ಅಯ್ಯಯ್ಯೋ, ವಿಧಾನಸಭೆ ಕಟ್ಟಡದಲ್ಲೇ ಹೊತ್ತಿಕೊಂಡಿತಾ ಬೆಂಕಿ!
ರಾಂಚಿ, ಡಿಸೆಂಬರ್.05: ವಿಧಾನಸಭೆಯಲ್ಲಿ ಸುರಕ್ಷತೆಗೆ ಯಾವುದೇ ಬರ ಇರುವುದಿಲ್ಲ. ಒಂದು ರಾಜ್ಯದ ಆಡಳಿತ ಕೇಂದ್ರವಾಗಿರುವ ವಿಧಾನಸಭೆಯನ್ನು ಕಾಯಲೆಂದೇ ನೂರಾರು ಮಂದಿ ಕಾವಲುಗಾರರನ್ನು ನೇಮಿಸಿರಲಾಗುತ್ತದೆ. ಹೀಗಿದ್ದರೂ ಡಿಸೆಂಬರ್.04ರ ಮಧ್ಯರಾತ್ರಿ ಅದೊಂದು ಘಟನೆ ನಡೆದು ಹೋಗಿದೆ.
ರಾಜ್ಯ ಆಡಳಿತ ಕೇಂದ್ರವಾಗಿರುವ ವಿಧಾನಸಭೆಯಲ್ಲೇ ಬೆಂಕಿ ಕಾಣಿಸಿಕೊಂಡಿದ್ದು, ಸಾಕಷ್ಟು ಸುದ್ದಿಯಾಗಿದೆ. ಆದರೆ, ಇದು ಕರ್ನಾಟಕ ವಿಧಾನಸಭೆ ಅಲ್ಲವೇ ಅಲ್ಲ. ಜಾರ್ಖಂಡ್ ವಿಧಾನಸಭೆಯ ನೂತನ ಕಚೇರಿಯಲ್ಲಿ ಇಂಥದೊಂದು ಘಟನೆ ನಡೆದಿದೆ.
ಬೀದರ್; ಕಾರಿಗೆ ಬೆಂಕಿ, ಮಹಿಳೆ ಸಜೀವ ದಹನ
ಮಧ್ಯರಾತ್ರಿ ಸಮಯದಲ್ಲಿ ವಿಧಾನಸಭೆಯ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೆಲ ನಿಮಿಷಗಳಲ್ಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ತಡರಾತ್ರಿಯೇ ಧಾವಿಸಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ವಿಧಾನಸಭೆಯ ಮೂರನೇ ಮಹಡಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ನಂದಿಸಲು ಸತತ ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ಸದ್ಯ ಘಟನೆಯಲ್ಲಿ ಯಾವುದೇ ರೀತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಜಾರ್ಖಂಡ್ ವಿಧಾನಸಭಾ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ರಾಂಚಿಯ ಕುಟೆ ಎಂಬ ಪ್ರದೇಶದಲ್ಲಿ ನಿರ್ಮಿಸಿದ ವಿಧಾನಸಭೆಯ ನೂತನ ಕಟ್ಟಡವನ್ನು ಸೆಪ್ಟೆಂಬರ್.12ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.