ಗೆದ್ದು ಬಂದರೆ ಭಾರತವಾಸಿಗಳಿಗೆ ಭರ್ಜರಿ ಉಡುಗೊರೆ ಕೊಡುತ್ತೇನೆಂದ ರಾಹುಲ್
ಜಾರ್ಖಂಡ್, ಮಾರ್ಚ್ 02: ಐದು ವರ್ಷಕ್ಕೆ ಮುಂಚೆ 'ಅಚ್ಛೆ ದಿನ್ ಆಯೇಂಗೆ' ಎಂಬ ಘೋಷಣೆ ಕೇಳುತ್ತಿತ್ತು, ಆದರೆ ಈಗ 'ಚೌಕಿದಾರ್ ಚೋರ್ ಹೇ' ಎಂಬ ಘೋಷಣೆ ಎಲ್ಲೆಡೆ ಕೇಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಜಾರ್ಖಂಡ್ನ ರಾಂಚಿಯಲ್ಲಿ ರಾಹುಲ್ ಗಾಂಧಿ ಅವರು ಭಾರಿ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ರಾಹುಲ್ ಅವರು ಮಾತು ಪ್ರಾರಂಭಿಸುತ್ತಲೆ, ಕಾರ್ಯಕರ್ತರು ಜೋರಾಗಿ 'ಚೌಕಿದಾರ್ ಚೋರ್ ಹೇ' ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ ವಿಡಿಯೋ ವೈರಲ್!
ಒಬ್ಬ ಚೌಕಿದಾರ್ ಭಾರತದ ಎಲ್ಲ ಚೌಕಿದಾರರ ಹೆಸರನ್ನು ಕೆಡಿಸಿಬಿಟ್ಟರು. ಆದರೆ ಉಳಿದ ಚೌಕಿದಾರರು ಹಾಗಿಲ್ಲ ದೇಶದ ಚೌಕಿದಾರ ಮಾತ್ರ ಕಳ್ಳ, ಉಳಿದ ಚೌಕಿದಾರರು ನಿಯತ್ತಿನಿಂದ ಇದ್ದಾರೆ ಎಂದು ರಾಹುಲ್ ವ್ಯಂಗ್ಯ ಮಾಡಿದರು.
ವಾಯುಸೇನೆಯು ಮೊನ್ನೆಯಷ್ಟೆ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಉಗ್ರರನ್ನು ಹೊಡೆದೋಡಿಸಿತು ಆದರೆ ಅದೇ ವಾಯುಸೇನೆಗೆ ಸೇರಿದ 30,000 ಕೋಟಿ ಹಣವನ್ನು ಮೋದಿ ಅವರು ಅನಿಲ್ ಅಂಬಾನಿಯ ಜೇಬಿಗೆ ಹಾಕಿದರು ಎಂದು ರಾಹುಲ್ ವಾಗ್ದಾಳಿ ನಡೆಸಿದರು.
ಸೈನಿಕರ ಬಲಿದಾನವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಬಿಜೆಪಿ: ರಾಹುಲ್ ಗಾಂಧಿ
ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ, ಈ ಮೂರು ಕಳ್ಳರ ಹೆಸರು ಏಕೆ ಮೋದಿ ಹೆಸರಿನಿಂದಲೇ ಕೊನೆಗೊಳ್ಳುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದ ರಾಹುಲ್ ಅವರು, ಮೋದಿ ಅವರು ಭ್ರಷ್ಟರಿಗೆ ಸಹಾಯ ಮಾಡುವ ಮೂಲಕ ತಾವೂ ಭ್ರಷ್ಟರಾಗಿದ್ದಾರೆ ಎಂದರು.
ಭೂಮಿಯ ಹಕ್ಕು ತಂದವರು ನಾವು: ರಾಹುಲ್
ರೈತರು, ಆದಿವಾಸಿಗಳಿಗಾಗಿ, ಅವರ ಭೂಮಿಯ ಹಕ್ಕು ಅವರಿಗೆ ದೊರಕಲೆಂದು ಕಾಂಗ್ರೆಸ್ ಪಕ್ಷ ಟ್ರೈಬಲ್ ಬಿಲ್ ತಂದಿತು. ಆದಿವಾಸಿಗಳಿಗೆ ಅವರ ಜಮೀನು ಉಳಿಸಿಕೊಳ್ಳುವಂತೆ ಮಾಡಿದ್ದೆವು. ಆದರೆ ಮೋದಿ ಅಧಿಕಾರಕ್ಕೆ ಬಂದ ಕೂಡಲೆ ಟ್ರೈಬಲ್ ಬಿಲ್ ಅನ್ನು ರದ್ದು ಮಾಡಿದರು. ರೈತರ ಜಮೀನನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಿಬಿಟ್ಟರು ಎಂದು ರಾಹುಲ್ ಹೇಳಿದರು.
'ಮೋದಿ ಪ್ರತಿ ಭಾಷಣದಲ್ಲಿ ಸುಳ್ಳು ಹೇಳುತ್ತಾರೆ'
ಮೋದಿ ಅವರು ತಮ್ಮ ಪ್ರತಿ ಭಾಷಣದಲ್ಲಿ ಸುಳ್ಳು ಹೇಳುತ್ತಾರೆ. ಖಾತೆಗೆ 15 ಲಕ್ಷ ಹಣ ಹಾಕುತ್ತೇವೆ, ಕೃಷಿಕರ ಆದಾಯ ಹೆಚ್ಚು ಮಾಡುತ್ತೇವೆ, ಉದ್ಯೋಗ ನೀಡುತ್ತೇವೆ ಎನ್ನುತ್ತಾರೆ ಅವರು ಏನು ಮಾಡಿಲ್ಲ. ಆದರೆ ನಾವು ಅಧಿಕಾರಕ್ಕೆ ಬಂದರೆ 10 ದಿನದಲ್ಲಿ ಸಾಲಮನ್ನಾ ಘೋಷಣೆ ಮಾಡುತ್ತೇವೆ ಎಂದಿದ್ದೆವು ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್ಗಡ್ನಲ್ಲಿ ಅದನ್ನು ಜಾರಿಗೆ ತಂದೆವು ಎಂದರು.
ಸರ್ಜಿಕಲ್ ಸ್ಟ್ರೈಕ್-2: ಭಾರತೀಯ ಸೇನೆಗೆ ಸಲಾಂ ಎಂದ ರಾಹುಲ್ ಗಾಂಧಿ
'15 ಜನರ 3.50 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ'
ಮೋದಿ ಅವರು 3.50 ಲಕ್ಷ ಕೋಟಿ ಹಣವನ್ನು ಕೇವಲ 15 ಮಂದಿ ಶ್ರೀಮಂತರ ಸಾಲವನ್ನು ಮನ್ನಾ ಮಾಡಿದ್ದಾರೆ. ರೈತರು, ಸಣ್ಣ ಉದ್ಯಮಿಗಳು, ನಿರುದ್ಯೋಗಿಗಳು ಬ್ಯಾಂಕ್ ಸಾಲ ಪಡೆದಿದ್ದಾರೆ. ಆದರೆ ಅವರ ಸಾಲಮನ್ನಾ ಆಗುವುದಿಲ್ಲ ಆದರೆ ಶ್ರೀಮಂತರ ಸಾಲಮಾತ್ರ ಮನ್ನಾ ಆಗುತ್ತದೆ ಎಂದು ಹೇಳಿದರು.
'ರೈತರಿಗೆ ದಿನಕ್ಕೆ ಕೇವಲ 17 ರೂಪಾಯಿ ಕೊಡುತ್ತಿದ್ದಾರೆ'
ಮೋದಿ ಸರ್ಕಾರವು ಕಳೆದ ಬಜೆಟ್ನಲ್ಲಿ ರೈತರಿಗೆ ಒಂದು ಯೋಜನೆ ತಂದಿದ್ದಾರೆ ಅದರ ಪ್ರಖಾರ ರೈತರಿಗೆ ಪ್ರತಿದಿನಕ್ಕೆ 17 ರೂಪಾಯಿ ಕೊಡುತ್ತಿದ್ದಾರೆ. ಇದಕ್ಕೆ ಬಿಜೆಪಿ ಮುಖಂಡರು ಭಾರಿ ಕರತಾಡನ ಬೇರೆ ಮಾಡಿದರು. ಶ್ರೀಮಂತರ 3.50 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ ಆದರೆ ರೈತರಿಗೆ 17 ರೂಪಾಯಿ ಕೊಡುತ್ತಿದ್ದಾರೆ. ಇದೇನು ತಮಾಷೆಯಾ ಎಂದು ರಾಹುಲ್ ಪ್ರಶ್ನೆ ಮಾಡಿದರು.
ಎಲ್ಲರಿಗೂ 'ಕನಿಷ್ಟ ಆದಾಯ ನೀಡುತ್ತೇವೆ'
ನಾವು ಈ ಬಾರಿ ಚುನಾವಣೆಯಲ್ಲಿ ಗೆಲ್ಲುತ್ತೇವೆ ಸರ್ಕಾರ ರಚಿಸುತ್ತೇವೆ, ನಾವು ಅಧಿಕಾರಕ್ಕೆ ಬಂದ ಕೂಡಲೇ ಐತಿಹಾಸಿಕ ಕಾರ್ಯ ಮಾಡುತ್ತೇವೆ, ದೇಶದ ಎಲ್ಲ ಬಡವರಿಗೆ ಗ್ಯಾರಂಟಿ ಮಿನಿಮಮ್ ಇನ್ಕಮ್ (ಕಡ್ಡಾಯ ಕನಿಷ್ಟ ಆದಾಯ) ಕೊಡುತ್ತೇವೆ ಎಂದು ಭರವಸೆ ನೀಡಿದರು. ಬಡವನ ಬ್ಯಾಂಕ್ ಅಕೌಂಟ್ಗೆ ನೇರವಾಗಿ ಹಣ ಹಾಕುತ್ತೇವೆ, ಇದು ಐತಿಹಾಸಿಕ ಕೆಲಸವಾಗಿ ವಿಶ್ವದಲ್ಲಿ ನಿಲ್ಲುತ್ತದೆ ಎಂದು ಅವರು ಹೇಳಿದರು.