ಸಾವಿನ ಮನೆ: 14 ದಿನದಲ್ಲಿ ಕೊವಿಡ್-19ಗೆ ಒಂದೇ ಕುಟುಂಬದ ಐವರು ಬಲಿ!
ರಾಂಚಿ, ಜುಲೈ.22: ಕೊರೊನಾವೈರಸ್ ಸೋಂಕಿನ ಅಟ್ಟಹಾಸಕ್ಕೆ ಇಡೀ ಕುಟುಂಬವೇ ಸ್ಮಶಾನವಾಗಿದೆ. 89 ವರ್ಷದ ವೃದ್ಧೆ ಹಾಗೂ ಆಕೆಯ ನಾಲ್ವರೂ ಮಕ್ಕಳು ಸಾಲು ಸಾಲಾಗಿ 14 ದಿನಗಳಲ್ಲೇ ಸಾವಿನ ಮನೆ ಸೇರಿದಂತಾ ಘಟನೆಗೆ ಜಾರ್ಖಂಡ್ ನ ಧನಬಾದ್ ಸಾಕ್ಷಿಯಾಗಿದೆ.
ಕಳೆದ 14 ದಿನಗಳಲ್ಲೇ 89 ವರ್ಷದ ವೃದ್ಧೆ ಹಾಗೂ ನಾಲ್ವರು ಮಕ್ಕಳು ಕೊವಿಡ್-19 ಸೋಂಕಿಗೆ ಬಲಿಯಾಗಿದ್ದರೆ, ಮತ್ತೊಬ್ಬ ಮಗ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾನೆ. ಏಳು ಮಕ್ಕಳ ಪೈಕಿ ನವದೆಹಲಿಯಲ್ಲಿ ವಾಸವಿರುವ ಒಬ್ಬ ಮಗ ಮತ್ತು ಕೋಲ್ಕತ್ತಾದಲ್ಲಿ ವಾಸವಿರುವ ಮಗಳು ಮಾತ್ರ ಜೀವಂತವಾಗಿ ಉಳಿದಿದ್ದಾರೆ.
ಭಾರತದಲ್ಲಿ ಸಮುದಾಯಕ್ಕೆ ಹರಡಿದ ಕೊರೊನಾವೈರಸ್ ನಿಂದ ಗಂಡಾಂತರ!
ಅಸಲಿಗೆ 89 ವರ್ಷದ ತಾಯಿಯ ಜೊತೆಗೆ ಎಲ್ಲ ಮಕ್ಕಳು ವಾಸವಿರಲಿಲ್ಲ. ದೇಶದ ಹಲವೆಡೆಗಳಲ್ಲಿ ಜೀವನ ಕಟ್ಟಿಕೊಂಡಿದ್ದ ಮಕ್ಕಳು ಕೊರೊನಾವೈರಸ್ ಸೋಂಕಿನಿಂದಾಗಿ ತವರಿಗೆ ವಾಪಸ್ ಆಗಿದ್ದರು. ಹೀಗೆ ಒಂದುಗೂಡಿದ ತುಂಬು ಕುಟುಂಬಕ್ಕೆ ಕುಟುಂಬವೇ ಇದೀಗ ಸಾವಿನ ಮನೆ ಸೇರಿದಂತೆ ಆಗಿದೆ ಎಂದು ಹತ್ತಿದ ಸಂಬಂಧಿಕರು ಹೇಳಿದ್ದಾರೆ.
ಮದುವೆಗಾಗಿ ಬಂದ ವೃದ್ಧೆಯು ಸೇರಿದ್ದು ಸಾವಿನ ಮನೆ
ಕಳೆದ ಒಂದು ವರ್ಷದ ಹಿಂದೆಯಷ್ಟೇ ಕುಟುಂಬ ಸಮೇತರಾಗಿ ಮಹಿಳೆಯು ದೆಹಲಿಗೆ ಸ್ಥಳಾಂತರಗೊಂಡಿದ್ದರು. ಜೂನ್.27ರಂದು ಮದುವೆ ಹಿನ್ನೆಲೆ ವಾಪಸ್ ಧನಬಾದ್ ಗೆ ಆಗಮಿಸಿದ ವೃದ್ಧೆಯು ಮದುವೆಗೂ ಮೊದಲೇ ಅನಾರೋಗ್ಯಕ್ಕೆ ತುತ್ತಾದರು. ಬೊಕಾರೋ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಾದ ವೃದ್ಧೆಯು ಜುಲೈ.04ರಂದು ಮೃತಪಟ್ಟಿದ್ದರು. ಹಿಂದೂ ಸಂಪ್ರದಾಯದ ಪ್ರಕಾರ ವೃದ್ಧೆಯ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.
ತಾಯಿಯಿಂದ ಮಗನಿಗೂ ಅಂಟಿತ್ತು ಕೊರೊನಾವೈರಸ್
ಜುಲೈ.04ರಂದು 89 ವರ್ಷದ ವೃದ್ಧೆಯ ಅಂತ್ಯಕ್ರಿಯೆ ನೆರವೇರಿಸಿದ ನಾಲ್ಕು ದಿನಗಳಲ್ಲೇ 69 ವರ್ಷದ ಮಗನಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ಖಾತ್ರಿಯಾಯಿತು. ಧನಬಾದ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಸೋಂಕಿತನನ್ನು ದಾಖಲಿಸಲಾಯಿತಾದರೂ ಏಳು ದಿನಗಳಲ್ಲೇ ವ್ಯಕ್ತಿಯು ಮೃತಪಟ್ಟರು. ಇದಾಗಿ ಕೆಲವು ಗಂಟೆಗಳಲ್ಲೇ ಅಂದರೆ ಜುಲೈ.11ರಂದು ಮೃತ ವ್ಯಕ್ತಿಯ ಸಹೋದರನಲ್ಲಿ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಆತನನ್ನು ಕ್ವಾರೆಂಟೈನ್ ಕೇಂದ್ರದಿಂದ ಧನಬಾದ್ ನಲ್ಲಿರುವ ಪಾಟಲೀಪುತ್ರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಇದಾಗಿ ಮರುದಿನವೇ ಜುಲೈ.12ರಂದು ಮೃತಪಟ್ಟಿದ್ದು, ವ್ಯಕ್ತಿಯಲ್ಲಿ ಕೊವಿಡ್-19 ಸೋಂಕು ಇರುವುದು ಪತ್ತೆಯಾಗಿತ್ತು.
ಒಂದೇ ದಿನ ಇಬ್ಬರು ಮಕ್ಕಳು ಕೊವಿಡ್-19ಗೆ ಬಲಿ
ಕಳೆದ ಜುಲೈ.12ರಂದೇ ಕೊರೊನಾವೈರಸ್ ಸೋಂಕಿಗೆ 72 ವರ್ಷದ ವ್ಯಕ್ತಿಯು ಸಿಲುಕಿ ಪ್ರಾಣ ಬಿಟ್ಟಿದ್ದರು. ಅಲ್ಲಿಗೆ ಒಂದೇ ದಿನ ಮಹಾಮಾರಿಗೆ ಒಂದೇ ಕುಟುಂಬದ ಇಬ್ಬರು ಉಸಿರು ನಿಲ್ಲಿಸಿದ್ದರು. ಜುಲೈ.13ರಂದು ಕೊರೊನಾವೈರಸ್ ಮಾರ್ಗಸೂಚಿ ಅನ್ವಯ ಜಿಲ್ಲಾಡಳಿತವೇ ಮೃತರ ಅಂತ್ಯ ಸಂಸ್ಕಾರವನ್ನು ನೆರೆವೇರಿಸಿತು. ಜುಲೈ.19ರಂದು ವೃದ್ಧೆಯ 60 ವರ್ಷದ ಮತ್ತೊಬ್ಬ ಮಗನು ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು. ಸಾವಿನ ನಂತರದಲ್ಲಿ ನಡೆಸಿದ ಕೊರೊನಾವೈರಸ್ ಸೋಂಕಿತ ತಪಾಸಣೆಯಲ್ಲಿ ಸೋಂಕು ತಗಲಿಲ್ಲ ಎನ್ನುವುದು ಸ್ಪಷ್ಟವಾಗಿತ್ತು.
ಆಸ್ಪತ್ರೆಯಲ್ಲೇ ಪ್ರಾಣ ಬಿಟ್ಟ ವೃದ್ಧೆಯ ಐದನೇ ಮಗ
ಕಡೆಯದಾಗಿ ಕಳೆದ ಜುಲೈ.20ರ ಸೋಮವಾರ ವೃದ್ಧೆಯ 71 ವರ್ಷದ ಹಿರಿಯ ಪುತ್ರ ರಾಂಚಿಯ ರಾಜೇಂದ್ರ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯು ಕೂಡಾ ಪ್ರಾಣ ಬಿಟ್ಟಿದ್ದರು. ಆಸ್ಪತ್ರೆಯಲ್ಲಿ ಶೌಚಾಲಯಕ್ಕೆ ತೆರಳಿದ್ದ ವ್ಯಕ್ತಿಯು ಅಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದು ಬೆಳಕಿಗೆ ಬಂದಿತ್ತು. ಹೀಗೆ ಒಂದು ಕುಟುಂಬ 89 ವೃದ್ಧೆ ಹಾಗೂ ಐವರು ಮಕ್ಕಳು ಕೇವಲ 14 ದಿನಗಳಲ್ಲೇ ಸಾಲು ಸಾಲಾಗಿ ಸಾವಿನ ಮನೆ ಸೇರಿದ್ದು, ಈ ಪೈಕಿ ನಾಲ್ವರು ಮಕ್ಕಳು ಕೊರೊನಾವೈರಸ್ ನಿಂದಲೇ ಮೃತಪಟ್ಟಿರುವುದು ಆಘಾತಕಾರಿ ಅಂಶವಾಗಿದೆ.