ನಾನು ಕಡಿಮೆ ಅಂತರದಿಂದ ಸೋಲಬಹುದು: ಸಿ.ಪಿ.ಯೋಗೇಶ್ವರ್
ರಾಮನಗರ, ಮೇ. 14 : ಡಿ.ಕೆ. ಶಿವಕುಮಾರ್ ಸಹೋದರರ ರಾಜಕೀಯ ತಂತ್ರಗಾರಿಕೆಗೆ ನಾನು ಬಲಿಯಾಗಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಅವರುಗಳ ತಂತ್ರಗಾರಿಕೆ ಫಲಿಸಿದರೆ ನಾನು ಕಡಿಮೆ ಅಂತರದಿಂದ ಸೋಲಬಹುದು ಎಂದು ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಆರೋಪಿಸಿದರು.
ಚನ್ನಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಇಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ ಅವರು ವಿರೋಧ ಪಕ್ಷಗಳು ನನ್ನ ಸೋಲಿಗೆ ಬಹಳ ತಂತ್ರಗಾರಿಕೆ ನಡೆಸಿದ್ದಾರೆ. ನನಗೆ ಕುಮಾರಸ್ವಾಮಿಗೆ ನೇರ ಸ್ಪರ್ಧೆ ನಡೆದಿದೆ. ಆದರೆ ಚನ್ನಪಟ್ಟಣ ಕ್ಷೇತ್ರದ ಚುನಾವಣೆಯಲ್ಲಿ ಡಿಕೆಶಿ ಹಣದ ಹೊಳೆ ಹರಿಸಿದ್ದಾರೆ.
ಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಚನ್ನಪಟ್ಟಣದಲ್ಲಿ ಎಚ್ಡಿಕೆ ಜಯಭೇರಿ
ಶಿವಕುಮಾರ್ ಕಪ್ಪು ಹಣ ನನ್ನ ಸೊಲಿಗೆ ಕಾರಣವಾಗಲಿದೆ. ಮತದಾರರಿಗೆ ಹಣದ ಅಮೀಷ ಒಡ್ಡಿದ್ದಾರೆ. ಲಕ್ಷಾಂತರ ಹಣ ಕೊಟ್ಟು ನಮ್ಮ ಮುಖಂಡರನ್ನ ಖರೀದಿ ಮಾಡಿದ್ದಾರೆ ಎಂದು ಆರೋಪಿಸಿದರು. ಕಳೆದ ಬಾರಿ ಚುನಾವಣೆಯಲ್ಲಿ ನನಗೆ ಮತ್ತು ಅನಿತಾ ಕುಮಾರಸ್ವಾಮಿ ಅವರಿಗೆ ನೇರ ಸ್ಪರ್ಧೆ ಏರ್ಪಡಿಸಲಾಗಿತ್ತು.
ಅದರೆ ಇಂದು ತ್ರಿಕೋನ ಸ್ಪರ್ಧೆ ಇದೆ. ನನ್ನ ಮತ್ತು ಎಚ್ ಡಿಕೆ ನಡುವೆ ಪ್ರಭಾವಿ ಸಾರಿಗೆ ಸಚಿವರನ್ನು ನಿಲ್ಲಿಸಿ ಅವರ ಜಾತಿ, ಸಮಾಜವನ್ನು ಮುಂದೆ ಮಾಡಿ ಅವರ ಹಿಂದೆ ಕೆಲಸ ಮಾಡಿದ ಮೂರನೇ ಶಕ್ತಿ ಇರುವುದರಿಂದ ನನ್ನ ಅಂತರ ಕುಸಿದಿದೆ.
ಡಿಕೆಶಿ ಮತ್ತು ಎಚ್ ಡಿಕೆ ಎರಡು ಶಕ್ತಿಗಳು ನನ್ನ ವಿರುದ್ಧ ಕೆಲಸಮಾಡಿ ಈ ಹಿನ್ನಲೆಯಲ್ಲಿ ನನ್ನ ಗೆಲವು ಕಷ್ಟ್ ಎಂದರು. ಕೆಪಿಎಸ್ ಸಿ ಸದಸ್ಯ ರಘುನಂದನ್ ರಾಮಣ್ಣ ಚನ್ನಪಟ್ಟಣದಲ್ಲಿ ವಾಸ್ತವ್ಯಮಾಡಿ ಹಣ ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ನಮ್ಮಲ್ಲಿ ಹಲವು ದಾಖಲೆಗಳಿವೆ ಮತ್ತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ: ಟಾರೋ ರೀಡಿಂಗ್
ಮುಂದಿನ ದಿನಗಳಲ್ಲಿ ಹಲವು ಚುನಾವಣೆಗಳು ಬರುತ್ತವೆ. ನನಗೆ ಹಲವು ಅವಕಾಶಗಳಿವೆ. ಅಭಿವೃದ್ಧಿ ವಿಚಾರದಲ್ಲಿ ಡಿಕೆಶಿಗೆ ಸವಾಲು ಕೊಡುತ್ತೇನೆ ಹಣದಲ್ಲಿ ಅವರಿಗೆ ಸವಾಲು ಕೊಡಲು ಸಾಧ್ಯವಿಲ್ಲ. ಒಕ್ಕಲಿಗ ನಾಯಕತ್ವವನ್ನು ಜೆಡಿಎಸ್ ವರಿಷ್ಠ ರು ಗುತ್ತಿಗೆ ಪಡೆದುಕೊಂಡಿದ್ದಾರೆ.
ಇನ್ನು ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣ ಮತ್ತು ರಾಮನಗರ ಎರಡು ಕ್ಷೇತ್ರದಲ್ಲಿ ಗೆಲವು ಸಾಧಿಸಿ ರಾಮನಗರ ಕ್ಷೇತ್ರಕ್ಕೆ ರಾಜಿನಾಮೆ ನೀಡಿದ್ರೆ, ನಾನು ಮತ್ತೆ ರಾಮನಗರದಲ್ಲಿ ಎಚ್ ಡಿಕೆ ವಿರುದ್ಧ ಸ್ಪರ್ಧೆ ಮಾಡಲು ಸಿದ್ಧ. ಅಂತಹ ಸಂದರ್ಭ ಎದುರಾದರೆ ಪಕ್ಷದ ವರಿಷ್ಠರಿಗೆ ಮನವೊಲಿಸಿ ಟಿಕೆಟ್ ಪಡೆದು ಸ್ಪರ್ಧೆ ಮಾಡುತ್ತೇನೆ ಎಂದರು.