ಗರ್ಭಿಣಿಯಿಂದಲೇ ರಕ್ತ ಕ್ಲೀನ್ ಮಾಡಿಸಿದ ಆಸ್ಪತ್ರೆ ಸಿಬ್ಬಂದಿ: ಮಗು ಸಾವು
ರಾಂಚಿ, ಏಪ್ರಿಲ್ 20: ಹೆರಿಗೆಗೆಂದು ಬಂದಿದ್ದ ಗರ್ಭಿಣಿಯಿಂದಲೇ ರಕ್ತಸ್ರಾವ ಕ್ಲೀನ್ ಮಾಡಿಸಿದ ಪರಿಣಾಮ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ಹೆರಿಗೆಗೆಂದು ಗರ್ಭಿಣಿ ಆಸ್ಪತ್ರೆಗೆ ಬಂದು ದಾಖಲಾಗಿದ್ದರು, ಹೆರಿಗೆ ನೋವು ಆರಂಭವಾಗಿತ್ತು, ರಕ್ತಸ್ರಾವವೂ ಶುರುವಾಗಿತ್ತು ಆದರೆ ಹೆರಿಗೆ ಆಗಿರಲಿಲ್ಲ, ಅಷ್ಟರೊಳಗೆ ಆಸ್ಪತ್ರೆ ಸಿಬ್ಬಂದಿ "ನೀನು ಕೊರೊನಾ ಹರಡುತ್ತೀಯಾ' ಎಂದು ಹೇಳಿ ನೋವಿನಲ್ಲಿದ್ದ ಗರ್ಭಿಣಿಯಿಂದಲೇ ರಕ್ತವನ್ನು ಶುಚಿಗೊಳಿಸಲು ಹೇಳಿದ್ದಾರೆ. ಪರಿಣಾಮ ಹೊಟ್ಟೆಯಲ್ಲಿದ್ದ ಕಂದಮ್ಮ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಮಹಿಳೆ ಆಗ್ರಹಿಸಿದ್ದು, ಇಂತಹ ಘಟನೆ ಮತ್ತೆ ಮರುಕಳಿಸಬಾರದು ಎಂದು ಅವರು ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ.
ಘಟನೆ ಬಗ್ಗೆ ಪೊಲೀಸರಿಂದ ಕ್ರಮ
ಪ್ರಕರಣವು ಜಾರ್ಖಂಡ್ ಪೊಲೀಸರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜೆಮ್ಶೆಡ್ಪುರ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಈ ಸಂಬಂಧ ತನಿಖೆ ನಡೆಸುವಂತೆಯೂ ತಿಳಿಸಿದ್ದಾರೆ.
ಗರ್ಭಿಣಿಗೆ ತೀವ್ರ ರಕ್ತಸ್ರಾವವಾಗಿತ್ತು
30 ವರ್ಷದ ರಿಝ್ವಾನಾ ಖತನ್ ಅವರಿಗೆ ಗುರುವಾರ ಮಧ್ಯಾಹ್ನದ ಬಳಿಕ ತೀವ್ರವಾಗಿ ರಸ್ತಸ್ರಾವವಾಗುತ್ತಿತ್ತು. ಹೀಗಾಗಿ ಕೂಡಲೇ ಮಹಿಳೆಯನ್ನು ಜೆಮ್ಶೆಡ್ಪುರದಲ್ಲಿರುವ ಮಹಾತ್ಮಾ ಗಾಂಧಿ ಮೆಮೊರಿಯಲ್ ಮೆಡಿಕಲ್ ಕಾಲೇಜ್ & ಹಾಸ್ಪಿಟಲ್(ಎಂಜಿಎಂ)ಗೆ ದಾಖಲಿಸಲಾಯಿತು. ಈ ವೇಳೆ ಅಲ್ಲಿ ತಾನು ಅನುಭವಿಸಿದ ಕಷ್ಟವನ್ನು ಮಹಿಳೆ ಪತ್ರದ ಮೂಲಕ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಗಮನಕ್ಕೆ ತಂದಿದ್ದಾರೆ.
ಮಹಿಳೆ ಪತ್ರದಲ್ಲಿ ಹೇಳಿದ್ದೇನು?
ನಾನು ಆಸ್ಪತ್ರೆಗೆ ತೆರಳಿದಾಗ ಅಲ್ಲಿಯ ಸಿಬ್ಬಂದಿ ಧರ್ಮವನ್ನಿಟ್ಟುಕೊಂಡು ನನ್ನನ್ನು ನಿಂದಿಸಿದರು. ಅಲ್ಲದೆ ರಕ್ತಸ್ರಾವವಾಗಿ ನೆಲದಲ್ಲಿ ಬಿದ್ದಿದ್ದ ರಕ್ತವನ್ನು ನನ್ನ ಕೈಯಲ್ಲಿಯೇ ಕ್ಲೀನ್ ಮಾಡಲು ಒತ್ತಾಯಿಸಿದರು. ಆದರೆ ನಾನು ಕ್ಲೀನ್ ಮಾಡೋ ಸ್ಥಿತಿಯಲ್ಲಿ ಇರಲಿಲ್ಲ, ದೇಹ ಆಯಾಸದಿಂದ ಕೂಡಿತ್ತು. ಕೈ-ಕಾಲುಗಳು ನಡುಗಲು ಆರಂಭವಾಗಿತ್ತು.
ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ
ರಕ್ತವನ್ನು ಕ್ಲೀನ್ ಮಾಡಲು ನಿರಾಕರಿಸಿದಾಗ ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ಕೂಡ ಮಾಡಿದ್ದು, ಹೆರಿಗೆ ಮಾಡಲು ನಿರಾಕರಿಸಿದರು. ಇದರಿಂದ ನಾನು ಶಾಕ್ ಗೆ ಒಳಗಾದೆ. ನಂತರ ಅಲ್ಲೇ ಇದ್ದ ನರ್ಸಿಂಗ್ ಹೋಂಗೆ ತೆರಳಿದೆ. ಅಲ್ಲಿ ಮಗುವಿಗೆ ಜನ್ಮ ನೀಡಿದೆಯಾದರೂ ನನ್ನ ಪುಟ್ಟ ಕಂದಮ್ಮ ಅದಾಗಲೇ ಇಹಲೋಕ ಸೇರಿಬಿಟ್ಟಿತು ಎಂದು ಮಹಿಳೆ ತನ್ನ ನೋವಿನ ಕಥೆಯನ್ನು ಪತ್ರದಲ್ಲಿ ಬಿಚ್ಚಿಟ್ಟಿದ್ದಾರೆ.