ನಾಲ್ಕು ತಿಂಗಳೊಳಗೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ:ಅಮಿತ್ ಶಾ
ರಾಂಚಿ, ಡಿಸೆಂಬರ್ 16: ಇನ್ನು ಕೇವಲ ನಾಲ್ಕು ತಿಂಗಳಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಮಹತ್ವದ ವಿಚಾರ ತಿಳಿಸಿದ್ದಾರೆ. ಜಾರ್ಖಂಡ್ ನಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ಅವರು ಈ ವಿಷಯವನ್ನು ಹೇಳಿದರು.
ಉತ್ತರ ಪ್ರದೇಶದ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಅನುಮತಿ ನೀಡಿ ಸುಪ್ರೀಂ ಕೋರ್ಟ್ ನವೆಂಬರ್ ೦೯ ರಂದು ತೀರ್ಪು ನೀಡಿತ್ತು. ಅಲ್ಲದೇ ಮಸೀದಿ ನಿರ್ಮಾಣ ಮಾಡಲು ಮುಸ್ಲಿಂ ಮಂಡಳಿಗೆ ೫ ಎಕರೆ ಪ್ರದೇಶವನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಅಯೋಧ್ಯಾ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಜಾ
ತೀರ್ಪು ಮರುಪರಿಶೀಲನೆ ಮಾಡಲು ಸಲ್ಲಿಸಿದ್ದ ಎಲ್ಲ 18 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ, ಈ ಹಿಂದೆ ನೀಡಿರುವ ತೀರ್ಪು ಅಂತಿಮವೆಂದು ನಾಲ್ಕು ದಿನಗಳ ಹಿಂದೆ ಹೇಳಿತ್ತು.
ತೀರ್ಪು ಬಂದು ಇಷ್ಟು ದಿನವಾದ ಮೇಲೆ ರಾಮಮಂದಿರ ನಿರ್ಮಾಣ ಬಗ್ಗೆ ಕೇಂದ್ರ ಸರ್ಕಾರದ ಯಾರೂ ಮಾತನಾಡಿರಲಿಲ್ಲ. ಆದರೆ ಇಂದು ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಮಮಂದಿರ ಪ್ರಸ್ತಾಪ ಮಾಡಿದ್ದಾರೆ.
ಸುಪ್ರೀಂ ಈಗಾಗಲೇ ತನ್ನ ತೀರ್ಪು ನೀಡಿದೆ, ನಾವು ನಾಲ್ಕು ತಿಂಗಳಲ್ಲಿ ಮುಗಿಲೆತ್ತರದ ರಾಮ ಮಂದಿರ ನಿರ್ಮಾಣ ಮಾಡಿ ತೋರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇಲ್ಲಿಯವರೆಗೂ ಕಾಂಗ್ರೆಸ್ ನ ಓಲೈಕೆ ರಾಜಕಾರಣದಿಂದ ವಿಳಂಬವಾಗಿತ್ತು ಎಂದರು.
ಅಯೋಧ್ಯೆ : ಸುಪ್ರೀಂ ತೀರ್ಪಿನಲ್ಲೂ ಬಿಜೆಪಿಗೆ 'ಎಚ್ಚರಿಕೆ' ನೀಡಿದ ಶಿವಸೇನೆ
ಪೌರತ್ವ ಮಸೂದೆಯ ವಿರುದ್ದದ ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ನ ಕುಮ್ಮಕ್ಕು ಇದೆ. ಜನರನ್ನು ದೇಶದ ವಿರುದ್ದ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.