ಝಾರ್ಖಂಡ್; ಒಂದೇ ದಿನದ ಅಂತರದಲ್ಲಿ 4 ಯೋಧರ ಹತ್ಯೆ!
ರಾಂಚಿ, ಡಿಸೆಂಬರ್ 10: ಪಾನಮತ್ತ ಯೋಧನೊಬ್ಬ ತನ್ನ ಇಬ್ಬರು ಮೇಲಾಧಿಕಾರಿಗಳಿಗೆ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಸೋಮವಾರ ರಾತ್ರಿ ಝಾರ್ಖಂಡ್ ನ ಬುಕಾರು ಎಂಬಲ್ಲಿ ನಡೆದಿದೆ.
ಕಾನ್ಸಟೆಬಲ್ ದೀಪೇಂದ್ರ ಯಾದವ್ ಎಂಬುವವನು ಈ ಕೃತ್ಯ ಎಸಗಿದ್ದು, ಸಿಆರ್ ಪಿಎಫ್ ನ 226 ನೇ ಬೆಟಾಲಿಯನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಸಿಸ್ಟಂಟ್ ಕಮಾಂಡೆಂಟ್ ಎಸ್ ಹಸನ್ ಹಾಗೂ ಅಸಿಸ್ಟಂಟ್ ಸಬ್ ಇನ್ಸಪೆಕ್ಟರ್ ಪಿ.ಭುನಿಯಾ ಮೃತಪಟ್ಟ ಅಧಿಕಾರಿಗಳಾಗಿದ್ದಾರೆ. ಇನ್ನೊಬ್ಬ ಕಾನ್ಸಟೆಬಲ್ ಹರಿಶ್ಚಂದ್ರ ಗಂಬೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಝಾರ್ಖಂಡನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ರಾಂಚಿಯಿಂದ 100 ಕಿಮೀ ದೂರದಲ್ಲಿರುವ ಗೊಮೀಯಾ ಜಿಲ್ಲೆಯ ಬರ್ಮೊ ವಿಧಾನಸಭೆ ಕ್ಷೇತ್ರದ ಚುನಾವಣೆಯ ಭದ್ರತಾ ಕಾರ್ಯಕ್ಕೆ ಕಾನ್ಸಟೆಬಲ್ ದೀಪೇಂದ್ರ ಯಾದವನನ್ನು ನಿಯೋಜಿಸಲಾಗಿತ್ತು. ಸೋಮವಾರ ರಾತ್ರಿ ದೀಪೇಂದ್ರ ಯಾದವ ಪಾನಮತ್ತನಾಗಿ ತನ್ನ ಮೇಲಾಧಿಕಾರಿಗಳ ಜೊತೆ ಜಗಳವಾಡಿ, ಗುಂಡಿಟ್ಟು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ. ಸದ್ಯ ಯಾದವನನ್ನು ಬಂಧಿಸಲಾಗಿದೆ.
ಝಾರ್ಖಂಡ್ ನಲ್ಲಿ ಇದು 24 ಗಂಟೆಯ ಒಳಗೆ ನಡೆದಿರುವ ಎರಡನೇ ಘಟನೆಯಾಗಿದ್ದು, ಭಾನುವಾರ ರಾತ್ರಿ ರಾಂಚಿಯಲ್ಲಿ ಝಾರ್ಖಂಡ್ ಸಶಸ್ತ್ರ ದಳದ ಕಾನ್ಸಟೆಬಲ್ ಒಬ್ಬ ತನ್ನ ಮೇಲಾಧಿಕಾರಿಯನ್ನು ಹತ್ಯೆ ಮಾಡಿ, ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.