ಆದಿವಾಸಿ ಬಾಲಕಿ ಮೇಲೆ ಹಲ್ಲೆ; ಕ್ರಮ ಕೈಗೊಳ್ಳಲು ಜಾರ್ಖಂಡ್ ಸಿಎಂ ಸೂಚನೆ
ರಾಂಚಿ, ಮೇ 23: ಜಾರ್ಖಂಡ್ನ ದುಮ್ಕಾ ಜಿಲ್ಲೆಯಲ್ಲಿ ಆದಿವಾಸಿ ಅಪ್ರಾಪ್ತ ಬಾಲಕಿಗೆ ಮನಬಂದಂತೆ ಕಾಲಿನಲ್ಲಿ ಒದೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಪಾಕುಡ್ ಮತ್ತು ದುಮ್ಕಾ ಜಿಲ್ಲೆಯ ಗಡಿ ಭಾಗದಲ್ಲಿ ನಡೆದಿದೆ. ಈ ಘಟೆನ ಕುರಿತಂತೆ ಮಾಹಿತಿ ತಿಳಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಹಲ್ಲೆ ಮಾಡಿರುವ ಬಾಲಕನ ವಿರುದ್ಧ ಕಠಿಣ ಕ್ರಮ ಜರುಗಿಸಲು ಆದೇಶ ಹೊರಡಿಸಿದ್ದಾರೆ.
ಈ ವೈರಲ್ ವಿಡಿಯೋದಲ್ಲಿ ಆದಿವಾಸಿ ಜನಾಂಗಕ್ಕೆ ಸೇರಿದ ಶಾಲಾ ಬಾಲಕಿಯೊಬ್ಬಳಿಗೆ ಅಪ್ರಾಪ್ತ ಬಾಲಕನೊಬ್ಬ ಮನಬಂದಂತೆ ಥಳಿಸಿದ್ದಾನೆ. ಬಾಲಕಿ ಕೆಳಗೆ ಬಿದ್ದರೂ ಕಾಲಿನಲ್ಲಿ ಸತತವಾಗಿ ಒದೆಯುತ್ತಿರುವುದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿರುವ ಬಾಲಕಿ ಪಾಕುಡ್ ಜಿಲ್ಲೆಯ ಶಾಲೆಗೆ ಸೇರಿದವಳೆಂದು ತಿಳಿದುಬಂದಿದೆ. ಬಾಲಕಿ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ಅಪರಿಚಿತರೊಬ್ಬರು ವಿಡಿಯೋ ಮಾಡಿದ್ದರು.
ಮುಸಲ್ಮಾನ ಎಂಬ ಅನುಮಾನ, ಆಧಾರ್ ಕಾರ್ಡ್ ತೋರಿಸಲಿಲ್ಲವೆಂದು ಹೊಡೆದು ಕೊಂದೇಬಿಟ್ರು
|
ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಖಂಡಿಸಿ ಬಾಲಕನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದರು. ನಂತರ ಈ ವಿಡಿಯೋ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಹೇಮಂತ್ ಸೋರೆನ್ ಪಾಕುಡ್ ಜಿಲ್ಲೆಯ ಪೊಲೀಸರಿಗೆ ತಕ್ಷಣವೇ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಹೊರಡಿಸಿದ್ದಾರೆ. " ದಯವಿಟ್ಟು ಮೇಲ್ಕಂಡ ವಿಷಯದ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸಿದ ನಂತರ ಮಾಹಿತಿ ನೀಡಿ" ಎಂದು ಸೋರೆನ್ ಜಾರ್ಖಂಡ್ ಪೊಲೀಸ್, ಪಾಕುಡ್ ಜಿಲ್ಲಾ ಪೊಲೀಸ್ಗೆ ಭಾನುವಾರ ಸೂಚನೆ ನೀಡಿದ್ದಾರೆ.
|
ತಡ ಮಾಡದೇ ತನಿಖೆಗೆ ಸೂಚನೆ
ಈ ಅಮಾನುಷ ಘಟನೆ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಟ್ವೀಟ್ ಮಾಡಿದ ನಂತರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಪಾಕುಡ್ ಠಾಣೆ ಪೊಲೀಸರಿಗೆ ವಿಳಂಬ ಮಾಡದೇ ತನಿಖೆ ಆರಂಭಿಸಲು ಸೂಚನೆ ನೀಡಲಾಗಿದೆ ಎಂದು ಜಾರ್ಖಂಡ್ ಪೊಲೀಸ್ ಸಿಎಂ ಟ್ವೀಟ್ಗೆ ಉತ್ತರಿಸಿದ್ದಾರೆ. ಅಪ್ರಾಪ್ತೆಗೆ ಬಾಲಕನೊಬ್ಬ ಥಳಿಸುತ್ತಿರುವ ಘಟನೆ 15 ದಿನಗಳ ಹಿಂದೆ ನಡೆದಿದೆ. ಈ ಪ್ರಕರಣವು ದುಮ್ಕಾ ಜಿಲ್ಲೆಯ ಗೋಪಿಕಂದರ್ ಪೊಲೀಸ್ ಠಾಣಾ ವ್ಯಾಪ್ತಿಯ ಖರೌನಿ ಬಜಾರ್ಗೆ ಸಂಬಂಧಿಸಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ದುಮ್ಕಾ ಸಬ್ ಡಿವಿಜಿನಲ್ ಪೊಲೀಸ್ ಅಧಿಕಾರಿ ನೂರ್ ಮುಸ್ತಾಫ ತಿಳಿಸಿದ್ದಾರೆ.
|
ಒಂದೇ ಶಾಲೆಯ ವಿದ್ಯಾರ್ಥಿಗಳು
ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಗೆ ಹಲ್ಲೆ ಮಾಡಿರುವ ಬಾಲಕನನ್ನು ಬಂಧಿಸಲಾಗಿದೆ. ಗೋಪಿಕಂದರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ತನಿಖೆಯಲ್ಲಿ ಈ ಹಲ್ಲೆ ಮಾಡಿರುವ ಬಾಲಕ ಮತ್ತು ಹಲ್ಲೆಗೊಳಗಾದ ಬಾಲಕಿ ಇಬ್ಬರು ಒಂದೇ ಶಾಲೆಯ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ ಎಂದು ಮುಸ್ತಾಫ ತಿಳಿಸಿದ್ದಾರೆ.
ಲವ್ ವಿಚಾರಕ್ಕೆ ಜಗಳ
ದುಮ್ಕಾ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಕಾರ ಈ ಘಟನೆ ಮೇಲುನೋಟಕ್ಕೆ ಲವ್ ವಿಚಾರಕ್ಕಾಗಿ ನಡೆದಿರಬಹುದು ಅನುಮಾನವಿದೆ. ಬಾಲಕ ಮತ್ತು ಬಾಲಕಿ ಒಂದೇ ಆದಿವಾಸಿ ಸಮೂದಾಯಕ್ಕೆ ಸೇರಿದ್ದಾರೆ. ವಿಚಾರಣೆಗಾಗಿ ಅವರನ್ನು ಗೋಪಿಕಂದರ್ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಬಾಲಕ ಅಪ್ರಾಪ್ತನಾಗಿರುವುದರಿಂದ ರಿಮ್ಯಾಂಡ್ ಹೋಮ್ಗೆ ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿದೆ ಪೊಲೀಸರು ಮಾಹಿತಿ ನೀಡಿದ್ದಾರೆ.