ಜಾರ್ಖಂಡ್ : ವಿಚಿತ್ರ ತಿರುವು ಪಡೆದ ತಬ್ರೇಜ್ ಅನ್ಸಾರಿ ಸಾವು ಪ್ರಕರಣ
ರಾಂಚಿ, ಸೆಪ್ಟೆಂಬರ್ 19: ಕಳೆದ ಜೂನ್ ನಲ್ಲಿ ನಡೆದ ತಬ್ರೇಜ್ ಅನ್ಸಾರಿ ಎಂಬ ಯುವಕನ ಸಾವಿಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪ್ರಕರಣವನ್ನೇ ಕೈಬಿಟ್ಟಿದ್ದ ಪೊಲೀಸರು, ಮತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ!
ಹೌದು, ತಬ್ರೇಜ್ ಸಾವಿನ ಅಟಾಪ್ಸಿ ವರದಿಯಲ್ಲಿ ಆತ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಹೇಳಲಾಗಿತ್ತು. ಇದರಿಂದಾಗಿ ಆತನದು ಕೊಲೆ ಎಂದು ಮಾಡಲಾಗಿದ್ದ ಆರೋಪಕ್ಕೆ ಹುರುಳಿಲ್ಲ ಎಂದು ಪೊಲೀಸರು ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನೇ ರದ್ದುಗೊಳಿಸಿದ್ದರು.
ತಬ್ರೇಜ್ ಸಾವಿನ ಪ್ರಕರಣದ ದಿಕ್ಕನ್ನೇ ಬದಲಿಸಿದ ಅಟಾಪ್ಸಿ ವರದಿ
ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಆರೋಪಿಗಳಿಗೆ, ಎಂಟು ದಿನದ ನಂತರ ಮತ್ತೆ ಆಘಾತ ಎದುರಾಗಿದೆ. ಮತ್ತೆ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಆರಂಭವಾಗಲಿದೆ.
ಆದರೆ ತಬ್ರೇಜ್ ದು ಹೃದಯಾಘಾತವಾದರೂ ಅದಕ್ಕೂ ಮುನ್ನ ಆತನ ತಲೆಗೆ ಬಲವಾದ ಏಟು ಬಿದ್ದಿತ್ತು. ಮೈಮೇಲೆ ಸಾಕಷ್ಟು ಗಾಯಗಳಾಗಿದ್ದವು. ಆ ನೋವಿನ ಯಾತನೆ ತಡೆಯಲಾರದೆ, ಭಯಕ್ಕೂ ಆತ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರಬಹುದು ಎಂದು ಮರಣೋತ್ತರ ವರದಿಗೆ ಟ್ವಿಸ್ಟ್ ಸಿಕ್ಕ ಪರಿಣಾಮ, ಎಂಟು ದಿನಗಳ ನಂತರ ಈ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತಬ್ರೇಜ್ ಸಾವು: ರೋಚಕ ತಿರುವು ಪಡೆದ ಮರಣೋತ್ತರ ವರದಿ
ಕಳೆದ ಜೂನ್ ತಿಂಗಳಿನಲ್ಲಿ 24 ವರ್ಷದ ಯುವಕ ತಬ್ರೇಜ್ ಜಮ್ಷೆಡ್ಪುರದಿಂದ ಸರೈಕೆಲಾ ಖರ್ಸವಾನ್ ಜಿಲ್ಲೆಯ ಕರ್ಸೋವಾದಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹಲವು ಜನರಿದ್ದ ಗುಂಪೊಂದು ಅವರ ಮೇಲೆ ದಾಳಿ ಮಾಡಿತ್ತು. ದ್ವಿಚಕ್ರ ವಾಹನ ಕದ್ದಿದ್ದಾನೆ ಎಂದು ಆರೋಪಿಸಿ ಆತನನ್ನು ಕಂಬಕ್ಕೆ ಕಟ್ಟಿ ಹಿಂಸಿಸಲಾಗಿತ್ತು. ಕೆಲವು ಮೂಲಗಳ ಪ್ರಕಾರ ಆತನ ಬಳಿ 'ಜೈ ಶ್ರೀರಾಮ್' ಘೋಷಣೆ ಕೂಗುವಂತೆಯೂ ಒತ್ತಾಯಿಸಲಾಗಿತ್ತು.
ಮದುವೆಯಾಗಿ ಒಂದೂವರೆ ತಿಂಗಳಾಗಿತ್ತಷ್ಟೇ.. ತಬ್ರಿಝ್ ಸಾವಿನ ಕಣ್ಣೀರ ಕತೆ
ಹೊಡೆತ ಸಹಿಸಲಾಗದೆ ಪ್ರಜ್ಞೆ ಕಳೆದುಕೊಂಡಿದ್ದ ತಬ್ರೇಜ್ ನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು. ಆತನನ್ನು ನಾಲ್ಕು ದಿನದ ನಂತರ ಆಸ್ಪತ್ರೆಗೆ ಸೇರಿಸಲಾಯಿತಾದರೂ ವಿಳಂಬವಾಗಿದ್ದರಿಂದ ಆತ ಮೃತಪಟ್ಟಿದ್ದ.