ನುಪೂರ್ ಶರ್ಮಾ ವಿರುದ್ಧ ಪ್ರತಿಭಟನೆ: ರಾಂಚಿಯಲ್ಲಿ ಇಬ್ಬರ ಸಾವು
ರಾಂಚಿ, ಜೂ. 11: ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳಕಾರಿ ಹೇಳಿಕೆಯಿಂದ ಉಂಟಾದ ವಿವಾದವು ದೇಶದ ಹಲವೆಡೆ ಹಿಂಸಾಚಾರದ ರೂಪ ಪಡೆದುಕೊಂಡಿದ್ದು, ವಿವಿಧೆಡೆ ಕಲ್ಲುತೂರಾಟ ಸಾರ್ವಜನಿಕ ಆಸ್ತಿಗಳಿಗೆ ಹಾನಿಪಾನಿ ಪೊಲೀಸರೊಂದಿಗೆ ಘರ್ಷಣೆ ಉಂಟಾಗಿದ್ದು, ಈಗ ಜಾರ್ಖಂಡ್ನ ರಾಜಧಾನಿ ರಾಂಚಿಯಲ್ಲಿ ನಡೆದ ಪ್ರತಿಭಟನೆಯಲ್ಲಿಇಬ್ಬರು ಸಾವನ್ನಪ್ಪಿದ್ದು, ಹತ್ತು ಜನರಿಗೆ ಗಾಯಗಾಳಾಗಿವೆ.
"ಸದ್ಯ ಅಮಾನತುಗೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತು ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ರಾಂಚಿಯಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ. ಆ ಹತ್ತು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ," ಎಂದು ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹ
ಶುಕ್ರವಾರ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಜಾರ್ಖಂಡ್ ರಾಜಧಾನಿ ರಾಂಚಿಯ ಹಲವಾರು ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಯಿತು. ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿವಾದ ಎಬ್ಬಿಸಿದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.ಈ ವೇಳೆ ಕಲ್ಲು ತೂರಾಟ ಆರಂಭಿಸಿದ ಗುಂಪನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಲಾಠಿ ಚಾರ್ಜ್ ನಡೆಸಿದರು.
ರಾಂಚಿ ನಗರದಲ್ಲಿ ಹಲವು ಅಂಗಡಿ ಬಂದ್
ರಾಂಚಿಯ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ದೊಡ್ಡ ಜನಸಮೂಹವು ನೂಪುರ್ ಶರ್ಮಾ ಮತ್ತು ದೆಹಲಿ ಬಿಜೆಪಿಯ ಮಾಧ್ಯಮ ಘಟಕದ ಮಾಜಿ ಮುಖ್ಯಸ್ಥ ನವೀನ್ ಜಿಂದಾಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನೆಯ ಭಾಗವಾಗಿ ರಾಂಚಿ ನಗರದಲ್ಲಿ ಹಲವು ಅಂಗಡಿಗಳು ಮುಚ್ಚಿದ್ದವು. ಒಂದೇ ದಿನದಲ್ಲಿ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕನಿಷ್ಠ ಒಂಬತ್ತು ರಾಜ್ಯಗಳ ಹಲವಾರು ನಗರಗಳು ಬಿಜೆಪಿ ನಾಯಕರ ಹೇಳಿಕೆಯಿಂದ ಭಾರಿ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದವು.
ಹಿಂಸಾಚಾರದಲ್ಲಿ ತೊಡಗಿರುವವರನ್ನು ಬಂಧಿಸುತ್ತೇವೆ
ಪ್ರತಿಭಟನೆಯಲ್ಲಿ ನಡೆದ ಗುಂಡೇಟಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಂಚಿ ನಗರ ಪೊಲೀಸ್ ಮುಖ್ಯಸ್ಥ ಅಂಶುಮನ್ ಕುಮಾರ್ ಖಚಿತಪಡಿಸಿದ್ದಾರೆ. ಘಟನೆಯಲ್ಲಿ ಎಂಟು ಗಲಭೆಕೋರರು ಮತ್ತು ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಅವರನ್ನು ರಿಮ್ಸ್ ಮತ್ತು ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾವು ಮೊದಲು ಹಿಂಸಾಚಾರದಲ್ಲಿ ತೊಡಗಿರುವವರನ್ನು ಗುರುತಿಸಿ, ಅವರನ್ನು ಪ್ರಶ್ನಿಸಿ ನಂತರ ಅವರನ್ನು ಬಂಧಿಸುತ್ತೇವೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪ್ರತಿಭಟನಾ ಪೀಡಿತ ಪ್ರದೇಶಗಳಲ್ಲಿ ನಿರ್ಬಂಧಗಳು ಜಾರಿಯಲ್ಲಿವೆ ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ
ಬಿಜೆಪಿಯ ನಾಯಕಿ ನೂಪುರ್ ಶರ್ಮಾ ಖಾಸಗಿ ಸುದ್ದಿವಾಹಿಯ ಚರ್ಚೆಯ ಸಂದರ್ಭದಲ್ಲಿ ಮಹಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿಯಾದ ಹೇಳಿಕೆಯನ್ನು ಕೊಟ್ಟ ಬಗ್ಗೆ ಆಕ್ರೋಶ ಭುಗಿಲೆದ್ದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಚರ್ಚೆಗೆ ಬಂದು ನೂಪುರ್ ಶರ್ಮಾ ಹೇಳಿಕೆಯನ್ನು ಸುಮಾರು 17ಕ್ಕೂ ಹೆಚ್ಚು ದೇಶಗಳು ಖಂಡನೆ ವ್ಯಕ್ತಪಡಿಸಿದ್ದರು. ಇದರಿಂದ ನೂಪುರ್ ಶರ್ಮಾ ಮೇಲೆ ಬಿಜೆಪಿ ಪಕ್ಷದ ವತಿಯಿಂದ ಕ್ರಮವನ್ನು ಕೈಗೊಂಡಿತ್ತು. ದೇಶದ ಉತ್ತರಪ್ರದೇಶ, ದೆಹಲಿ, ತಲಂಗಾಣ, ಮಹಾರಾಷ್ಟ್ರ ಸೊಲ್ಲಾಪುರ ಸೇರಿದಂತೆ ದೇಶದ ಹಲವೆಡೆ ಸಾವಿರಾರು ಮುಸ್ಲಿಂ ಸಮುದಾಯದ ಜನರು ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರವಾದಿ ಮಹಮದ್ ಪೈಗಂಬರ್ ವಿರುದ್ದ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದು ಸಮುದಾಯೊಂದರ ಆಕ್ರೋಶ ದೊಡ್ಡ ಮಟ್ಟದಲ್ಲಿಯೇ ವ್ಯಕ್ತವಾಗುತ್ತಿದೆ.
ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ದ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿರುವುದರಿಂದ ಕೇಂದ್ರ ಗೃಹ ಇಲಾಖೆ ರಾಜ್ಯಗಳಿಗೆ ಎಚ್ಚರವಹಿಸುವಂತೆ ಸಂದೇಶವನ್ನು ಕಳಿಸಿದೆ. ಆಯಾ ರಾಜ್ಯಗಳು ಕಾನೂನು ಸುವ್ಯವಸ್ಥೆ ಹದಗೆಡದಂತೆ ಕ್ರಮವನ್ನು ವಹಿಸಲು ಸೂಚನೆಯನ್ನು ನೀಡಲಾಗಿದೆ. ಕೇಂದ್ರ ಗುಪ್ತಚರ ಇಲಾಖೆಗಳಿಂದಲೂ ರಾಜ್ಯ ಗುಪ್ತಚರ ಇಲಾಖೆಗಳಿಗೆ ಮಾಹಿತಿಯನ್ನು ನೀಡಿದ್ದು ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಣಿಟ್ಟಿರುವಂತೆ ಸೂಚನೆಯನ್ನು ರವಾನಿಸಲಾಗಿದೆ.
Recommended Video