ಮನೆಗೊಬ್ಬರಿಗೆ ಸರ್ಕಾರಿ ಕೆಲಸ ಖಾಯಂ: ಆದರೆ ಕರ್ನಾಟಕದಲ್ಲಿ ಅಲ್ಲ!
ರಾಂಚಿ, ನವೆಂಬರ್.27: ರಾಜ್ಯದಲ್ಲಿರುವ ಪ್ರತಿಯೊಬ್ಬರ ಮನೆಯಲ್ಲೂ ಒಬ್ಬರಿಗೆ ಸರ್ಕಾರಿ ಕೆಲಸ ಖಾಯಂ. ಬಡತನ ರೇಖೆಗಿಂತ ಒಳಗಿರುವ ಜನರಿಗೆ ಸರ್ಕಾರವೇ ಉದ್ಯೋಗ ನೀಡಲು ಪ್ಲಾನ್ ರೂಪಿಸಿದೆ. ಹಾಗಂತಾ ಹೆಚ್ಚು ಖುಷಿ ಪಡುವ ಹಾಗಿಲ್ಲ. ಏಕೆಂದರೆ ಇದು ಕರ್ನಾಟಕಕ್ಕೆ ಸಂಬಂಧಿಸಿದ ವಿಚಾರವಲ್ಲ. ಜಾರ್ಖಂಡ್ ನಲ್ಲಿ ಇಂಥದೊಂದು ಭರವಸೆಯನ್ನು ಬಿಜೆಪಿ ತಮ್ಮ ಮತದಾರರಿಗೆ ನೀಡಿದೆ.
ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ಹೊರಟ ಬಿಜೆಪಿಗೆ ಮೇಲಿಂದ ಮೇಲೆ ಪೆಟ್ಟು ಬೀಳುತ್ತಿದೆ. ಇದರ ಮಧ್ಯೆ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಗದ್ದುಗೆ ಏರಲು ಕೇಸರಿ ಪಾಳಯ ಬಿಗ್ ಪ್ಲಾನ್ ಮಾಡಿದೆ.
''ಎಸ್ಸಿ, ಎಸ್ಟಿ, ಒಬಿಸಿಗೆ ಶೇ67ರಷ್ಟು ಮೀಸಲಾತಿ ಆಶ್ವಾಸನೆ"
ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ರವಿಶಂಕರ್ ಪ್ರಸಾದ್, ಜಾರ್ಖಂಡ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಮತದಾರರ ಮನಸು ಗೆಲ್ಲಲು ಬೇಕಾಗಿರುವ ಗಿಫ್ಟ್ ನೀಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕಕೊಂಡಿದೆ.
ಜಾರ್ಖಂಡ್ ನಲ್ಲಿ ನವೆಂಬರ್.30 ರಿಂದ ಐದು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಡಿಸೆಂಬರ್.23ರಂದು ಫಲಿತಾಂಶ ಹೊರ ಬೀಳಲಿದ್ದು, ಈಗಾಗಲೇ ಬಿಜೆಪಿ ಜೊತೆಗೆ ಜೆಎಂಎಂ ಕೂಡಾ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಸದ್ಯ ಬಿಜೆಪಿ ಪ್ರಣಾಳಿಕೆಯಲ್ಲಿ ಏನು ಹೇಳಿಕೊಂಡಿದೆ ಎಂಬುದರ ಸಂಪೂರ್ಣ ವಿವರ ನಿಮ್ಮ ಮುಂದಿದೆ.
ಬಿಪಿಎಲ್ ಕಾರ್ಡ್ ಇದ್ದರೆ ನೌಕರಿ ಪಕ್ಕಾ!
ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ನೆರವು ನೀಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಅದಕ್ಕಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಂದು ಮನೆಯಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಬಿಜೆಪಿ ಭರವಸೆ ನೀಡಿದೆ.
ಜಾರ್ಖಂಡ್ ರೈತರಿಗೆ ಬಿಜೆಪಿ ಬಂಪರ್
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ರೈತರಿಗೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬಂಪರ್ ಗಿಫ್ಟ್ ಕೊಡುವುದಾಗಿ ತಿಳಿಸಿದೆ. ರೈತರಿಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಏನೆಲ್ಲ ಯೋಜನೆಗಳನ್ನು ಘೋಷಿಸಿದೆ ಎಂದು ನೋಡುವುದಾದರೆ,
- ಪ್ರತಿಯೊಬ್ಬ ರೈತರಿಗೆ ಸರ್ಕಾರದಿಂದಲೇ ಮೊಬೈಲ್ ವಿತರಣೆ
- ಈಗಾಗಲೇ ರಾಜ್ಯ ಸರ್ಕಾರದಿಂದ ಕ್ವಿಂಟಾಲ್ ಭತ್ತಕ್ಕೆ 185 ರೂಪಾಯಿ ಬೆಂಬಲ ಬೆಲೆ
- ರೈತರಿಗಾಗಿ ಮುಖ್ಯಮಂತ್ರಿ ಕೃಷಿ ಆಶೀರ್ವಾದ ಯೋಜನೆ ಜಾರಿಗೆ
- ಈ ಯೋಜನೆಯಡಿ ಅತಿಹೆಚ್ಚು ರೈತರಿಗೆ ವಾರ್ಷಿಕ 5 ಸಾವಿರ ರೂಪಾಯಿ ನೆರವು
- ಮರುಪಾವತಿ ಸುಲಭವಾಗುವಂತೆ 3 ಲಕ್ಷ ರೂಪಾಯಿವರೆಗೂ ಸಾಲ ಸೌಲಭ್ಯ
- ಬಿಜೆಪಿ ಸರ್ಕಾರ ಬಂದರೆ 5 ಸಾವಿರ ರೈತರಿಗೆ ವಿದೇಶ ಪ್ರವಾಸ ಭಾಗ್ಯ
- ವಿದೇಶದಲ್ಲಿನ ಕೃಷಿ ಪದ್ಧತಿ ಅಧ್ಯಯನ ನಡೆಸಲು ರೈತರಿಗೆ ಪ್ರವಾಸ ಕಳುಹಿಸುವುದು
ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಸ್ಕಾಲರ್ ಶಿಪ್
ಜಾರ್ಖಂಡ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಕಾಲರ್ ಶಿಪ್ ನೀಡಲು ಬಿಜೆಪಿ ಮುಂದಾಗಿದೆ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 9 -10 ನೇ ತರಗತಿ ವಿದ್ಯಾರ್ಥಿಗಳಿಗೆ 2,200 ರೂಪಾಯಿ ಹಾಗೂ 11-12 ತರಗತಿ ವಿದ್ಯಾರ್ಥಿಗಳಿಗೆ 7,500 ರೂಪಾಯಿ ವಿದ್ಯಾರ್ಥಿ ವೇತ ನೀಡಲಾಗುವುದು ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.
ಸ್ವಯಂ-ಉದ್ಯೋಗ ಸೃಷ್ಟಿಗೆ ಹೆಚ್ಚಿನ ಸಾಲ ಸೌಲಭ್ಯ
ಜಾರ್ಖಂಡ್ ನಲ್ಲಿ ಹಿಂದುಳಿದ ವರ್ಗಗಳ ಜನರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಕಡಿಮೆ ಬಡ್ಡಿದರದಲ್ಲಿ ಹಿಂದುಳಿದ ವರ್ಗದ ಜನರು ಹಾಗೂ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ.