ಒಂದೇ ವರ್ಷದಲ್ಲಿ ಐದನೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ
ರಾಂಚಿ, ಡಿಸೆಂಬರ್ 23: ಜಾರ್ಖಂಡ್ ರಾಜ್ಯ ರಚನೆಯಾಗಿ 19 ವರ್ಷಗಳಲ್ಲಿ (2000) ಆರು ಮುಖ್ಯಮಂತ್ರಿಗಳನ್ನು ಕಂಡಿದೆ. ಈ ಅವಧಿಯಲ್ಲಿ ಜಾರ್ಖಂಡ್ ಎದುರಿಸಿರುವ ನಾಲ್ಕನೆಯ ವಿಧಾನಸಭೆ ಚುನಾವಣೆ ಇದು. ಬಿಹಾರದಿಂದ ಪ್ರತ್ಯೇಕಗೊಂಡು 19 ವರ್ಷಗಳಲ್ಲಿ ಇದುವರೆಗೂ ಆರು ಮುಖ್ಯಮಂತ್ರಿಗಳನ್ನು ಈ 'ಪೊದೆಗಳ ಭೂಮಿ' (ಜಾರ್ಖಂಡ್- ಪೊದೆ ಅಥವಾ ಅರಣ್ಯದ ಪ್ರದೇಶ) ಕಂಡಿದೆ.
2014ರ ಡಿ. 28ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿಜೆಪಿಯ ರಘುಬರ್ ದಾಸ್, ಈ ರಾಜ್ಯದಲ್ಲಿ ಐದು ವರ್ಷದ ಪೂರ್ಣಾವಧಿ ಅಧಿಕಾರವನ್ನು ನಡೆಸಿದ ಮೊದಲ ಹಾಗೂ ಏಕೈಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಆದರೆ ಜಾರ್ಖಂಡ್ನ ಪುಟ್ಟ ರಾಜಕೀಯ ಇತಿಹಾಸದಲ್ಲಿ ಒಮ್ಮೆಯೂ ಸತತ ಎರಡು ಬಾರಿ ಮುಖ್ಯಮಂತ್ರಿಯಾದ ಉದಾಹರಣೆಯಿಲ್ಲ. ಆ ಖ್ಯಾತಿಯನ್ನೂ ತಮ್ಮ ಹೆಸರಿಗೆ ಬರೆದುಕೊಳ್ಳುವ ಅವಕಾಶವನ್ನು ರಘುಬರ್ ದಾದ್ ಕಳೆದುಕೊಂಡಿದ್ದಾರೆ.
ಬುಡಕಟ್ಟು ಸಮುದಾಯದ ಆಶಾಕಿರಣ ಹೇಮಂತ್ ಸೊರೆನ್ ವ್ಯಕ್ತಿಚಿತ್ರ
ದಕ್ಷಿಣ ಬಿಹಾರವನ್ನು ಸ್ವತಂತ್ರ ರಾಜ್ಯವಾಗಿ ನಿರ್ಮಾಣವಾದಾಗ ಬಿಜೆಪಿಯ ಬಾಬುಲ್ ಮರಾಂಡಿ ಮೊದಲ ಮುಖ್ಯಮಂತ್ರಿಯಾಗಿ ಆಂತರಿಕ ವಿಧಾನಸಭೆಯಲ್ಲಿ ಅಧಿಕಾರ ಸ್ವೀಕರಿಸಿದ್ದರೂ 2003ರ ಮಾರ್ಚ್ ತಿಂಗಳಲ್ಲಿ ಮಾತ್ರ ಆಡಳಿತ ನಡೆಸಿದರು. ಅವರ ನಂತರ ಅರ್ಜುನ್ ಮುಂಡಾ ಸುಮಾರು ಎರಡು ವರ್ಷ ಅಧಿಕಾರದಲ್ಲಿದ್ದರು. 2005ರಲ್ಲಿ ಮೊದಲ ಚುನಾವಣೆ ನಡೆಯಿತು.
ಬಹುಮತ ಸಾಬೀತಿಗೆ ಸೊರೆನ್ ವಿಫಲ
2005ರ ಚುನಾವಣೆಯಲ್ಲಿ ಬಿಜೆಪಿ 30 ಸೀಟುಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಶಿಬು ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 17 ಸೀಟುಗಳನ್ನು ಗೆದ್ದಿತು. ಕಾಂಗ್ರೆಸ್ ಒಂಬತ್ತು ಸೀಟುಗಳನ್ನು ಗೆದ್ದಿತ್ತು. ಉಳಿದ ಸೀಟುಗಳು ಆರ್ಜೆಡಿ ಮತ್ತು ಜೆಡಿಯು ನಡುವೆ ಹಂಚಿಹೋಗಿದ್ದವು.
ಜೆಎಂಎಂನ ಶಿಬು ಸೊರೆನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ 10 ದಿನಗಳಲ್ಲಿಯೇ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಹೊರನಡೆಯುವಂತಾಯಿತು. ಬಳಿಕ ಬಿಜೆಪಿಯ ಅರ್ಜುನ್ ಮುಂಡಾ ಎರಡನೆಯ ಬಾರಿ ಸಿಎಂ ಆಗಿ 2006ರ ಸೆ.6ರವರೆಗೆ ಅಧಿಕಾರದಲ್ಲಿದ್ದರು.
ಮುಖ್ಯಮಂತ್ರಿ-ರಾಷ್ಟ್ರಪತಿ ಆಡಳಿತ
ನಂತರ 2008ರ ಆಗಸ್ಟ್ವರೆಗೂ ಪಕ್ಷೇತರ ಅಭ್ಯರ್ಥಿ ಮಧು ಕೋಡಾ ಮುಖ್ಯಮಂತ್ರಿಯಾಗಿದ್ದರು. 2008-2010ರ ಅವಧಿಯಲ್ಲಿ ಶಿಬು ಸೊರೆನ್ ಎರಡು ಬಾರಿ ಸಿಎಂ ಆಗಿದ್ದರು. ಅದರ ನಡುವೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. ಮಧು ಕೋಡಾ ರಾಜೀನಾಮೆಯ ನಂತರ 2009ರ ಜನವರಿವರೆಗೆ ಸೊರೆನ್ ಮುಖ್ಯಮಂತ್ರಿಯಾಗಿದ್ದರು. ನಂತರ 11 ತಿಂಗಳು ರಾಷ್ಟ್ರಪತಿ ಆಳ್ವಿಕೆಯಿತ್ತು. 2009ರ ಡಿಸೆಂಬರ್ನಲ್ಲಿ ಎರಡನೆಯ ವಿಧಾನಸಭೆ ಚುನಾವಣೆ ನಡೆಯಿತು. ಆಗ ಬಿಜೆಪಿ ಮತ್ತು ಜೆಎಂಎಂ ತಲಾ 18 ಸೀಟುಗಳನ್ನು ಗೆದ್ದಿದ್ದವು.
ಮತ್ತೆ ಮುಖ್ಯಮಂತ್ರಿಯಾಗಿದ್ದ ಸೊರೆನ್, ಐದು ತಿಂಗಳು ಆಡಳಿತ ನಡೆಸಿದ್ದರು. 2010ರ ಜೂನ್-ಸೆಪ್ಟೆಂಬರ್ನ ಮೂರು ತಿಂಗಳ ಅವಧಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. 2013ರ ಜನವರಿವರೆಗೂ ಅರ್ಜುನ್ ಮುಂಡಾ ಪುನಃ ಆಡಳಿತ ನಿಭಾಯಿಸಿದರು. ಇದಾಗಿ ಐದು ತಿಂಗಳವರೆಗೆ ಮತ್ತೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು. 2013ರ ಜುಲೈನಲ್ಲಿ ರಾಷ್ಟ್ರಪತಿ ಆಡಳಿತ ವಾಪಸ್ ತೆಗೆದುಕೊಳ್ಳಲಾಯಿತು. 2014ರ ಚುನಾವಣೆಯವರೆಗೂ ಶಿಬು ಸೊರೆನ್ ಮಗ ಹೇಮಂತ್ ಸೊರೆನ್ ಮುಖ್ಯಮಂತ್ರಿಯಾಗಿದ್ದರು.
ಜಾರ್ಖಂಡ್ ಫಲಿತಾಂಶ: ಬಿಜೆಪಿ ಮಿತ್ರಪಕ್ಷಗಳಿಂದ ಶೂನ್ಯ ಸಂಪಾದನೆ
ನಾಲ್ವರು ಮುಖ್ಯಮಂತ್ರಿಗಳಿಗೆ ಸೋಲು
2014ರ ಚುನಾವಣೆಯಲ್ಲಿ ಬಿಜೆಪಿ 37 ಸೀಟುಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ರಘುಬರ್ ದಾಸ್ ಮುಖ್ಯಮಂತ್ರಿಯಾದರು. ಜೆಎಂಎಂ 19 ಸೀಟುಗಳಲ್ಲಿ ಗೆದ್ದರೆ, ಬಾಬುಲಾಲ್ ಮರಾಂಡಿಯ ಜೆವಿಎಂ ಎಂಟು ಕಡೆ ಜಯಗಳಿಸಿತು. ಕಾಂಗ್ರೆಸ್ ಆರು ಸ್ಥಾನಗಳನ್ನು ಗೆದ್ದಿತು.
2014ರ ಚುನಾವಣೆಯಲ್ಲಿ ಬಾಬುಲಾಲ್ ಮರಾಂಡಿ, ಕೇಂದ್ರ ಸಚಿವ ಅರ್ಜುನ್ ಮುಂಡಾ, ಮಧು ಕೋಡಾ ಮತ್ತು ಹೇಮಂತ್ ಸೊರೆನ್- ಹೀಗೆ ನಾಲ್ವರೂ ಮಾಜಿ ಮುಖ್ಯಮಂತ್ರಿಗಳು ಚುನಾವಣೆಯಲ್ಲಿ ಸೋಲು ಅನುಭವಿಸಿದ ಅಪರೂಪದ ನಿದರ್ಶನ ಇದಾಗಿತ್ತು.
ಅಧಿಕಾರ ಕಳೆದುಕೊಂಡ ಐದನೇ ರಾಜ್ಯ
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರ ಸತತ ಪ್ರಚಾರದ ನಡುವೆಯೂ ಬಿಜೆಪಿ ಜಾರ್ಖಂಡ್ನಲ್ಲಿ ಅಧಿಕಾರ ಕಳೆದುಕೊಂಡಿದೆ. ಕಳೆದ 12 ತಿಂಗಳಲ್ಲಿ ಮಹಾರಾಷ್ಟ್ರ, ಛತ್ತೀಸಗಡ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ, ಹರಿಯಾಣದಲ್ಲಿ ದುಷ್ಯಂತ್ ಚೌಟಾಲಾ ಮತ್ತು ಪಕ್ಷೇತರರ ನೆರವಿನಿಂದ ಅಧಿಕಾರ ಉಳಿಸಿಕೊಂಡಿತ್ತು.