ಜಾರ್ಖಂಡ್: ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಶಾಸಕ
ರಾಂಚಿ, ನವೆಂಬರ್ 11: ಜಾರ್ಖಂಡ್ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೇ ಬಿಜೆಪಿ ಶಾಸಕರೊಬ್ಬರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಜಾರ್ಖಂಡ್ ನ ಬರ್ಹಿ ಕ್ಷೇತ್ರದ ಶಾಸಕರಾಗಿದ್ದ ಉಮಾಶಂಕರ್ ಅಕೆಲಾ ಅವರು ನವದೆಹಲಿಯಲ್ಲಿ ಎಐಸಿಸಿ ಉಸ್ತುವಾರಿ ಆರ್ ಪಿಎನ್ ಸಿಂಗ್ ಹಾಗೂ ಜಾರ್ಖಂಡ್ ಪ್ರದೇಶ್ ಕಾಂಗ್ರೆಸ್ ಸಮಿತಿ ಅಧಕ್ಷ ರಮೇಶ್ವೇರ್ ಒರಾಯಾನ್, ಹಜಾರಿಬಾಗ್ ಜಿಲ್ಲಾ ಕಾಂಗ್ರೆಸ್ ನಾಯಕ ದೇವರಾಜ್ ಕುಶ್ವಾಹಾ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಜಾರ್ಖಂಡ್ ವಿಧಾನಸಭೆಗಾಗಿ ಬಿಜೆಪಿ ರಣತಂತ್ರ, 52 ಅಭ್ಯರ್ಥಿಗಳ ಪಟ್ಟಿ ಪ್ರಕಟ
ಬರ್ಹಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಉಮಾಶಂಕರ್ ಅವರು 2009ರಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನೋಜ್ ಯಾದವ್ ವಿರುದ್ಧ ಸೋಲು ಕಂಡಿದ್ದರು. ಈಗ ಕಾಂಗ್ರೆಸ್ಸಿನಿಂದ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ಡಿಸೆಂಬರ್ 12ರಂದು ಈ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
81 ಕ್ಷೇತ್ರಗಳ ಜಾರ್ಖಂಡ್ ವಿಧಾನಸಭೆಗಾಗಿ 52 ಅಭ್ಯರ್ಥಿಗಳನ್ನು ಹೆಸರಿಸಲಾಗಿದ್ದು, ಮುಖ್ಯಮಂತ್ರಿ ರಘುಬರ್ ದಾಸ್ ಅವರು ಜೆಮ್ಶೆಡ್ಪುರ್ ಪೂರ್ವ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಜಾರ್ಖಂಡ್ ರಾಜ್ಯಾಧ್ಯಕ್ಷ ಲಕ್ಷ್ಮಣ್ ಗಿಲುವಾ ಅವರು ಚಕ್ರಧಾರ್ ಪುರ್ ನಿಂದ ಸ್ಪರ್ಧಿಸುತ್ತಿದ್ದಾರೆ.
ಜಾರ್ಖಂಡ್ ರಾಜ್ಯದಲ್ಲಿ ಐದು ಸುತ್ತಿನಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 30 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಡಿಸೆಂಬರ್ 23ರಂದು ಕೊನೆ ಹಂತದ ಮತದಾನ ನಿಗದಿಯಾಗಿದೆ.
ಒಟ್ಟು 81 ಶಾಸಕ ಬಲದ ಜಾರ್ಖಂಡ್ ನಲ್ಲಿ ಪ್ರಸ್ತುತ ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. 37 ಸ್ಥಾನಗಳ್ಲಲಿ ಜಯಗಳಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ರಘುವರ್ ದಾಸ್ ಮುಖ್ಯಮಂತ್ರಿಯಾಗಿದ್ದರು.