ಯುವತಿ ಕುರ್ ಆನ್ ವಿತರಿಸಬೇಕೆಂಬ ಜಾಮೀನಿನ ಷರತ್ತು ಕೈ ಬಿಟ್ಟ ಕೋರ್ಟ್
ರಾಂಚಿ (ಜಾರ್ಖಂಡ್), ಜುಲೈ 18: ಅಲ್ಪಸಂಖ್ಯಾತ ಸಮುದಾಯವನ್ನು ಗುರಿ ಮಾಡಿಕೊಂಡು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಹತ್ತೊಂಬತರ ಯುವತಿ ರೀಚಾ ಭಾರ್ತಿಗೆ ಸೋಮವಾರದಂದು ರಾಂಚಿ ಕೋರ್ಟ್ ಷರತ್ತಿನ ಮೇಲೆ ಜಾಮೀನು ನೀಡಿತ್ತು. ಆಕೆ ವಿರುದ್ಧ ದೂರು ನೀಡಿದ್ದ್ ದೂರುದಾರರೂ ಸೇರಿ ನಾಲ್ಕು ಗ್ರಂಥಾಲಯಗಳಿಗೆ ಕುರ್ ಆನ್ ವಿತರಿಸಬೇಕು ಎಂದು ಷರತ್ತು ವಿಧಿಸಿತ್ತು.
ಆದರೆ, ಈ ಷರತ್ತಿಗೆ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ, ತನಿಖಾಧಿಕಾರಿಯ ಶಿಫಾರಸಿನ ಮೇಲೆ ನ್ಯಾಯಾಧೀಶರು ಜಾಮೀನಿನ ಷರತ್ತು; ಕುರ್ ಆನ್ ವಿತರಿಸುವುದನ್ನು ಕೈ ಬಿಟ್ಟಿದ್ದಾರೆ. ಇದೀಗ ರೀಚಾ ಭಾರ್ತಿ ಏಳು ಸಾವಿರ ರುಪಾಯಿಯ ಬಾಂಡ್ ಹಾಗೂ ಎರಡು ಶ್ಯೂರಿಟಿ ನೀಡಿ, ಜಾಮೀನು ಪಡೆಯಬಹುದು.
ಕುರ್ ಆನ್ ವಿತರಿಸಲು ಕೋರ್ಟ್ ನಿಂದ ಷರತ್ತುಬದ್ಧ ಜಾಮೀನು; ಒಪ್ಪದ ವಿದ್ಯಾರ್ಥಿನಿ
ರೀಚಾ ಭಾರ್ತಿ ಬೆಂಬಲಕ್ಕೆ ನಿಂತಿರುವ ಹಲವರು, ಮೇಲಿನ ಹಂತದ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾದರೆ ಆಕೆಯ ಕಾನೂನು ವೆಚ್ಚವನ್ನು ಭರಿಸಲು ಮುಂದೆ ಬಂದಿದ್ದಾರೆ. ಇನ್ನು ನ್ಯಾಯಾಧೀಶರ ತೀರ್ಪಿನ ಬಗ್ಗೆ ಹಾಗೂ ನ್ಯಾಯಾಧೀಶರ ನಡವಳಿಕೆ ಬಗ್ಗೆ ವಕೀಲರ ಸಂಘವು ನ್ಯಾಯಾಂಗ ಆಯೋಗದ ಬಳಿ ಪ್ರತಿಭಟನೆ ದಾಖಲಿಸಿದೆ. ನ್ಯಾ. ಮನೀಶ್ ಕುಮಾರ್ ರನ್ನು ಬೇರೆ ಕೋರ್ಟ್ ಗೆ ವರ್ಗಾವಣೆ ಮಾಡುವ ತನಕ ಅನಿರ್ದಿಷ್ಟಾವಧಿಗೆ ಮನೀಶ್ ಭಾಗವಹಿಸುವ ಕೋರ್ಟ್ ಕಲಾಪ ಬಹಿಷ್ಕರಿಸುವ ಬೆದರಿಕೆ ಒಡ್ಡಿದ್ದಾರೆ.
ಕೋಮು ಸೌಹಾರ್ದವನ್ನು ಕದಡುವ 'ಆಕ್ಷೇಪಾರ್ಹ' ಪೋಸ್ಟ್ ಅನ್ನು ಫೇಸ್ ಬುಕ್ ನಲ್ಲಿ ಮಾಡಿದ ಬಗ್ಗೆ ಸ್ಥಳೀಯ ಇಸ್ಲಾಮಿಕ್ ಗುಂಪಿನಿಂದ ದೂರು ದಾಖಲಾಗಿತ್ತು. ಆ ನಂತರ ರಾಂಚಿ ಮಹಿಳಾ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿನಿ ರೀಚಾ ಭಾರ್ತಿಯನ್ನು ಕಳೆದ ಶುಕ್ರವಾರ ಬಂಧಿಸಲಾಗಿತ್ತು. ಆಕೆಗೆ ನ್ಯಾಯಾಧೀಶರು ಷರತ್ತು ಬದ್ಧ ಜಾಮೀನು ನೀಡಿದ್ದರು. ಐದು ಕುರ್ ಆನ್ ಪ್ರತಿಯನ್ನು ವಿತರಿಸಿ, ಹದಿನೈದು ದಿನದೊಳಗೆ ರಶೀದಿ ಸಲ್ಲಿಸುವಂತೆ ಸೂಚಿಸಿದ್ದರು.
ಈ ಷರತ್ತಿಗೆ ರೀಚಾ ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ಅದನ್ನು ಪ್ರಶ್ನಿಸಿದ್ದರು. ಈ ಪೋಸ್ಟ್ ಉದ್ದೇಶಪೂರ್ವಕವಾಗಿ ಯಾವುದೇ ಕೋಮಿನವರ ಭಾವನೆಗೆ ಹಾನಿ ಮಾಡಲು ನಾನು ಹಾಕಿದ್ದಲ್ಲ. ಅದನ್ನು ಬರೆದಿರಲಿಲ್ಲ. ಆ ಮಾಹಿತಿಯನ್ನು ಕಾಪಿ- ಪೇಸ್ಟ್ ಅಷ್ಟೇ ಮಾಡಿದ್ದೆ. ಇದೇ ರೀತಿಯ ಪೋಸ್ಟ್ ಇತರ ಧರ್ಮದವರು ಹಾಕಿದ್ದರೆ ಹನುಮಾನ್ ಚಾಲೀಸಾ ಪಠಿಸುವುದಕ್ಕೋ ಅಥವಾ ದೇವಸ್ಥಾನಕ್ಕೆ ಹೋಗುವುದಕ್ಕೆ ಹೇಳುವುದಿಲ್ಲ ಎಂದು ಆಕೆ ಹೇಳಿದ್ದರು.
ಇದೇ ಮೊದಲ ಬಾರಿಗೆ ತನಿಖಾಧಿಕಾರಿಯ ಶಿಫಾರಸಿನ ಮೇಲೆ ನ್ಯಾಯಾಂಗದ ತೀರ್ಮಾನವನ್ನು ಕೋರ್ಟ್ ನಿಂದ ಬದಲಾವಣೆ ಮಾಡಲಾಗಿದೆ.