ತ್ರಿಕುಟ್ ಬೆಟ್ಟಗಳಲ್ಲಿ ಅಪಘಾತಕ್ಕೀಡಾದ ರೋಪ್ವೇ ವಾಹನಗಳು: 2 ಸಾವು-ಹಲವರಿಗೆ ಗಾಯ
ರಾಂಚಿ ಏಪ್ರಿಲ್ 11: ತ್ರಿಕುಟ್ ಬೆಟ್ಟಗಳಲ್ಲಿ ರೋಪ್ವೇ ಕೇಬಲ್ ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು ಹಲವಾರು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಜಾರ್ಖಂಡ್ ಪ್ರವಾಸೋದ್ಯಮದ ತ್ರಿಕುಟ್ ರೋಪ್ವೇ ಭಾರತದ ಅತಿ ಎತ್ತರದ ಮತ್ತು ಉದ್ದವಾದ ರೋಪ್ವೇ ಎಂದು ಹೇಳುತ್ತದೆ. ಬಾಬಾ ಬೈದ್ಯನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ರೋಪ್ವೇ ಸುಮಾರು 766-ಮೀಟರ್ ಉದ್ದವಿದ್ದರೆ, ಬೆಟ್ಟವು 392-ಮೀಟರ್ ಎತ್ತರವಾಗಿದೆ. ರೋಪ್ವೇಯಲ್ಲಿ 25 ಕ್ಯಾಬಿನ್ಗಳಿವೆ. ಪ್ರತಿ ಕ್ಯಾಬಿನ್ನಲ್ಲಿ ನಾಲ್ಕು ಜನರು ಕುಳಿತುಕೊಳ್ಳಬಹುದಾಗಿದೆ.
ಜಾರ್ಖಂಡ್ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ ದೇವಸ್ಥಾನದ ಸಮೀಪವಿರುವ ತ್ರಿಕುಟ್ ಬೆಟ್ಟಗಳಲ್ಲಿ ರೋಪ್ವೇ ಕೇಬಲ್ ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಅಧಿಕಾರಿಗಳ ಪ್ರಕಾರ, ರೋಪ್ವೇಯಲ್ಲಿನ 12 ಕ್ಯಾಬಿನ್ಗಳಲ್ಲಿ 48 ಜನರು ಇನ್ನೂ ಸಿಲುಕಿಕೊಂಡಿದ್ದಾರೆ ಮತ್ತು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಬಿಹಾರ, ಜಾರ್ಖಂಡ್ ಮತ್ತು ಉ.ಪ್ರದೇಶ ಭಾರತದ ಅತ್ಯಂತ ಬಡ ರಾಜ್ಯಗಳು: MPI ವರದಿ
ಕೇಬಲ್ ಕಾರ್ಗಳ ಘರ್ಷಣೆಗೆ ತಾಂತ್ರಿಕ ಅಡಚಣೆ ಕಾರಣ ಎಂದು ಕಂಡುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ ನಿಖರವಾದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಘಟನೆಯ ನಂತರ ರೋಪ್ವೇ ಮ್ಯಾನೇಜರ್ ಮತ್ತು ಇತರ ಉದ್ಯೋಗಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ದಿಯೋಘರ್ ಉಪ ಆಯುಕ್ತ ಮಂಜುನಾಥ ಭಜಂತ್ರಿ ತಿಳಿಸಿದ್ದಾರೆ. ಡಿಸಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್ ಚಂದ್ರ ಜಾಟ್ ಸ್ಥಳದಿಂದ ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಸ್ಥಳೀಯ ಗ್ರಾಮಸ್ಥರು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ಡಿಆರ್ಎಫ್ಗೆ ಸಹಾಯ ಮಾಡುತ್ತಿದ್ದಾರೆ ಎಂದು ಭಜಂತ್ರಿ ಹೇಳಿದರು. "ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಇನ್ನೂ ಕೆಲವರು ರೋಪ್ವೇಯಲ್ಲಿ ಕೇಬಲ್ ಕಾರ್ಗಳಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಅವರನ್ನು ರಕ್ಷಿಸಲಾಗುತ್ತಿದೆ. ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದೆ" ಎಂದು ಡಿಸಿ ಹೇಳಿದರು. ಇದರ ಬಗ್ಗೆ ವದಂತಿಗಳನ್ನು ಹರಡದಂತೆ ಜನರಿಗೆ ಮನವಿ ಮಾಡಿದರು.
ಘಟನೆ ನಡೆದ ತಕ್ಷಣ ಗೊಡ್ಡಾ ಸಂಸದ ನಿಶಿಕಾಂತ್ ದುಬೆ ಅವರು ಸ್ಥಳದಲ್ಲಿ ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಜಾರ್ಖಂಡ್ ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ಅವರಿಗೆ ವಿನಂತಿಸಿದ್ದಾರೆ. ಈ ವಿಷಯದ ಬಗ್ಗೆ ತಕ್ಷಣ ಗಮನ ಹರಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಡ್ರೋನ್ ಮೂಲಕವೂ ಪರಿಹಾರ ಸಾಮಗ್ರಿಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ರೋಪ್ವೇ ಅಪಘಾತದಲ್ಲಿ ಸಿಲುಕಿರುವ ಜನರನ್ನು ವಾಯುಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಪ್ರಯತ್ನ ನಡೆಸಲಾಗುತ್ತಿದೆ. ಮುಂಜಾನೆ 5 ಗಂಟೆಯಿಂದ ಹೆಲಿಕಾಪ್ಟರ್ ಮೂಲಕ ಪರಿಹಾರ ಕಾರ್ಯ ನಡೆಸಲಾಗುತ್ತಿದೆ.