ಮರ್ಯಾದಾ ಹತ್ಯೆ: ರಾಮನಗರದಲ್ಲಿ ಮಗಳ ಪ್ರೇಮಿಯನ್ನು ಕೊಂದ ತಂದೆ
ರಾಮನಗರ, ಅಕ್ಟೋಬರ್ 9: ಮಗಳನ್ನು ಪ್ರೀತಿ ಮಾಡುತ್ತಿದ್ದ ಅನ್ಯಧರ್ಮದ ಯುವಕನನ್ನು ಹುಡುಗಿಯ ತಂದೆಯೇ ಕೊಲೆ ಮಾಡಿರುವ ಘಟನೆ ರಾಮನಗರದ ಸೋಲೂರು ಸಮೀಪದ ಕಂಕೇನಹಳ್ಳಿ ಲಾಯದ ದರ್ಗಾ ಬಳಿ ನಡೆದಿದೆ.
ನೆಲಮಂಗಲ ಸಮೀಪದ ಮಾಗಡಿ ತಾಲೂಕಿನ ಕಂಕೇನಹಳ್ಳಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನೆಲಮಂಗಲದ ಬಸವನಹಳ್ಳಿ ನಿವಾಸಿ ಲಕ್ಷ್ಮೀಪತಿ (24) ಕೊಲೆಯಾದ ಯುವಕ ಎಂದು ತಿಳಿದುಬಂದಿದೆ. ಮಗಳೊಂದಿಗೆ ಮದುವೆ ಮಾಡಿಕೊಡುವುದಾಗಿ ಆತನನ್ನು ಕರೆಸಿ ಕೈ ಕಾಲು ಕಟ್ಟಿ ಆತನ ಬೆಲ್ಟ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ. ಜೊತೆಗೆ ಮದ್ಯದ ಬಾಟಲಿಯಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ; ಮೈಸೂರಿನಲ್ಲಿ ಮರ್ಯಾದಾ ಹತ್ಯೆ?
ಕಳೆದ ಮೂರು ವರ್ಷಗಳಿಂದ ಲಕ್ಷ್ಮೀಪತಿ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಯ ವಿಷಯ ಹುಡುಗಿಯ ಕುಟುಂಬಸ್ಥರಿಗೆ ತಿಳಿದಿತ್ತು. ಇದಕ್ಕೆ ಯುವತಿ ಮನೆಯಲ್ಲಿ ವಿರೋಧವೂ ವ್ಯಕ್ತವಾಗಿತ್ತು. ಈ ಮುಂಚೆಯೇ ಈ ಪ್ರೇಮಿಗಳು ಎರಡು ಬಾರಿ ಮನೆ ಬಿಟ್ಟು ಓಡಿ ಹೋಗಿದ್ದರು. ಈ ಸಂಗತಿಯಿಂದಾಗಿ ಯುವತಿ ಕುಟುಂಬದವರು ಲಕ್ಷ್ಮಿಪತಿ ಮೇಲೆ ಆಕ್ರೋಶಗೊಂಡು ಕೊಲೆಗೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ಮಂಗಳವಾರ, ಅ.6 ರಂದು ಯುವತಿಯ ಸಂಬಂಧಿಯೊಬ್ಬ ಲಕ್ಷ್ಮೀಪತಿಗೆ ಕರೆ ಮಾಡಿ ಮದುವೆ ವಿಷಯ ಮಾತನಾಡುವುದಾಗಿ ಇಸ್ಲಾಂಪುರದ ಬಸವನಹಳ್ಳಿ ರಸ್ತೆಯ ವೈನ್ ಶಾಪ್ ವೊಂದಕ್ಕೆ ಬರಲು ತಿಳಿಸಿದ್ದಾನೆ. ನಂತರ ಆತನಿಗೆ ಚೆನ್ನಾಗಿ ಮದ್ಯ ಕುಡಿಸಿ ಯುವತಿಯ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿಂದ ಯುವತಿ ತಂದೆ ಹಾಗೂ ಇತರರು ಕಂಕೇನಹಳ್ಳಿ ಬಳಿಯ ಬೆಟ್ಟಕ್ಕೆ ಆತನನ್ನು ಕರೆದೊಯ್ದಿದ್ದಾರೆ. ಅಲ್ಲಿ ಬಲವಂತವಾಗಿ ಮತ್ತಷ್ಟು ಕುಡಿಸಿ ಬೆಲ್ಟ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಲಕ್ಷ್ಮೀಪತಿ ಜೊತೆಗೆ ಬಂದಿದ್ದ ನಟರಾಜ್ ಎಂಬಾತನಿಗೂ ಕೊಲೆ ಬೆದರಿಕೆ ಹಾಕಿ ಕಳುಹಿಸಿದ್ದಾರೆ.
Recommended Video
ಈ ಘಟನೆ ಬಗ್ಗೆ ನಟರಾಜ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾನೆ. ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಸಂಬಂಧ ಇಂದು ಯುವತಿ ತಂದೆ ಹಾಗೂ ಸಿಖಂದರ್ ಎಂಬಾತನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.