'ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮಾತ್ರ ಚುನಾವಣೆಗೆ ನಿಲ್ಲಲಿ ನೋಡೋಣ'
Recommended Video
ರಾಮನಗರ, ಏಪ್ರಿಲ್ 5 : ಕುಮಾರಸ್ವಾಮಿ ಅವರು ಚನ್ನಪಟ್ಟಣ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿ. ಅವರ ಸ್ಪರ್ಧೆಯನ್ನು ನಾನು ಸ್ವಾಗತಿಸುತ್ತೇನೆ ಎನ್ನುವ ಮೂಲಕ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಸವಾಲು ಹಾಕಿದ್ದಾರೆ.
ರಾಮನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಯೋಗೇಶ್ವರ್, ಮಾಜಿ ಪ್ರಧಾನಿ ದೇವೇಗೌಡರ ಹಿರಿತನಕ್ಕೆ ಗೌರವ ಕೊಡುತ್ತೇನೆ. ಆದರೆ ಕ್ಷೇತ್ರದಲ್ಲಿ ನಾನು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಅವರು ಹಾಗೂ ಕುಮಾರಸ್ವಾಮಿ ಜನರಿಗೆ ತಪ್ಪು ಸಂದೇಶ ಕೊಡುತ್ತಿರುವುದು ಅಸಹ್ಯ ಎನಿಸುತ್ತದೆ ಎಂದರು.
ಇಷ್ಟು ಕಾಲ ಚನ್ನಪಟ್ಟಣ ಕ್ಷೇತ್ರದಲ್ಲಿ ಯಾರೊಬ್ಬರೂ ನೀರಾವರಿ ಯೋಜನೆ ಮಾಡುವ ಮನಸ್ಸು ಮಾಡಿರಲಿಲ್ಲ. ಆದರೆ ನಾನು ಮಾಡಿರುವ ನೀರಾವರಿ ಯೋಜನೆ ನೋಡಿ, ಅದರ ಹೆಸರಲ್ಲಿ ತಾವು ಅನುಕೂಲ ಪಡೆಯಲು ಎಲ್ಲರೂ ಮುಂದಾಗಿದ್ದಾರೆ ಎಂದು ಟೀಕಿಸಿದರು.
ಚನ್ನಪಟ್ಟಣದ ಜನ ಹಾಲನ್ನಾದರೂ ನೀಡಿ, ವಿಷವನ್ನಾದರೂ ಕೊಡಿ: ಎಚ್ ಡಿಕೆ
ಕುಮಾರಸ್ವಾಮಿ ಅವರು ನನ್ನ ಮೇಲೆ ಆರೋಪ ಮಾಡುತ್ತಾರೆ. "ಮೂವತ್ತು ಕೋಟಿ ಕೊಡ್ತೀನಿ, ನನ್ನ ವಿರುದ್ಧ ಡಮ್ಮಿ ಕ್ಯಾಂಡಿಡೇಟ್ ಹಾಕಿಕೊಡಿ" ಎಂದು ಯೋಗೇಶ್ವರ್ ಹೇಳ್ತಾರೆ ಎನ್ನುತ್ತಾರೆ. ಆದರೆ ಇದು ಶುದ್ಧ ಸುಳ್ಳು. ನಾನೇಕೆ ಕುಮಾರಸ್ವಾಮಿಗೆ ಹಣಕೊಡಲಿ? ಈ ಆರೋಪವನ್ನು ದಾಖಲೆ ಸಮೇತವಾಗಿ ಸಾಬೀತುಪಡಿಸಲಿ ಎಂದರು.
ದೇವೇಗೌಡರು- ಕುಮಾರಸ್ವಾಮಿ ಎಮೋಷನಲ್ ಬ್ಲ್ಯಾಕ್ ಮೇಲ್
ನಾನು ಎಂದೂ ಜೆಡಿಎಸ್ ಜೊತೆ ಹೊಂದಾಣಿಕೆ ರಾಜಕೀಯ ಮಾಡಿಲ್ಲ. ಇನ್ನು ಕುಮಾರಸ್ವಾಮಿ ಹಾಗೂ ದೇವೇಗೌಡರು ಚನ್ನಪಟ್ಟಣಕ್ಕೆ ಬಂದು ಎಮೋಷನಲ್ ಬ್ಲಾಕ್ಮೇಲ್ ಮಾಡ್ತಾರೆ. "ನನಗೆ ವಿಷವಾದರೂ ಕೊಡಿ, ಹಾಲನ್ನಾದರೂ ಕೊಡಿ" ಎನ್ನುತ್ತಾರೆ ಕುಮಾರಸ್ವಾಮಿ. ಆದರೆ ಇದೆಲ್ಲವೂ ಚನ್ನಪಟ್ಟಣದಲ್ಲಿ ನಡೆಯಲ್ಲ ಎಂದರು.
ಚಿಕ್ಕಬಳ್ಳಾಪುರ ಎಷ್ಟನೇ ಕಣ್ಣು?
ಚನ್ನಪಟ್ಟಣ ಹಾಗೂ ರಾಮನಗರ ನನ್ನ ಎರಡು ಕಣ್ಣು ಎನ್ನುತ್ತಾರೆ. ಆದರೆ ಚಿಕ್ಕಬಳ್ಳಾಪುರ ಅವರ ಎಷ್ಟನೇ ಕಣ್ಣು ಎಂದು ಕುಟುಕಿದರು. ನಾನು ಮಾಡಿದ ನೀರಾವರಿ ಯೋಜನೆ ಬಗ್ಗೆ ಕುಮಾರಸ್ವಾಮಿ ಟೀಕೆ ಮಾಡುತ್ತಾರೆ. ಆದರೆ ಅವರು ಮುಖ್ಯಮಂತ್ರಿ ಆಗಿದ್ದಾಗ ರಾಮನಗರ ಕ್ಷೇತ್ರಕ್ಕೆ ನೀರಾವರಿ ಯೋಜನೆಯನ್ನು ಯಾಕೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು.
ಜೆಡಿಎಸ್ ಪಕ್ಷಕ್ಕೆ ಇಪ್ಪತ್ತೈದು ಸ್ಥಾನಗಳಷ್ಟೆ
ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇಪ್ಪತ್ತೈದು ಸ್ಥಾನಗಳಷ್ಟೆ ಜೆಡಿಎಸ್ ಪಕ್ಷಕ್ಕೆ ಬರೋದು ಎಂದು ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದಾರೆ. ಅವರ ಮಾತಿಗೆ ನಾನು ಸಮ್ಮತಿ ಸೂಚಿಸುತ್ತೇನೆ. ಅವರ ಅನುಭವದ ಅಧಾರದ ಮೇಲೆ ಹೇಳಿದ್ದಾರೆ. ಅವರ ಮಾತು ಸತ್ಯವಾಗಲಿದೆ ಎಂದರು.
ಕುಮಾರಸ್ವಾಮಿ ಗೆಸ್ಟ್ ಲೆಕ್ಚರರ್ ಥರ ಬರ್ತಾರೆ
ಚನ್ನಪಟ್ಟಣ ಕ್ಷೇತ್ರಕ್ಕೆ ಸದಾ ಜನರೊಂದಿಗಿರುವ ಜನನಾಯಕ ಬೇಕು. ಆದರೆ ಕುಮಾರಸ್ವಾಮಿ ರೀತಿ ವರ್ಷಕ್ಕೊಮ್ಮೆ ಗೆಸ್ಟ್ ಲೆಕ್ಚೆರರ್ ರೀತಿ ಬರುವ ಶಾಸಕ ಬೇಕಾಗಿಲ್ಲ ಎಂದು ವ್ಯಂಗ್ಯವಾಡಿದರು. ರಾಮನಗರ ಕ್ಷೇತ್ರದ ಜನತೆ ಹತ್ತು ವರ್ಷಗಳಿಂದಲೂ ಕುಮಾರಸ್ವಾಮಿಗೆ ಗುಲಾಮರಾಗಿದ್ದಾರೆ. ಚನ್ನಪಟ್ಟಣದ ಜೆಡಿಎಸ್ ಮುಖಂಡರ ಬಗ್ಗೆಯೂ ಕುಮಾರಸ್ವಾಮಿ ಹಾಗೂ ದೇವೇಗೌಡರ ಮನಸ್ಸಿನಲ್ಲಿ ಗೌರವವಿಲ್ಲ ಎಂದರು.