ಲಾಲು ಪ್ರಸಾದ್ ಆರೋಗ್ಯ ಮತ್ತಷ್ಟು ಗಂಭೀರ: ರಾಂಚಿಯಿಂದ ದೆಹಲಿಗೆ ಏರ್ಲಿಫ್ಟ್
ರಾಂಚಿ, ಜನವರಿ 23: ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನು ಏರ್ಲಿಫ್ಟ್ ಮಾಡುವ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆತರಲಾಗಿದೆ.
ಲಾಲು ಪ್ರಸಾದ್ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು, ಅವರನ್ನು ಶನಿವಾರ ಸಂಜೆ 5.30ರ ವೇಳೆಗೆ ರಾಂಚಿಯ ರಿಮ್ಸ್ ಆಸ್ಪತ್ರೆಯಿಂದ ಕಾರ್ಡಿಯಾಕ್ ಆಂಬುಲೆನ್ಸ್ನಲ್ಲಿ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿ ಜತೆಗೆ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಆಂಬುಲೆನ್ಸ್ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ತಲುಪುವಂತೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ರಾಂಚಿ ವಿಮಾನ ನಿಲ್ದಾಣದಿಂದ ವಿಮಾನದಲ್ಲಿ ಸಾಗಿಸಲಾಯಿತು.
ಲಾಲು ಪ್ರಸಾದ್ ಅವರ ಮದುಮೇಹ ಮಟ್ಟ ತೀವ್ರ ಏರಿಕೆಯಾಗಿದ್ದು, ಅವರ ಮೂತ್ರಪಿಂಡಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಅವರ ಶ್ವಾಸಕೋಶದಲ್ಲಿಯೂ ಸಮಸ್ಯೆಯಾಗಿದ್ದು, ನೀರು ತುಂಬಿಕೊಂಡಿದೆ. ಇದರಿಂದ ಅವರಲ್ಲಿ ನ್ಯುಮೋನಿಯಾ ಕಾಣಿಸಿಕೊಂಡಿದ್ದು, 72ನೇ ವಯಸ್ಸಿನಲ್ಲಿ ಇದು ತೀವ್ರ ಅಪಾಯಕಾರಿಯಾಗಿದೆ.
ಶುಕ್ರವಾರ ಲಾಲು ಪ್ರಸಾದ್ ಅವರನ್ನು ಭೇಟಿ ಮಾಡಿದ ಅವರ ಮಗ ತೇಜಸ್ವಿ ಯಾದವ್, 'ಅವರಿಗೆ ಉತ್ತಮ ಚಿಕಿತ್ಸೆ ನೀಡಲು ನಮ್ಮ ಕುಟುಂಬ ಬಯಸಿದೆ. ಆದರೆ ಅವರಿಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂದು ವಿಶ್ಲೇಷಣೆ ನಡೆಸುವುದು ವೈದ್ಯರಿಗೆ ಬಿಟ್ಟಿದ್ದು. ಅವರ ಎಲ್ಲ ಪರೀಕ್ಷೆಯ ವರದಿಗಳು ಬಂದಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ನಾನು ನಾಳೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ' ಎಂದು ತಿಳಿಸಿದ್ದಾರೆ.