ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದೇನೆ ಎಂದು ಸಂಭ್ರಮಿಸಿದ್ದ ಮಹಿಳೆ ನಂತರ ಆಗಿದ್ದೆ ಬೇರೆ
ರಾಂಚಿ, ಜೂನ್ 4: ದೇಶದ ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆ ಪಾಸಾಗುವುದು ಎಷ್ಟೋ ವಿದ್ಯಾರ್ಥಿಗಳ ಕನಸು. ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ಓದಿದ ನಂತರವೂ ಪಾಸಾಗದೇ ಇರುವವರ ಸಂಖ್ಯೆ ಅದೆಷ್ಟೋ, ಇನ್ನು ಕೆಲವರು ಮೊದಲ ಪ್ರಯತ್ನದಲ್ಲೇ ಪಾಸಾಗುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸುತ್ತಾರೆ. ಇಲ್ಲಿ ಪಾಸಾದವರು ರಾತ್ರೋ ರಾತ್ರಿ ಸ್ಟಾರ್ಗಳಾಗಿ ಮುಂದಿನ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಮಾದರಿಯಾಗುತ್ತಾರೆ. ಇಂತಹ ಪರೀಕ್ಷೆಯ ಫಲಿತಾಂಶ ಬಂದಾಗಲೂ ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಅರಿಯದೇ ಮಾಡುವ ಸಣ್ಣ ಎಡವಟ್ಟು ಕೂಡ ದೊಡ್ಡ ಪ್ರಮಾದಕ್ಕೆ ಕಾರಣವಾಗಬಹುದು. ದಿವ್ಯಾ ಪಾಂಡೆ ವಿಚಾರದಲ್ಲಿ ಆದದ್ದೂ ಇದೆ.
ಇತ್ತೀಚೆಗೆ ಪ್ರಕಟವಾದ ಕೇಂದ್ರ ಲೋಕಸಭಾ ಆಯೋಗ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದೇನೆ ಎಂದು ಸಂಭ್ರಮಿಸಿ, ಎಲ್ಲೆಡೆ ಪ್ರಶಂಸೆಗೊಳಗಾಗಿದ್ದ ಅಭ್ಯರ್ಥಿ ದಿವ್ಯಾ ಪಾಂಡೆ (24) ಮತ್ತು ಅವರ ಕುಟುಂಬಸ್ಥರು ಇದೀಗ ಕ್ಷಮೆ ಯಾಚಿಸಿದ್ದಾರೆ.
ಹುಬ್ಬಳ್ಳಿ; ಯುಪಿಎಸ್ಸಿ ಯಶಸ್ಸಿನ ಪಯಣ ಹಂಚಿಕೊಂಡ ತಹಸಿನ್ ಬಾನು
ಜಾರ್ಖಂಡ್ ರಾಜ್ಯದ ರಾಮಗಡ ನಿವಾಸಿಯಾದ 24 ವರ್ಷದ ದಿವ್ಯಾಪಾಂಡೆ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ತೇರ್ಗಡೆಯಾಗಿರುವುದಾಗಿ ಸುದ್ದಿಯಾಗಿತ್ತು. ದಿವ್ಯಾ ಪಾಂಡೆ ಮತ್ತು ಕುಟುಂಬಸ್ಥರು ಸಂಭ್ರಮಾಚರಣೆ ಮಾಡಿದ್ದರು. ಮಾಧ್ಯಮಗಳಲ್ಲೂ ದಿವ್ಯಾ ಪಾಂಡೆ ಸಾಧನೆ ಬಗ್ಗೆ ಕೊಂಡಾಡಿದ್ದವು.
323ನೇ ರ್ಯಾಂಕ್ ಎಂದುಕೊಂಡಿದ್ದ ದಿವ್ಯಾ
ಮೊದಲ ಪ್ರಯತ್ನದಲ್ಲೇ ದಿವ್ಯಾಪಾಂಡೆ 323ನೇ ರ್ಯಾಂಕ್ ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ದಿವ್ಯಾ ಕುಟುಂಬಸ್ಥರು ತಮ್ಮ ಮಗಳು ಯಾವುದೇ ಕೋಚಿಂಗ್ ಪಡೆಯದೇ ಮೊದಲ ಪ್ರಯತ್ನದಲ್ಲೇ ಉತ್ತೀರ್ಣಳಾಗಿದ್ದಾಳೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಸಂಭ್ರಮಾಚರಣೆ ಮಾಡಿದ್ದರು.
ಸ್ಮಾರ್ಟ್ಫೋನ್, ಇಂಟರ್ನೆಟ್ ಬಳಸಿ ಅಭ್ಯಾಸ ಮಾಡಿರುವುದಾಗಿ ದಿವ್ಯಾ ಹೇಳಿಕೊಂಡಿದ್ದರು. ದಿವ್ಯಾ ಪಾಂಡೆ, ರಾಂಚಿ ವಿಶ್ವವಿದ್ಯಾನಿಲಯದಿಂದ 2017ರಲ್ಲಿ ಪದವಿ ಪಡೆದಿದ್ದಾರೆ. ಜಿಲ್ಲಾಧಿಕಾರಿಯಾಗುವ ಮಹತ್ವಕಾಂಕ್ಷೆ ಹೊಂದಿರುವ ಇವರು ಇದಕ್ಕಾಗಿ ಪ್ರತಿ ದಿನ 18 ಗಂಟೆಗಳು ಅಧ್ಯಯನ ಮಾಡುವುದಾಗಿ ಹೇಳಿಕೊಂಡಿದ್ದರು. ಪರೀಕ್ಷೆ ತಯಾರಿಗಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮಂಡಳಿ (ಎನ್ಸಿಇಆರ್ ಟಿ) ಪುಸ್ತಕಗಳನ್ನು ಓದುತ್ತೇನೆ ಎಂಧು ಮಾಧ್ಯಮ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ದಿವ್ಯಾ ಸಾಧನೆಗೆ ಜಿಲ್ಲಾಧಿಕಾರಿ ಸನ್ಮಾನ
ದಿವ್ಯಾ ಪಾಂಡೆ ಸಾಧನೆ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿದ್ದಂತೆ ರಾಮಘಡ ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ತಮ್ಮ ಕಚೇರಿಗೆ ಕರೆಸಿಕೊಂಡು ಸನ್ಮಾನ ಮಾಡಿದ್ದರು. ದಿವ್ಯಾ ಪಾಂಡೆ ಸಾಧನೆಗೆ ಮಿಶ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ದಿವ್ಯಾ ತಂದೆ ಸೆಂಟ್ರಲ್ ಕೋಲ್ ಫೀಲ್ಡ್ಸ್ (ಸಿಸಿಎಲ್) ಕ್ರೇನ್ ಆಪರೇಟರ್ ಆಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ತಮ್ಮ ಸಂಸ್ಥೆಯ ಮಾಜಿ ಉದ್ಯೋಗಿಯ ಮಗಳ ಸಾಧನೆಗೆ ವ್ಯಕ್ತಪಡಿಸಿದ್ದ ಸಿಸಿಎಲ್ ಅಧ್ಯಕ್ಷ ಪಿ.ಎಂ. ಪ್ರಸಾದ್ ಮತ್ತು ಹಿರಿಯ ಅಧಿಕಾರಿಗಳು ದಿವ್ಯಾ ಪಾಂಡೆಯನ್ನು ಸನ್ಮಾನಿಸಿದ್ದರು.
ತಪ್ಪು ಮಾಹಿತಿಯಿಂದಾದ ಎಡವಟ್ಟು
ಇಷ್ಟೆಲ್ಲಾ ಸುದ್ದಿ ವೈರಲ್ ಆದ ಬಳಿಕ ದಿವ್ಯಾ ಪಾಂಡೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆಗಿಲ್ಲ ಎಂದು ಗೊತ್ತಾಗಿದೆ. ಉತ್ತರ ಪ್ರದೇಶ ಮೂಲದ ದಿವ್ಯಾ ಸ್ನೇಹಿತರು ಕರೆ ಮಾಡಿ ಉತ್ತೀರ್ಣರಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ. ಇದನ್ನು ಖಚಿತಪಡಿಸಿಕೊಳ್ಳಲು ದಿವ್ಯಾ ಪಾಂಡೆ ವೆಬ್ಸೈಟ್ ಪರಿಶೀಲಿಸಿದ್ದಾರೆ, ಆದರೆ ಇಂಟರ್ನೆಟ್ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಫಲಿತಾಂಶ ನೋಡಲಾಗಿಲ್ಲ. ಸ್ನೇಹಿತರು ಹೇಳಿದ್ದನ್ನೇ ನಂಬಿ ಪಾಸಾಗಿದ್ದೇನೆ ಎಂದು ಸಂಭ್ರಮಿಸಿದ್ದಾರೆ.
ಅಸಲಿಗೆ 323ನೇ ರ್ಯಾಂಕ್ನಲ್ಲಿ ಪಾಸಾಗಿರುವುದು ದಕ್ಷಿಣ ಭಾರತ ಮೂಲದ ದಿವ್ಯಾ.ಪಿ ಹೆಸರಿನ ಅಭ್ಯರ್ಥಿ. ಆದರೆ ಸ್ನೇಹಿತರು ಮಾಡಿದ ತಪ್ಪಿನಿಂದ ದಿವ್ಯಾ ಪಾಂಡೆ ತಲೆ ತಗ್ಗಿಸುವಂತಾಗಿದೆ.
ದಿವ್ಯಾ ಮತ್ತು ಕುಟುಂಬದವರಿಂದ ಕ್ಷಮೆ ಯಾಚನೆ
ವಿಷಯ ತಿಳಿಯುತ್ತಿದ್ದಂತೆ ದಿವ್ಯಾ ಪಾಂಡೆ ಕಂಗಾಲಾಗಿದ್ದಾರೆ. ಕೂಡಲೇ ತನ್ನನ್ನು ಸನ್ಮಾನಿಸಿದ ಜಿಲ್ಲಾಡಳಿತದ ಮುಂದೆ ಹೋಗಿ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ. ಅಲ್ಲದೆ ತಂದೆ ಕೆಲಸ ಮಾಡುತ್ತಿದ್ದ ಸಿಸಿಎಲ್ ಸಂಸ್ಥೆಯ ಬಳಿಯೂ ಕ್ಷಮೆ ಕೇಳಿದ್ದಾರೆ. ಮಾಧ್ಯಮಗಳ ಮುಂದೆ ಕ್ಷಮೆಯಾಚಿಸಿರುವ ಪಾಂಡೆ ಮತ್ತು ಕುಟುಂಬಸ್ಥರು, ಇಂಟರ್ನೆಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂದು ಅದಕ್ಕೆ ಇಷ್ಟೆಲ್ಲಾ ಗೊಂದಲ ಉಂಟಾಗಿದೆ ಎಂದು ಹೇಳಿದ್ದಾರೆ. ಮಾಹಿತಿಯ ಅಸ್ಪಷ್ಟತೆಯಿಂದಾಗಿ ಎಡವಟ್ಟು ಎಂದು ತಿಳಿದ ಕಾರಣ ದಿವ್ಯಾ ಪಾಂಡೆ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ. ಈ ಘಟನೆಯಿಂದ ಕುಗ್ಗದೆ, ಮುಂದಿನ ಪರೀಕ್ಷೆಗೆ ಸೂಕ್ತ ತಯಾರಿ ಮಾಡಿಕೊಂಡು, ಈ ಬಾರಿ ಸುಳ್ಳಾಗಿರುವ ಸುದ್ದಿಯನ್ನು ದಿವ್ಯಾ ಪಾಂಡೆ ಮುಂದಿನ ಬಾರಿ ನಿಜವಾಗಿಸಲಿ ಎಂದು ಹಾರೈಸಿದ್ದಾರೆ.
Recommended Video