ಆಗುಂಬೆಯಲ್ಲಿ ಮತ್ತೆ ಕಾಣಿಸಿಕೊಂಡ ಒಂಟಿ ಸಲಗ
ಶಿವಮೊಗ್ಗ, ಜೂನ್ 21 : ಆಗುಂಬೆಯಲ್ಲಿ ಒಂಟಿ ಸಲಗ ಮತ್ತೆ ಕಾಣಿಸಿಕೊಂಡಿದ್ದು ಜನರು, ವಾಹನ ಸವಾರರು ಆತಂಕಗೊಂಡಿದ್ದಾರೆ. ಹಲವು ವರ್ಷಗಳಿಂದ ಆನೆ ಆಗುಂಬೆ ಸುತ್ತ-ಮುತ್ತ ಓಡಾಡಿಕೊಂಡಿದ್ದು, ಅದನ್ನು ಸ್ಥಳಾಂತರ ಮಾಡುವ ಭರವಸೆ ಹುಸಿಯಾಗಿಯೇ ಉಳಿದಿದೆ.
ಆಗುಂಬೆ ಶೃಂಗೇರಿ ರಸ್ತೆಯ ವಾಟೇಹಳ್ಳ ಎಂಬಲ್ಲಿ ಬುಧವಾರ ಸಂಜೆ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ವಾಹನ ಸವಾರರು, ಸ್ಥಳೀಯರು ಆನೆಯನ್ನು ನೋಡಿ ಆತಂಕಗೊಂಡಿದ್ದಾರೆ.
ಪ್ರವಾಸಿಗರ ಮೇಲೆ ದಾಳಿಗೆ ಮುಂದಾದ ಆನೆ: ವೈರಲ್ ವಿಡಿಯೋ
ಸುಮಾರು 6 ವರ್ಷಗಳಿಂದ ಒಂಟಿ ಸಲಗ ಆಗುಂಬೆ ಸುತ್ತ-ಮುತ್ತ ಸಂಚಾರ ನಡೆಸುತ್ತಿದೆ. ಕೌರಿ ಹಕ್ಕಲು, ಮಲ್ಲಂದೂರು, ಆಗುಂಬೆ, ಕೆಸರುಕೊಂಡ ಮುಂತಾದ ಪ್ರದೇಶದಲ್ಲಿ ಆನೆ ಆಗಾಗ ಕಾಣಿಸಿಕೊಂಡು ಜನರನ್ನು ಕಂಗೆಡಿಸಿದೆ.
ಕಾಡಾನೆಯನ್ನು ಸ್ಥಳಾಂತರ ಮಾಡಬೇಕು ಎಂದು ಸೋಮೇಶ್ವರದ ವನ್ಯಜೀವಿ ವಿಭಾಗ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 2016 ಜುಲೈ 28 ರಂದು ಆಗುಂಬೆಗೆ ಅಂದಿನ ಅರಣ್ಯ ಸಚಿವ ರಮಾನಾಥ ರೈ ಭೇಟಿ ನೀಡಿದ್ದರು. ಅವರಿಗೂ ಮನವಿ ಮಾಡಲಾಗಿತ್ತು.
ಆದರೆ, ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಕಸದ ಬುಟ್ಟಿ ಸೇರಿದೆ. ಅರಣ್ಯ ಸಚಿವರಿಗೆ ಮಾಡಿದ ಮನವಿಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ. ಕಾಡಾನೆಯಿಂದ ಹಲವು ಜನರು ತೊಂದರೆಗೆ ಒಳಗಾದರೂ ಆನೆ ಸ್ಥಳಾಂತರ ಪ್ರಕ್ರಿಯೆ ಮಾತ್ರ ಇನ್ನೂ ಬಾಕಿ ಇದೆ.