ಕುರ್ ಆನ್ ವಿತರಿಸಲು ಕೋರ್ಟ್ ನಿಂದ ಷರತ್ತುಬದ್ಧ ಜಾಮೀನು; ಒಪ್ಪದ ವಿದ್ಯಾರ್ಥಿನಿ
ಜಾರ್ಖಂಡ್ ನ ರಾಜಧಾನಿ ರಾಂಚಿಯಲ್ಲಿ ಹಿಂದೂ ವಿದ್ಯಾರ್ಥಿನಿಯೊಬ್ಬಳು ಒಂದು ಕೋಮಿನ ವಿಚಾರಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಆಕೆಯನ್ನು ಬಂಧಿಸಲಾಗಿತ್ತು. ಇದೀಗ ಕೋರ್ಟ್ ಆಕೆಗೆ ಷರತ್ತುಬದ್ಧ ಜಾಮೀನು ನೀಡಿದೆ. ಆ ಷರತ್ತು ಏನಪ್ಪಾ ಅಂದರೆ, ಕುರ್ ಆನ್ ನ ಐದು ಪ್ರತಿಯನ್ನು ವಿವಿಧ ಸಂಸ್ಥೆಗಳಿಗೆ ವಿತರಿಸಬೇಕು.
ಈ ರೀತಿ ಕೋರ್ಟ್ ನ ಸೂಚನೆ ಪಡೆದ ವಿದ್ಯಾರ್ಥಿನಿಯ ಹೆಸರು ರೀಚಾ ಭಾರ್ತಿ. "ಏಕೆ ಒಂದೇ ಧರ್ಮದ ಜನರು ಭಯೋತ್ಪಾದಕರಾಗಲು ಯೋಚಿಸುತ್ತಾರೆ, ಅದು ಕೂಡ ದ್ವೇಷ ತೀರಿಸಿಕೊಳ್ಳುವ ಸಲುವಾಗಿ" ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಳು. ಆಕೆಯ ಆ ಪೋಸ್ಟ್ ಆಕ್ಷೇಪಾರ್ಹ ಹಾಗೂ ಕೋಮಿನ ವಿಚಾರಕ್ಕೆ ಸಂಬಂಧಿಸಿದ್ದು ಎಂದು ಬಂಧಿಸಲಾಗಿತ್ತು.
ಫೇಸ್ ಬುಕ್ ನಲ್ಲಿ ಪರಿಚಯಿಕೊಂಡ ಮಹಿಳೆಯು ವಂಚಿಸಿದ ಮೊತ್ತ ಎರಡು ಕೋಟಿ
ರೀಚಾಗೆ ಜಾಮೀನು ನೀಡಿದ ನ್ಯಾಯಾಧೀಶರು, ಸದರ್ ಅಂಜುಮನ್ ಇಸ್ಲಾಮಿಯಾ ಸಮಿತಿಗೆ ಕುರ್ ಆನ್ ನ ಒಂದು ಪ್ರತಿ ಹಾಗೂ ಶಾಲೆ, ಕಾಲೇಜು ಹಾಗೂ ಗ್ರಂಥಾಲಯದಂಥ ಸಂಸ್ಥೆಗಳಿಗೆ ನಾಲ್ಕು ಪ್ರತಿಗಳನ್ನು ಹಂಚಬೇಕು ಎಂದು ಸೂಚಿಸಿದ್ದರು.
ರೀಚಾ ಪರ ವಕೀಲ ರಾಮ್ ಪರ್ವೇಶ್ ಸಿಂಗ್ ಮಾತನಾಡಿ, ಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಆಡಳಿತದ ಸಮ್ಮುಖದಲ್ಲಿ ಅಂಜುಮನ್ ಇಸ್ಲಾಮಿಯಾಗೆ ಕುರ್ ಆನ್ ನ ಒಂದು ಪ್ರತಿ ಕೊಟ್ಟು, ರಶೀದಿ ಪಡೆಯಲಾಗುವುದು. ಆ ನಂತರ ನಾಲ್ಕು ಪ್ರತಿಯನ್ನು ಸ್ಥಳೀಯ ಪೊಲೀಸ್ ಠಾಣೆ ಮೂಲಕ ಲೈಬ್ರರಿಗಳಿಗೆ ವಿತರಿಸಿ, ರಶೀದಿ ಪಡೆಯುತ್ತೇವೆ. ಇನ್ನು ಹದಿನೈದು ದಿನದೊಳಗೆ ಆ ರಶೀದಿಯನ್ನು ಕೋರ್ಟ್ ಗೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.
ಆದರೆ, ಈ ತೀರ್ಪು ಬಂದ ನಂತರ ಸುದ್ದಿ ವಾಹಿನಿ ಜತೆಗೆ ಮಾತನಾಡಿದ ರೀಚಾ, ಕೋರ್ಟ್ ತೀರ್ಪಿನಂತೆ ನಡೆದುಕೊಳ್ಳುವ ಯಾವ ಉದ್ದೇಶವೂ ನನಗಿಲ್ಲ. ಹಲವು ಮುಸ್ಲಿಮರು ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹಾಕುತ್ತಾರೆ. ಆದರೆ ಅವರ ವಿರುದ್ಧ ಯಾವ ಕ್ರಮವೂ ಕೈಗೊಳ್ಳುವುದಿಲ್ಲ ಎಂದು ಆಕೆ ಹೇಳಿದ್ದಾಳೆ.
ಇನ್ನೂ ಮುಂದುವರಿದು, "ಟಿಕ್ ಟಾಕ್ ನಲ್ಲಿ ಫೈಜು ಎನ್ನುವ ವ್ಯಕ್ತಿ ಇದ್ದಾನೆ. ಆತ ಹೇಳುತ್ತಾನೆ: ತಬ್ರೇಜ್ ಅನ್ಸಾರಿಯ (ಕಳ್ಳತನದ ಗುಮಾನಿ ಮೇಲೆ ಜಾರ್ಖಂಡ್ ನಲ್ಲಿ ಈಚೆಗೆ ಗುಂಪು ಹಲ್ಲೆಯಲ್ಲಿ ತೀರಿಕೊಂಡ ವ್ಯಕ್ತಿ) ಮಕ್ಕಳು ಬೆಳೆದು ಭಯೋತ್ಪಾದಕರಾಗಿ ಸೇಡು ತೀರಿಸಿಕೊಳ್ಳಬಹುದು. ಆದ್ದರಿಂದ ನಾನು ಪ್ರಶ್ನಿಸುತ್ತೇನೆ: ದ್ವೇಷ ತೀರಿಸಿಕೊಳ್ಳುವ ಆಲೋಚನೆ ಮುಸ್ಲಿಮರಿಗೆ ಮಾತ್ರ ಏಕೆ? ಕಾಶ್ಮೀರದಿಂದ ನಶಿಸಿಹೋದ ಕಾಶ್ಮೀರಿ ಪಂಡಿತರು ಹಾಗೂ ಹಿಂದೂಗಳು ಏಕೆ ಉಗ್ರಗಾಮಿಗಳಾಗಲು ಯೋಚಿಸಲ್ಲ?" ಎಂದು ಆಕೆ ಪ್ರಶ್ನಿಸಿದ್ದಾಳೆ.
ಆಕೆ ಹೇಳುವಂತೆ, ಫೇಸ್ ಬುಕ್ ಪೋಸ್ಟ್ ನಲ್ಲಿ ಇದೇ ಇತ್ತು. ಈ ವೇಳೆ ಕೋರ್ಟ್ ನೀಡಿದ ಷರತ್ತುಬದ್ಧ ಜಾಮೀನಿನ ಬಗ್ಗೆ ಖಾಸಗಿ ಸುದ್ದಿ ವಾಹಿನಿಯ ವರದಿಗಾರ ಪ್ರಶ್ನಿಸಿದರೆ, ಇಲ್ಲ, ನಾನು ಅದನ್ನು ಮಾಡಲು ಬಯಸುವುದಿಲ್ಲ. ಇವತ್ತು ನನ್ನಿಂದ ಕುರ್ ಆನ್ ವಿತರಣೆ ಮಾಡಿಸಿ, ನಾಳೆ ಇಸ್ಲಾಮ್ ಸ್ವೀಕರಿಸುವುದಕ್ಕೆ ಹಾಗೂ ನಮಾಜ್ ಮಾಡುವುದಕ್ಕೆ ಹೇಳಬಹುದು. ಹಿಂದೂ ಧರ್ಮದ ವಿರುದ್ಧ ಮಾತನಾಡಿದ ಮುಸ್ಲಿಂಗೆ ರಾಮಾಯಣ ಓದಲು ಅಥವಾ ದುರ್ಗಾ ಮಂತ್ರ ಪಠಿಸಲು ಹೇಳಿದ್ದಾರಾ? ಎಂದು ಪ್ರಶ್ನಿಸಿದ್ದಾಳೆ.
ಕೋರ್ಟ್ ನ ತೀರ್ಪಿನ ಬಗ್ಗೆ ಟ್ವಿಟ್ಟರ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಆಷಾಢಭೂತಿತನ ಎಂದು ಟೀಕಿಸಲಾಗುತ್ತಿದೆ.