ಶಿವಮೊಗ್ಗ : ಮಂಗನಕಾಯಿಲೆಗೆ 18 ವರ್ಷದ ಯುವತಿ ಬಲಿ
ಶಿವಮೊಗ್ಗ, ಜನವರಿ 06 : ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಸಾಗರ ತಾಲೂಕಿನ ಒಂದೇ ಗ್ರಾಮದ 6 ಜನರು ಮಂಗನಕಾಯಿಲೆಗೆ ಬಲಿಯಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸಾಗರ ತಾಲೂಕಿನ ಅರಳಗೋಡು ಗ್ರಾಮದ ಶ್ವೇತಾ (18) ಮಂಗನಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಶ್ವೇತಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ನಾಲ್ವರು ಬಲಿ: 50ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ
ಸಾಗರದ ಅರಳಗೋಡು ಗ್ರಾಮದಲ್ಲಿ ಮಂಗನಕಾಯಿಲೆಯಿಂದಾಗಿ ಇದುವರೆಗೂ 6 ಜನರು ಮೃತಪಟ್ಟಿದ್ದಾರೆ. ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾರ್ಶ್ವನಾಥ ಜೈನ್, ವಾಟೆಮಕ್ಕಿಯ ಕೃಷ್ಣಪ್ಪ, ಮಂಜುನಾಥ್, ಲೋಕರಾಜ್ ಜೈನ್, ರಾಮಕ್ಕ ಮೃತಪಟ್ಟಿದ್ದಾರೆ.
ಶಿವಮೊಗ್ಗ : ತೀರ್ಥಹಳ್ಳಿಯಲ್ಲಿ ಹಂದಿ ಜ್ವರ, 14 ಪ್ರಕರಣ ಪತ್ತೆ
ಶ್ವೇತಾ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಜಿಲ್ಲಾ ಪಂಚಾಯಿತಿ ಸಿಇಓ ಅವರು ಆಸ್ಪತ್ರೆಗೆ ಭೇಟಿ ನೀಡಿದರು. ಸ್ಥಳೀಯರ ಜೊತೆ ಚರ್ಚೆ ನಡೆಸಿದರು, ಕುಟುಂಬದವರಿಗೆ ಸಾಂತ್ವನ ಹೇಳಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಸೇರಿದಂತೆ ವಿವಿಧ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಅರಳಗೋಡು ಗ್ರಾಮದಲ್ಲಿ ಸಭೆ
ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಮಂಗನ ಕಾಯಿಲೆಯ ಬಗ್ಗೆ ವಾಸ್ತವ ಸ್ಥಿತಿ ಅರಿಯಲು ಸಾಗರ ತಾಲೂಕಿನ ಅರಳಗೋಡು ಗ್ರಾಮಕ್ಕೆ ಭೇಟಿ ನೀಡಿದ್ದರು. ಸಾರ್ವಜನಿಕರು ಹಾಗೂ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
24 ಗಂಟೆಗಳ ಆಂಬ್ಯುಲೆನ್ಸ್ ವ್ಯವಸ್ಥೆ
'ಮಂಗನ ಕಾಯಿಲೆ ಹರಡದಂತೆ ವ್ಯಾಪಕ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ. ಮಂಗನ ಕಾಯಿಲೆ ಹರಡದಂತೆ ತಡೆಯಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಆಂಬ್ಯುಲೆನ್ಸ್ ಸೇವೆ ದಿನದ 24ಗಂಟೆ ಕಾಲ ಲಭ್ಯವಿರಲಿದೆ' ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಸಹಾಯವಾಣಿ ಆರಂಭ
'ಮಂಗನ ಕಾಯಿಲೆ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಹಾಗೂ ತುರ್ತು ಕ್ರಮಕ್ಕಾಗಿ ಸಹಾಯ ಕೇಂದ್ರವನ್ನು ಆರಂಭಿಸಲಾಗಿದ್ದು, ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಸಾರ್ವಜನಿಕರು 104 ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಅಹವಾಲುಗಳನ್ನು ದಾಖಲಿಸಬಹುದಾಗಿದೆ. ಮಂಗಗಳು ಸಾವಿಗೀಡಾಗಿರುವ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಅಂತಹ ಕಡೆಗಳಲ್ಲಿ 50ಮೀಟರ್ ವ್ಯಾಪ್ತಿಯಲ್ಲಿ ಯಾರೂ ತೆರಳಬಾರದು' ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜನರಲ್ಲಿ ಅರಿವು ಮೂಡಿಸಿ
'ಗ್ರಾಮ ಪಂಚಾಯತಿ ವತಿಯಿಂದ ಮಂಗನಕಾಯಿಲೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಮನೆಯ ಹಸುಗಳನ್ನು ಆದಷ್ಟು ಮೇಯಲು ಹೊರಗೆ ಬಿಡದೆ ಕೆಲವು ತಿಂಗಳ ಕಾಲ ಮನೆಯಲ್ಲಿಯೇ ಕಟ್ಟಿ ಮೇವು ಹಾಕಲು ಜನರಿಗೆ ಪ್ರೇರೇಪಿಸಬೇಕು. ಕಾಡಿಗೆ ತೆರಳುವ ಹಸುಗಳಿಗೆ ಸಹ ಸೂಕ್ತ ಮುನ್ನಚ್ಚರಿಕೆಯಾಗಿ ಔಷಧಿಯಲ್ಲಿ ಹಾಕಬೇಕು' ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಏನಿದು ಮಂಗನಕಾಯಿಲೆ?
ಕಾಡಿನಲ್ಲಿ ಮಂಗಗಳು ಸತ್ತು ಬಿದ್ದಿರುತ್ತವೆ. ಸತ್ತು ಬಿದ್ದಿರುವ ಮಂಗಗಳಿಂದ ಹರಡುವ ಉಣ್ಣೆಗಳು ದನ, ಕಾಡು, ತೋಟಕ್ಕೆ ಹೋದ ಮನುಷ್ಯರನ್ನು ಸೇರಿಕೊಳ್ಳುತ್ತವೆ. ಈ ಉಣ್ಣೆಯಿಂದ ಕಂಡು ಬರುವ ಜ್ವರವೇ ಮಂಗನಕಾಯಿಲೆ ಅಥವ ಕ್ಯಾಸನೂರು ಫಾರೆಸ್ಟ್ ಡಿಸೀಸ್.
ಮೊದಲು ಈ ಜ್ವರ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಕಾಣಿಸಿಕೊಂಡಿತ್ತು. ಬಳಿಕ ತೀರ್ಥಹಳ್ಳಿ ತಾಲೂಕಿನಲ್ಲಿ ಕಾಣಿಸಿಕೊಂಡಿತ್ತು. ಈಗ ಸಾಗರ ತಾಲೂಕಿನಲ್ಲಿ ಮಂಗನಕಾಯಿಲೆ ಆತಂಕ ಮೂಡಿಸಿದೆ.