ಪಾಂಡಿಚೆರಿ ಟು ಮುಂಬೈ; ಸಂಸ್ಕೃತಿ ಅರಿಯಲು 70 ದಿನ, 1400 ಕಿ.ಮೀ ಕಾಲ್ನಡಿಗೆ!
ರಾಮನಗರ, ಫೆಬ್ರವರಿ 06: ನಮ್ಮ ದೇಶ ಹಲವು ವಿಭಿನ್ನ ಸಂಸ್ಕೃತಿಗಳ ನೆಲೆ. ಪ್ರತಿ ರಾಜ್ಯದಲ್ಲೂ ಭಾಷೆ, ಕಲೆ, ಪರಿಸರ ವಿಭಿನ್ನ. ವಿಭಿನ್ನತೆಯೇ ಈ ದೇಶವನ್ನು ಸುಂದರವಾಗಿಸಿದೆ ಕೂಡ. ಈ ಒಂದು ಸಂಸ್ಕೃತಿಯ ಸೌಂದರ್ಯವನ್ನು ಅರಿಯಲು ಇಬ್ಬರು ಪಯಣ ಬೆಳೆಸಿದ್ದಾರೆ. ಪಾಂಡಿಚೆರಿಯಿಂದ ಮುಂಬೈಗೆ ಕಾಲ್ನಡಿಗೆಯಲ್ಲಿ ಪಯಣ ಬೆಳೆಸಿದ್ದು, 1400 ಕಿ.ಮೀಗಳ ಪಾದಯಾತ್ರೆ ಹೊರಟಿದ್ದಾರೆ.
70 ದಿನಗಳ ಕಾಲ ಮೊಬೈಲ್ ಇಲ್ಲದೇ, ಹಣವೂ ಇಲ್ಲದೆ ಪಯಣ ಬೆಳೆಸುತ್ತಿರುವ ಇವರು ಉತ್ತರಾಖಂಡದ ಸಮಾಜ ಸೇವಕ ಅಂಕಿತ್ ದಾಸ್ ಹಾಗೂ ಮಹಾರಾಷ್ಟ್ರದ ಲೇಖಕಿ ನೈನಿಕ ಭಟ್ಯ. ಈಗಾಗಲೇ ನೈನಿಕ ಭಟ್ಯ ಹಾಗೂ ಅಂಕಿತದಾಸ್ 550 ಕಿ.ಮೀ. ಪಯಣ ಮುಗಿಸಿದ್ದು ತಮಿಳುನಾಡು, ಆಂಧ್ರ ಮುಗಿಸಿ ಕರ್ನಾಟಕಕ್ಕೆ ಬಂದಿದ್ದಾರೆ. ಬೆಂಗಳೂರಿನಿಂದ ಮಾಗಡಿಗೆ ಆಗಮಿಸಿ ಕುಣಿಗಲ್ ಮಾರ್ಗದ ಮೂಲಕ ಪಯಣ ಬೆಳೆಸುವಾಗ ಮಾತಿಗೆ ಸಿಕ್ಕಿದ್ದಾರೆ
ಹಣ, ಮೊಬೈಲ್ ಇಲ್ಲದೇ ಪಯಣ
1400 ಕಿಲೋ ಮೀಟರ್ ಪಯಣ ಕೈಗೊಂಡಿರುವ ಅಂಕಿತದಾಸ್ ಹಾಗೂ ನೈನಿಕ ಭಟ್ಯ ಬಳಿ ನಯಾಪೈಸೆ ಹಣವಿಲ್ಲ. ಮೊಬೈಲ್ ಸಹ ಇಲ್ಲ. ಯಾವುದೇ ಮ್ಯಾಪ್ ಇಲ್ಲ. 2 ಬ್ಯಾಗ್, ನೀರಿನ ಬಾಟಲಿ, ಕೆಲವು ಬಟ್ಟೆಗಳು, 2 ತಟ್ಟೆಯನ್ನು ಹಿಡಿದು ಪಯಣ ಆರಂಭಿಸಿದ್ದಾರೆ. ಪಯಣದ ದಾರಿಯಲ್ಲಿ ಯಾರು ಇವರಿಗೆ ಊಟ ಹಾಕುತ್ತಾರೋ ಅಲ್ಲೆ ಇವರಿಗೆ ಊಟ. ಕತ್ತಲಾದ ಮೇಲೆ ಯಾರು ಇವರಿಗೆ ಮಲಗಲು ಅವಕಾಶ ಕೊಡುತ್ತಾರೋ ಅಲ್ಲೇ ಇವರ ನಿದ್ದೆ. ಇಲ್ಲದಿದ್ದರೆ ದೇವಸ್ಥಾನ, ಶಾಲೆಗಳಲ್ಲಿ ಮಲಗಿ ನಂತರ ಪಯಣ ಆರಂಭಿಸುತ್ತಾರೆ.
ಸ್ವಾಮಿಯೇ ಶರಣಂ ಅಯ್ಯಪ್ಪ ಅಂದ ಕೊಲ್ಲೂರಿನ ನಾಯಿ!
ಕುಣಿಗಲ್ ಮೂಲಕ ಮುಂದುವರೆಯುವ ಪಯಣ
ಸದ್ಯಕ್ಕೆ ಇವರು ಪಯಣಿಸಿರುವ ಎಲ್ಲಾ ಕಡೆಯು ಜನರು ಅತಿಥಿಗಳಂತೆ ಇವರನ್ನು ಬರಮಾಡಿಕೊಂಡಿದ್ದಾರೆ. ಪ್ರತಿ ದಿನವು 3 ಹೊತ್ತು ಊಟ ಸಿಗುತ್ತಿದೆ. ಒಂದೊಂದು ದಿನ ಹೆಚ್ಚಿಗೆ ಊಟ ಸಿಕ್ಕಿದ್ದೂ ಇದೆ ಎಂದು ಹೇಳುತ್ತಾರೆ ಅಂಕಿತ್ ದಾಸ್. ತಮಿಳುನಾಡು ಮತ್ತು ಆಂಧ್ರದಲ್ಲಿ ಇವರ ಈ ಪಯಣಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ. ಈಗ ಕರ್ನಾಟಕದಿಂದ ಪಯಣ ಆರಂಭ ಮಾಡಿದ್ದು, ಬೆಂಗಳೂರಿನಿಂದ ಮಾಗಡಿಗೆ ಆಗಮಿಸಿ ಕುಣಿಗಲ್ ಮಾರ್ಗದ ಮೂಲಕ ಪಯಣ ಮುಂದುವರೆಸಿದ್ದಾರೆ. ಕರ್ನಾಟಕವನ್ನು, ಇಲ್ಲಿನ ಜನರ ಆತಿಥ್ಯವನ್ನು ಇಬ್ಬರೂ ಮೆಚ್ಚಿದ್ದಾರೆ. "ಎಲ್ಲ ಕಡೆಯೂ ನಮ್ಮನ್ನು ಪ್ರೀತಿಯಿಂದಲೇ ಕಾಣುತ್ತಿದ್ದಾರೆ" ಎಂದು ನೈನಿಕ ಭಟ್ಯ ಸಂತೋಷದಿಂದ ಹೇಳುತ್ತಾರೆ.
ಸ್ಥಳದ ಸಂಸ್ಕೃತಿ, ವಿಶೇಷತೆಗಳ ದಾಖಲೆ
ಮೊಬೈಲ್ ಮತ್ತು ಹಣವಿಲ್ಲದೆ ಪಯಣ ಬೆಳೆಸುತ್ತಿರುವ ಇವರು ಯಾವ ರಾಜ್ಯದಲ್ಲಿದ್ದೇವೆಂಬುದರ ಕುರಿತು ಅಂಕಿತ್ ದಾಸ್ ಗೆಳತಿಯೊಬ್ಬರಿಗೆ ಜನರ ಮೊಬೈಲ್ ಮೂಲಕ ಸಂಪರ್ಕಿಸಿ ತಿಳಿಸುತ್ತಾರೆ. ತಾವು ಹೋಗುವ ಸ್ಥಳ, ಅಲ್ಲಿನ ಸಂಸ್ಕೃತಿ, ವಿಶೇಷತೆಗಳನ್ನು ಡೈರಿಯಲ್ಲಿ ದಾಖಲಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಅಲ್ಲಿನ ಕಲೆ, ಸಂಸ್ಕೃತಿಗಳ ಬಗ್ಗೆ ಜನಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.
ಶಿವರಾತ್ರಿಯ ಜಾತ್ರೆ, ಬರಿಗಾಲಲ್ಲಿ ಮಹದೇಶ್ವರ ಬೆಟ್ಟ ಏರುವ ಭಕ್ತರು
ಇಂಗ್ಲಿಷ್, ಹಿಂದಿ ಇವರ ಭಾಷೆ
ಇವರಿಗೆ ಇಂಗ್ಲೀಷ್, ಹಿಂದಿ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. ಕರ್ನಾಟಕಕ್ಕೆ ಬಂದಿರುವ ನೈನಿಕ ಭಟ್ಯ ಸ್ವಲ್ಪ ಸ್ವಲ್ಪ ಕನ್ನಡವನ್ನು ಕಲಿತು ಜನಗಳ ಜೊತೆ ಸಂಪರ್ಕ ಮಾಡಿ ತಮ್ಮ ಉದ್ದೇಶವನ್ನು ತಿಳಿಸಿ ಊಟ ಮತ್ತು ಮಲಗಲು ಆಶ್ರಯ ಪಡೆಯುತ್ತಿದ್ದಾರೆ. ಕೆಲವೇ ದಿನಗಳಿಂದ ಕರ್ನಾಟಕದ ಸಂಪರ್ಕವನ್ನು ಹೊಂದಿರುವ ನೈನಿಕ ಭಟ್ಯ ಕನ್ನಡ ಕಲಿತಿರುವುದು ಹೆಮ್ಮೆಯ ವಿಚಾರವಾಗಿದೆ.