ಮುಸ್ಲಿಂ ಶಾಸಕನಿಗೆ ರಾಮಜಪ ಮಾಡಲು ಒತ್ತಾಯಿಸಿದ ಬಿಜೆಪಿ ಸಚಿವ
ರಾಂಚಿ, ಜುಲೈ 26: ಜಾರ್ಖಂಡ್ ನ ಬಿಜೆಪಿ ಸಚಿವರೊಬ್ಬರು ವಿಧಾನಸೌಧದ ಎದುರಲ್ಲೇ ಮುಸ್ಲಿಂ ಶಾಸಕರೊಬ್ಬರಿಗೆ ಜೈ ಶ್ರೀರಾಮ್ ಪಠಿಸುವಂತೆ ಒತ್ತಾಯಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
"ಇರ್ಫಾನ್ ಭಾಯ್,ನೀವು ಜೋರಾಗಿ ಜೈ ಶ್ರೀರಾಮ್ ಹೇಳಬೇಕೆಂದು ನಾನು ಸವಾಲೆಸೆಯುತ್ತೇನೆ. ನಿಮ್ಮ ಪೂರ್ವಜರು ರಾಮನ ಕುಟುಂಬಸ್ಥರೇ, ಬಾಬರನ ಕುಟುಂಬಸ್ಥರಲ್ಲ" ಎಂದು ಬಿಜೆಪಿ ಸಚಿವ ಸಿಪಿ ಸಿಂಗ್ ಎಂಬುವವರು ಇರ್ಫಾನ್ ಅನ್ಸಾರಿ ಎಂಬ ಕಾಂಗ್ರೆಸ್ ಶಾಸಕರಿಗೆ ಹೇಳಿದ್ದರು.
ಮದುವೆಯಾಗಿ ಒಂದೂವರೆ ತಿಂಗಳಾಗಿತ್ತಷ್ಟೇ.. ತಬ್ರಿಝ್ ಸಾವಿನ ಕಣ್ಣೀರ ಕತೆ
ನೀವು ರಾಮನ ಹೆಸರನ್ನಿಟ್ಟುಕೊಂಡು ಗಲಾಟೆ ಎಬ್ಬಿಸುತ್ತಿದ್ದೀರಾ. ರಾಮನ ಹೆಸರಿಗೆ ಅವಮಾನ ಮಾಡುತ್ತಿದ್ದೀರಾ. ಈಗ ಬೇಕಿರುವುದು ಕೆಲಸ, ವಿದ್ಯುತ್, ನೀರು, ಚರಂಡಿ ವ್ಯವಸ್ಥೆ. ಮೊದಲು ಅದರತ್ತ ಗಮನ ಕೊಡಿ ಎಂದು ಅನ್ಸಾರಿ ಪ್ರತಿಕ್ರಿಯೆ ನೀಡಿದ್ದರು.
"ನಾನು ನಿಮಗೆ ಜೈ ಶ್ರೀರಾಮ್ ಹೇಳುವಂತೆ ಹೆದರಿಸುತ್ತಿಲ್ಲ. ನಿಮ್ಮ ಪೂರ್ವಜರೂ ಜೈ ಶ್ರೀರಾಮ್ ಅನ್ನೇ ಪ್ರಾರ್ಥಿಸುತ್ತಿದ್ದರೇ ಹೊರತು ತೈಮುರ್, ಬಾಬರ್, ಘಜ್ನಿಯನ್ನು ಪ್ರಾರ್ಥಿಸುತ್ತಿರಲಿಲ್ಲ ಎಂಬುದನ್ನು ನೆನಪಿಸಲು ಹಾಗೆ ಹೇಳಿದೆ ಅಷ್ಟೇ" ಎಂದು ಸಿಂಗ್ ಹೇಳಿದರು.
ಕಳೆದ ಕೆಲವು ದಿನಗಳಿಂದ ಇಂಥ ಘಟನೆಗಳು ಪದೇ ಪದೇ ನಡೆಯುತ್ತಲೇ ಇವೆ. ಮೋಟಾರ್ ಸೈಕಲ್ ಕದ್ದ ಆರೋಪದ ಮೇಲೆ ತಬ್ರೇಝ್ ಅನ್ಸಾರಿ ಎಂಬ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿ, ನಂತರ ಜೈ ಶ್ರೀರಾಮ್ ಹೇಳುವಂತೆ ಪೀಡಿಸಲಾಗಿತ್ತು. ನಂತರ ಆತ ಮೃತನಾಗಿದ್ದ.
ಜಾರ್ಖಂಡ್: ಮೋಟರ್ ಸೈಕಲ್ ಕದ್ದ ಎಂದು ಹೊಡೆದು ಕೊಂದ ಜನ
ಈ ರೀತಿಯ ಘಟನೆಗಳು ಹೆಚ್ಚುತ್ತಿರುವುದನ್ನು ಖಂಡಿಸಿರುವ ಬಾಲಿವುಡ್ ನಟಿ ಕಂಗನಾ ರಣೌತ್, ಸೆನ್ಸಾರ್ ಮಂಡಳಿಯ ಪ್ರಸೂನ್ ಜೋಶಿ ಸೇರಿದಂತೆ 60 ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಇಂಥ ಘಟನೆಗಳನ್ನು ಕೂಡಲೇ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.