನೆಗೆ ತಾಯಿಯ ಜೊತೆ ವಾಪಸ್ ಬರುತ್ತಿದ್ದಳು. ಆಗ ಮನೆಯ ಮುಂದಿನ ಹಳ್ಳ ದಾಟುತ್ತಿರುವಾಗ ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಳು.
ಮನೆಯ ಎದುರು ಹರಿಯುತ್ತಿದ್ದ ಹಳ್ಳ ದಾಟಲು ಚಪ್ಪಡಿ ಹಾಕಲಾಗಿತ್ತು. ಆದರೆ, ಮಳೆಯಿಂದ ಪಾಚಿಕಟ್ಟಿ ಚಪ್ಪಡಿ ಜಾರುತ್ತಿತ್ತು. ಹಳ್ಳ ದಾಟುವಾಗ ಚಪ್ಪಲಿ ನೀರಿಗೆ ಬಿದ್ದಿದೆ. ಅದನ್ನು ಹಿಡಿಯಲು ಆಕೆ ಪ್ರಯತ್ನ ನಡೆಸಿದ್ದು, ಕಾಲುಜಾರಿ ಹಳ್ಳಕ್ಕೆ ಬಿದ್ದಿದ್ದಾಳೆ. ತಾಯಿ ಅನಿತಾ ಮಗಳನ್ನು ಹಿಡಿಯಲು ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಿರಲಿಲ್ಲ.