ಕೊರೊನಾ ತಡೆಗಟ್ಟಲು ಗ್ರಾಮಕ್ಕೆ ಔಷಧಿ ಸಿಂಪಡಿಸಿದ ಯುವಕರು
ರಾಮನಗರ, ಮಾರ್ಚ್ 27: ಕೊರೊನಾ ವೈರಸ್ ಮಹಾಮಾರಿಯ ವಿರುದ್ಧ ಸಮರ ಸಾರಿರುವ ಸರ್ಕಾರ, ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಅಲ್ಲಲ್ಲಿ ನಿಯಮವನ್ನು ಬ್ರೇಕ್ ಮಾಡುತ್ತಿರುವ ಸುದ್ದಿಗಳ ನಡುವೆ ಸ್ವಯಂ ಪ್ರೇರಿತವಾಗಿ ಗ್ರಾಮದ ರಸ್ತೆಗಳಿಗೆ ಔಷಧಿ ಸಿಂಪಡಿಸಿ ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಯುವಕರ ಕಾರ್ಯ ಇತರರಿಗೆ ಮಾದರಿಯಾಗಿದೆ.
ರಾಮನಗರ ತಾಲ್ಲೂಕಿನ ಅಚ್ಚಲು ಗ್ರಾಮದ ಯುವಕರು ತಮ್ಮ ಗ್ರಾಮದ ಸುರಕ್ಷತೆ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಿ ಸ್ವಯಂ ಪ್ರೇರಣೆಯಿಂದ ಸರ್ಕಾರದ ಸಹಾಯಕ್ಕಾಗಿ ಕೈ ಕಟ್ಟಿ ಕುಳಿತುಕೊಳ್ಳದೇ ಯುವಕರ ತಂಡ ಸಂಪೂರ್ಣವಾಗಿ ಗ್ರಾಮಕ್ಕೆ ಔಷಧಿ ಸಿಂಪಡಿಸಿದ್ದಾರೆ.
ಕೊರೊನಾ ವೈರಸ್ ತಡೆಗಟ್ಟಲು ಗ್ರಾಮದ ರಸ್ತೆಗಳನ್ನು ಬಂದ್ ಮಾಡುವುದರಿಂದ ಪ್ರಯೋಜನವಿಲ್ಲ ಎಂಬುದನ್ನು ಮನಗಂಡ ಯುವಕರ ತಂಡ ಅಟೋದಲ್ಲಿ ದೊಡ್ಡ ಟ್ಯಾಂಕ್ ಇಟ್ಟು ಕ್ರಿಮಿನಾಶಕ ತುಂಬಿಕೊಂಡು ಯಂತ್ರದ ಸಹಾಯದಿಂದ ಗ್ರಾಮದ ತುಂಬೆಲ್ಲಾ ಔಷಧಿ ಸಿಂಪಡಿಸಿದ್ದಾರೆ. ಯುವಕರ ಕಾರ್ಯಕ್ಕೆ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ.
ಇನ್ನು ರಾಮನಗರ ಜಿಲ್ಲೆ ಕನಕಪುರ ಪಟ್ಟಣದಲ್ಲಿ ನಗರಸಭೆ ಹಾಗೂ ಲಯನ್ಸ್ ಸಂಸ್ಥೆಯ ಸಹಯೋಗದಲ್ಲಿ ಕೊರೊನಾ ಸೋಂಕು ತಡೆಯಲು ಸಾರ್ವಜನಿಕರಿಗೆ ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೊರೊನಾ ಸೋಂಕು ತಡೆಯಲು ವೈದ್ಯರಿಂದಲೂ ಸಾಧ್ಯವಾಗುತ್ತಿಲ್ಲ, ವಿಜ್ಞಾನಿಗಳಿಂದಲೂ ಆಗುತ್ತಿಲ್ಲ. ನಿಮಗೆ ಸೋಂಕು ಬಾರದಂತೆ ನೀವು ತಡೆಯಬಹುದು. ನಿಮಗೆ ನೀವೇ ವೈದ್ಯರಾಗಬೇಕು ಮನೆಯಿಂದ ಹೊರ ಬರಬೇಡಿ ಎಂದು ಕರೆ ನೀಡಿದರು. ನಗರಸಭೆಯಿಂದ ನಗರದ ಎಲ್ಲಾ ರಸ್ತೆಗಳಿಗೆ ಸೋಂಕು ತಡೆಯಲು ಔಷಧಿಯನ್ನು ಸಿಂಪಡಿಸಿದರು.